ಹರಪನಹಳ್ಳಿ:
ಪಟ್ಟಣದಲ್ಲಿ 40 ಕಡೆಗಳಲ್ಲಿ ವಿವಿಧ ಸಂಘ, ಸಂಸ್ಥೆಗಳು ಗಣೇಶನ ಪ್ರತಿಷ್ಠಾಪಿಸುತ್ತಿರುವುದನ್ನು ನಿಲ್ಲಿಸಿ ಒಂದು ಕಡೆ ಗಣಪತಿ ಪ್ರತಿಷ್ಠಾಪನೆ ಮಾಡುವ ಮೂಲಕ ವಿಜೃಂಭಣೆಯಿಂದ ಗಣಪತಿ ಹಬ್ಬ ಆಚರಿಸುವುದು ಸೂಕ್ತ ಎಂದು ಪಿಎಸ್ಐ ಉಮೇಶ್ ಹೇಳಿದರು.
ಪಟ್ಟಣದ ಪೋಲಿಸ್ಠಾಣೆಯಲ್ಲಿ ಶನಿವಾರ ಸಂಘ, ಸಂಸ್ಥೆಗಳ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಗಣೇಶನ ಹಬ್ಬವನ್ನು ಶಾಂತಿ ಹಾಗೂ ಅದ್ದೂರಿಯಾಗಿ ಆಚರಿಸಬೇಕು ಇದಕ್ಕೆ ಸಂಘ, ಸಂಸ್ಥೆಯ ಕಾರ್ಯಕರ್ತರು, ಮುಖಂಡರು ಒಗ್ಗೂಡಿ ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಒಂದೇ ಗಣಪತಿ ಎನ್ನುವ ರೀತಿಯಲ್ಲಿ ಆಚರಿಸಲು ಪ್ರಯತ್ನಿಸಬೇಕು ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಪ್ರತಿವರ್ಷ ಗಣೇಶ ಮೂರ್ತಿ ಸ್ಥಾಪಿಸುವವರು ಅವರವರ ವಾರ್ಡಗಳಲ್ಲಿ, ಏರಿಯಾಗಳಲ್ಲಿ ಮೂರ್ತಿ ಸ್ಥಾಪನೆಯಿಂದ ವಿಸರ್ಜನೆವರೆಗೂ ಅವರೇ ಜವಾಬ್ದಾರಿವಹಿಸಿ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಎಚ್ಚರಿಕೆವಹಿಸಬೇಕು ಎಂದ ಅವರು ಮೂರು, ಐದು ಹಾಗೂ ಹನ್ನೊಂದು ದಿನಗಳ ಕಾಲ ಮೂರ್ತಿ ಪ್ರತಿಸ್ಥಾಪಿಸುವವರು ಎಲ್ಲಾ ರೀತಿಯ ಕಾರ್ಯಕ್ರಮಗಳ ವಿವರಗಳನ್ನು ಪೋಲಿಸ್ ಇಲಾಖೆಗೆ ವರದಿ ನೀಡಿ ಅನುಮತಿ ಪಡೆದುಕೊಳ್ಳಬೇಕು ಹಾಗೂ ಗಣೇಶ ವಿಸರ್ಜನೆ ವೇಳೆ ರಸ್ತೆ ಮಾರ್ಗ ಸೂಚಿಸಿದರೆ ಸೂಕ್ತ ಬಂದೋಬಸ್ತ ಏರ್ಪಡಿಸಲು ಅನುಕೂಲವಾಗುತ್ತದೆ ಎಂದರು.
ಪ್ರತಿನಿತ್ಯ ಎರಡು ಬೀಟ್ಗಳಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಹಬ್ಬ, ಹರಿದಿನಗಳಲ್ಲಿ ಹೆಚ್ಚುವರಿಯಾಗಿ ಎರಡು ಸೇರಿ ಒಟ್ಟು ನಾಲ್ಕು ಬೀಟ್ಗಳ ಸಿಬ್ಬಂಧಿಗಳ ತಂಡ ಸೂಕ್ತ ಶಾಂತಿ ಮತ್ತು ಭದ್ರತೆಗೆ ಗಮನ ಹರಿಸಲಾಗುವುದು ಇದಕ್ಕೆ ಪ್ರತಿಯೋಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಅಧಿಕಾರಿ ರತನ್ಸಿಂಗ್, ಶ್ರೀ ಕೋಟೆ ಆಂಜನೇಯ ಹಿಂದು ಮಹಾಗಣಪತಿ ವೇದಿಕೆ, ಗೋಕರ್ಣೇಶ್ವರ ಸಂಘ, ವಾಲ್ಮೀಕಿ ನಗರದ ಸಂಘ, ಸಾಳೇರ್ಓಣಿ, ಅಂಬೇಡ್ಕರ ಸಂಘ, ಬಾಪೂಜಿ ನಗರ, ಮೇಗಳಪೇಟೆ, ಕರುಬಗೇರಿ, ಮಟ್ಟಿರ್ ಓಣಿ ಗಣಪತಿ ಸಮಿತಿಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
