ಬೆಂಗಳೂರು
ಮೀನುಗಾರ ಸಮುದಾಯದ ಸಮಸ್ಯೆಗಳ ಪರಿಹಾರಕ್ಕಾಗಿ ವಿಶ್ವ ಮೀನುಗಾರಿಕೆ ದಿನಾಚರಣೆ ದಿನವೇ 150 ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳ ಸೇವೆಗೆ ರಾಜ್ಯಸರ್ಕಾರದಿಂದ ಚಾಲನೆ ನೀಡಲಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವುದು ಹಾಗೂ ಮನೆ ಬಾಗಿಲಿಗೆ ತಾಜಾ ಮೀನು ತಲುಪಿಸುವ ಉದ್ದೇಶದಿಂದ ಸರ್ಕಾರ ಮತ್ಸ್ಯವಾಹಿನಿ ವಾಹನ ಆರಂಭಿಸಿದೆ. ಸದ್ಯ 150 ವಾಹನ ಸೇವೆಯನ್ನು ಮೀನುಗಾರಿಕಾ ಇಲಾಖೆ ಆರಂಭಿಸಿದ್ದು, ಮುಂದೆ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ.
ಈ ನೂತನ ಯೋಜನೆಯ ಪ್ರಕಾರ, ಈ 150 ಮತ್ಸ್ಯವಾಹಿನಿ ವಾಹನಗಳು ಬೆಂಗಳೂರು ನಗರದಲ್ಲಿ ಸಂಚರಿಸಲಿದ್ದು, ಬೆಳಗ್ಗೆ ತಾಜಾ ಮೀನು, ಸಂಜೆ ಮೀನು ಖಾದ್ಯಗಳ ಮಾರಾಟ ಮಾಡಲಾಗುತ್ತದೆ. ವಾಹನ ಭದ್ರತಾ ಠೇವಣಿ 2 ಲಕ್ಷ ರೂ ಹಾಗೂ ಮಾಸಿಕ 3000 ರೂ. ಬಾಡಿಗೆಯನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ.
ಬ್ಯಾಟರಿ ಚಾಲಿತ ತ್ರಿಚಕ್ರ ವಾಹನದಲ್ಲಿ ಮೀನು ಖಾದ್ಯ ಮಾಡುವ ವ್ಯವಸ್ಥೆ ಕೂಡ ಇದ್ದು, ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಿಗೆ 150 ವಾಹನಗಳನ್ನು ಸರ್ಕಾರ ವಿತರಿಸುವ ಸಾಧ್ಯತೆ ಇದೆ.
ಮೀನಿನ ಸಂತತಿ ಮತ್ತು ಪ್ರಮಾಣವನ್ನು ಹೆಚ್ಚಿಸಲು ನಮ್ಮ ಸರ್ಕಾರ ಎಲ್ಲ ಅಗತ್ಯ ನೆರವನ್ನೂ ನೀಡುತ್ತದೆ ಎಂದರಲ್ಲದೇ, ಮೀನುಗಾರ ಸಮುದಾಯದ ಮಹಿಳೆಯರಿಗೆ ನೀಡಲಾಗುತ್ತಿದ್ದ 50 ಸಾವಿರ ರೂ. ಸಹಾಯ ಧನವನ್ನು 3 ಲಕ್ಷಕ್ಕೆ ಏರಿಸಿದ್ದು ನಮ್ಮ ಸರ್ಕಾರ. ಮುಂದಿನ ವರ್ಷದಿಂದ ಮೀನುಗಾರ ಸಮುದಾಯಕ್ಕೆ ಮನೆ ಕಟ್ಟಿಸಿಕೊಡುವ ಕೆಲಸ ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇನ್ನು ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಮೀನನ್ನು ನಾವು ದೇವರ ಸ್ವರೂಪ ಎಂದು ಕರೆಯುತ್ತೇವೆ. ಶ್ರೀಮನ್ ನಾರಾಯಣನಿಗೆ ಮೀನನ್ನು ಹೋಲಿಸುತ್ತೇವೆ. ನಾವು ಚುನಾವಣೆಗೆ ಮುಂಚಿತವಾಗಿ ಮೀನುಗಾರಿಕಾ ಸಮುದಾಯಕ್ಕೆ ಸಾಕಷ್ಟು ಭರವಸೆ ನೀಡಿದ್ದೆವು ಅವನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ ಅವರು ಸರ್ಕಾರದ ಸಹಕಾರ ಪಡೆದು ಸಮುದಾಯದವರಿಗೆ ಸಾಕಷ್ಟು ಸೌಲಭ್ಯಗಳನ್ನು ತಲುಪಿಸುತ್ತಿದ್ದಾರೆ. ಬರೀ ಸಮುದ್ರದಲ್ಲೇ ಮೀನುಗಾರಿಕೆ ಮಾಡುವುದಕ್ಕಿಂತ ಸಿಹಿ ನೀರಿನ ಮೀನುಗಾರಿಕೆ ಮಾಡಲು ಸಮುದಾಯದವರು ಮುಂದಾಗಬೇಕು. ಸರ್ಕಾರ ಈಗಾಗಲೇ ಏತ ನೀರಾವರಿ ಮೂಲಕ ಸಾಕಷ್ಟು ಕೆರೆಗಳನ್ನು ತುಂಬಿಸಿದ್ದು ಹರಾಜಿನ ಮೂಲಕ ಹಂಚಿಕೆ ಮಾಡಲಾಗುವುದು.
ಎಳೆಯ ಪ್ರಾಯದಲ್ಲಿ ನಾನು ಕೂಡ ನಮ್ಮೂರಿನ ಬಳಿಯ ಸಂಗಮದಲ್ಲಿ ಮೀನು ಹಿಡಿಯಲು ಹೋಗುತ್ತಿದ್ದೆ. ಗಾಳ ಹಾಕಿ ತಾಸುಗಟ್ಟಲೆ ಕುಳಿತುಕೊಳ್ಳಲು ತಾಳ್ಮೆ ಬೇಕು. ಮಹಶೀರ್ ಮೀನು ಹಿಡಿದು ಕೆರೆಯಲ್ಲಿ ವಾಪಸ್ ಬಿಡಲು ಆಗ ಹೊರದೇಶದಿಂದಲೂ ಬರುತ್ತಿದ್ದರು. ಮೀನುಗಾರಿಕಾ ಸಮುದಾಯದವರೂ ಕೂಡ ಉತ್ತಮ ತಳಿಗಳನ್ನು ತಂದು ಸಾಕಿ ಲಾಭ ಮಾಡಬೇಕು ಎಂದು ತಿಳಿಸಿದರು.
