ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿ : 3 ಸಾವು

ತೆಲಂಗಾಣ
 
   ಸಾತುಪಲ್ಲಿಯಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ ನಿಂತಿದ್ದ ಟ್ರಕ್‌ಗೆ ಅತಿವೇಗದಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಹಾಗೂ 12 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವರದಿಗಳ ಪ್ರಕಾರ ಮೃತರನ್ನು ಶೇಕ್ ಕರಿಮುಲ್ಲಾ (12), ಮದ್ದಿನ ವೇಣು (20) ಮತ್ತು ಬೇತಿ ಸುರೇಶ್ (22) ಎಂದು ಗುರುತಿಸಲಾಗಿದೆ. ಮಾರಣಾಂತಿಕ ಅಪಘಾತದ ಸಮಯದಲ್ಲಿ, ಮೂವರೂ ಗಂಗಾರಾಮ್‌ನಿಂದ ರಾಮ ಗೋವಿಂದಪುರಂ ಗ್ರಾಮಕ್ಕೆ ಹೋಗುತ್ತಿದ್ದರು.

   ಗಂಗಾರಾಮ್ ನಲ್ಲಿರುವ ಶಾಲೆಯಲ್ಲಿನ 6 ನೇ ತರಗತಿಯ ವಿದ್ಯಾರ್ಥಿ ಶೇಕ್ ಕರಿಮುಲ್ಲಾ ಪ್ರತಿದಿನ ಕಾಲ್ನಡಿಗೆಯಲ್ಲಿ ತನ್ನ ಮನೆಗೆ ಹೋಗುತ್ತಿದ್ದ. ಆದರೆ ಅಪಘಾತದ ದಿನ ಮನೆಗೆ ಹಿಂದಿರುಗುವಾಗ ಬೈಕ್‌ನಲ್ಲಿದ್ದ ಇಬ್ಬರಿಗೆ ಲಿಫ್ಟ್ ಕೇಳಿದ್ದು, ದ್ವಿಚಕ್ರ ವಾಹನ ಹತ್ತಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ. ದುರಂತವೆಂದರೆ ವಿದ್ಯಾರ್ಥಿ ಲಿಫ್ಟ್ ಕೇಳಿದ ಸ್ಥಳದಿಂದ ಆತನ ಮನೆ ಕೇವಲ 10 ನಿಮಿಷ ಪ್ರಯಾಣದ ಅಂತರದಲ್ಲಿತ್ತು.

   ಮೂವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ಸದ್ಯಕ್ಕೆ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಟ್ರಕ್ ಚಾಲಕನು ವಾಹನವನ್ನು ರಸ್ತೆಯ ಬದಿಯಲ್ಲಿ ಏಕೆ ನಿಲ್ಲಿಸಿದನು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.