ಬೆಂಗಳೂರು:
ಮೇಕೆದಾಟು ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕಾಂಗ್ರೆಸ್ನಿಂದ ಎರಡನೇ ಹಂತದ ಪಾದಯಾತ್ರೆ ಆರಂಭವಾಗಿದೆ.
ರಾಮನಗರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೆವಾಲ ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಮುಖಂಡರುಗಳಾದ ಎಚ್.ಕೆ. ಪಾಟೀಲ್, ಎಂ.ಬಿ ಪಾಟೀಲ್, ಸಲೀಂ ಅಹ್ಮದ್, ಈಶ್ವರ ಖಂಡ್ರೆ, ಡಿ.ಕೆ. ಸುರೇಶ್ ಮತ್ತಿತರರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಕಳೆದ ತಿಂಗಳು ಕೊರೋನಾ 3ನೆ ಅಲೆ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಕಾಂಗ್ರೆಸ್ನ ಈ ಮೇಕೆದಾಟು ಪಾದಯಾತ್ರೆ ರಾಮನಗರದಿಂದ ಪುನರಾರಂಭಗೊಂಡಿದ್ದು, ನೂರಾರು ಕಾರ್ಯಕರ್ತರು ರಾಮನಗರದಿಂದ ಬೆಂಗಳೂರಿನತ್ತ ಹೆಜ್ಜೆ ಹಾಕಿದರು.
ಕಳೆದ ತಿಂಗಳು ಕನಕಪುರದ ಕೂಡಲಸಂಗಮದಿಂದ ಆರಂಭವಾಗಿದ್ದ ಮೇಕೆದಾಟು ಪಾದಯಾತ್ರೆ 4 ದಿನಗಳ ನಂತರ ಕೊರೊನಾ 3ನೆ ಅಲೆ ಕಾರಣದಿಂದ ರಾಮನಗರದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಭಾನುವಾರ ರಾಮನಗರದಿಂದಲೇ ಪಾದಯಾತ್ರೆ ಪುನರಾರಂಭಗೊಂಡಿದ್ದು, ಮಾ. 3 ರಂದು ಬೆಂಗಳೂರಿನಲ್ಲಿ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ.
ಪಾದಯಾತ್ರೆ ಆರಂಭಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಮನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಾಮನಗರದ ದರ್ಗಾಕ್ಕೂ ತೆರಳಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಜೊತೆಗೆ ಕೆಂಗಲ್ ಸ್ಮಾರಕ ಸ್ಥಳಕ್ಕೂ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.
ರಣದೀಪ್ ಸಿಂಗ್ ಸುರ್ಜೆವಾಲ ಮಾತನಾಡಿ, ಇದು ಐತಿಹಾಸಿಕ ದಿನ. ಕಾವೇರಿ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಯೋಜನೆ ಜಾರಿಗೆ ಅಡ್ಡಿಯಾಗಿದೆ. ಆದರೆ ಕಾವೇರಿ ಮಾತೆಯ ಆಶೀರ್ವಾದ ಇದ್ದು, ಜನರ ಆಶೀರ್ವಾದದಿಂದ ಯೋಜನೆ ಜಾರಿಯಾಗಲಿದೆ ಎಂದರು.
ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ತನ್ನ ತಪ್ಪು ಮುಚ್ಚಿಕೊಳ್ಳಲು ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದು, ಯೋಜನೆ ಜಾರಿಗೆ ನಿರಪೇಕ್ಷಣಾ ಪತ್ರ ಪಡೆಯಲು ಸಾಧ್ಯವಾಗಿಲ್ಲ ಎಂದು ದೂರಿದರು.
ಮೇಕೆದಾಟು ಪಾದಯಾತ್ರೆ ಪುನರಾರಂಭದ ಮೊದಲ ದಿನವಾದ ಭಾನುವಾರ 16 ಕಿ.ಮೀ. ರಾಮನಗರದಿಂದ ಬಿಡದಿವರೆಗೂ ಪಾದಯಾತ್ರಿಗಳು ನಡೆದು, ಬಿಡದಿಯಲ್ಲಿ ರಾತ್ರಿ ವಾಸ್ತವ್ಯ ಹೂಡಿದರು.
ಮಧ್ಯಾಹ್ನ ಮಾಯಗಾನಹಳ್ಳಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಪಾದಯಾತ್ರೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಾಹನ ದಟ್ಟಣೆಯ ಬಿಸಿ ತಟ್ಟಿತ್ತು.
ಬೆಂಗಳೂರು-ಮೈಸೂರಿಗೆ ತೆರಳುವ ವಾಹನಗಳಿಗೆ ಮಾತ್ರ ಹೆದ್ದಾರಿಯಲ್ಲಿ ಅವಕಾಶ ನೀಡಲಾಗಿದ್ದು, ಮೈಸೂರಿನಿಂದ ಬೆಂಗಳೂರಿಗೆ ಬರುವವರಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ಹಿನ್ನೆಲೆಯಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ವಲಯ ಐಜಿಪಿ ನೇತೃತ್ವದಲ್ಲಿ ಭದ್ರತೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಒಬ್ಬರು ಎಸ್ಪಿ, ಇಬ್ಬರು ಎಎಸ್ಪಿ, 4 ಡಿವೈಎಸ್ಪಿ, 12 ಮಂದಿ ಇನ್ಸ್ಪೆಕ್ಟರ್ಗಳು, 30 ಪಿಎಸ್ಐ, 37 ಎಎಸ್ಐ, 600 ಪೆÇೀಲಿಸ್ ಕಾನ್ಸ್ಟೇಬಲ್ಗಳು, 50 ಮಹಿಳಾ ಕಾನ್ಸ್ಟೇಬಲ್, 100 ಮಂದಿ ಹೋಂಗಾರ್ಡ್ಗಳು, 20 ಕೆಎಸ್ಆರ್ಪಿ ತುಕಡಿ, 12 ಡಿಎಆರ್ ತುಕಡಿ ಸೇರಿದಂತೆ 1,200 ಮಂದಿ ಪೆÇಲೀಸರನ್ನು ನಿಯೋಜಿಸಲಾಗಿದೆ.
2ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
