ಬೆಂಗಳೂರು:
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ ವೃದ್ಧ ದಂಪತಿಯಿಂದ ರೂ. 4.79 ಕೋಟಿ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಈಶ್ವರ್ ಸಿಂಗ್ ಮತ್ತು ನಾರಾಯಣ್ ಸಿಂಗ್ ಚೌಧರಿ ಎಂದು ಗುರುತಿಸಲಾಗಿದೆ. ಜೆಪಿ ನಗರದಲ್ಲಿ ವಾಸಿಸುವ ಸಂತ್ರಸ್ತ ದಂಪತಿಗಳನ್ನು ಮಾರ್ಚ್ 19 ರಿಂದ ಮೇ 15 ರವರೆಗೆ ಸುಮಾರು ಮೂರು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ನಲ್ಲಿ ಇರಿಸಲಾಗಿತ್ತು.
ದೂರುದಾರರಾದ ಮಂಜುನಾಥ್ (77) ನೈಜೀರಿಯಾದಲ್ಲಿ 31 ವರ್ಷಗಳಿಂದ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಅವರಿಬ್ಬರ ಮಕ್ಕಳು ಮದುವೆಯ ನಂತರ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ತರಿಗೆ ಕರೆ ಮಾಡಿದ್ದ ಸೈಬರ್ ವಂಚಕರು, ನಿಮ್ಮ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಆಗುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದರು. ಅಲ್ಲದೇ, ನಕಲಿ ಬಂಧನ ವಾರೆಂಟ್ ಪ್ರತಿ ಕಳುಹಿಸಿ, ಬಂಧನದಿಂದ ತಪ್ಪಿಸಿಕೊಳ್ಳಲು ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಒತ್ತಡ ಹಾಕಿದ್ದರು. ಇದರಿಂದ ಬೆದರಿದ ಸಂತ್ರಸ್ತರು
ವಂಚಕರಾದ ಈಶ್ವರ್ ಖಾತೆಗೆ ರೂ. 10 ಲಕ್ಷ ಹಾಗೂ ನಾರಾಯಣ್ ಖಾತೆಗೆ 1.8 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಅವರ ಬ್ಯಾಂಕ್ ವಿವರಗಳನ್ನು ಬಳಸಿಕೊಂಡು ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
“ವೃದ್ಧ ದಂಪತಿಗಳು ದಕ್ಷಿಣ ವಿಭಾಗದಲ್ಲಿ ನೆಲೆಸಿದ್ದರೂ ಸುಳಿವು ಆಧರಿಸಿ ಅವರನ್ನು ರಕ್ಷಿಸಲಾಗಿದೆ. ಆರೋಪಿಗಳು ಶ್ರೀಲಂಕಾದ ಕ್ಯಾಸಿನೊದಲ್ಲಿದ್ದಾರೆ ಎಂಬ ಮಾಹಿತಿಯ ಮೇರೆಗೆ ಅವರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಿ ಬಂಧಿಸಲಾಗಿದೆ. ಡಿಜಿಟಲ್ ಬಂಧನದ ಬಗ್ಗೆ ಸಂತ್ರಸ್ತರು ತಮ್ಮ ಮಕ್ಕಳಿಗೆ ತಿಳಿಸಿಲ್ಲ. ಪ್ರಕರಣ ಇನ್ನೂ ತನಿಖೆಯಲ್ಲಿದೆ. ಆರೋಪಿಗಳಿಂದ ಹೆಚ್ಚಿನ ವಿವರಗಳನ್ನು ಸಂಗ್ರಹಿಸಬೇಕಾಗಿದೆ,” ಎಂದು ಡಿಸಿಪಿ ಸಾರಾ ಫಾತಿಮಾ ಹೇಳಿದರು.
ಆರೋಪಿಗಳು ಸುಲಿಗೆ ಮಾಡಿದ ಹಣವನ್ನು ಶ್ರೀಲಂಕಾದ ಕ್ಯಾಸಿನೊದಲ್ಲಿ ಮೋಜು-ಮಸ್ತಿಯಲ್ಲಿ ಕಳೆಯುತ್ತಿದ್ದರು. ಮೇ ತಿಂಗಳಲ್ಲಿ ದೂರು ದಾಖಲಾಗಿತ್ತು. ಸೈಬರ್ ವಂಚಕರು ಸಂತ್ರಸ್ತರ ಆಸ್ತಿ ದಾಖಲೆಗಳ ನಕಲು ಪ್ರತಿಗಳನ್ನು ಸಹ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
