ಬೆಂಗಳೂರು :
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರದಲ್ಲಿ ಹಾಡಹಗಲೇ ಗಾಂಜಾ ಮತ್ತಿನಲ್ಲಿ ಯುವತಿಯೊಬ್ಬರ ಮೈಕೈ ಮುಟ್ಟಿ ಎಳೆದಾಡಿ ಕಿರುಕುಳ ನೀಡಿದ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯ ಮನೆ ಪಕ್ಕದಲ್ಲೇ ವಾಸಿಸುತ್ತಿದ್ದ ಐದರಿಂದ ಆರು ಜನ ಪುಂಡರು ಯವತಿಯ ಮೈಗೆ ಕೈ ಹಾಕಿದ್ದರು. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಾನ್ ರಿಚರ್ಡ್, ಪುನೀತ್ ಅಲಿಯಾಸ್ ಕಾಡೆ, ಅನುಷ್ ಮದನ್, ಅರುಣ್, ಕಾಣಿಕ್ಯಾ ಸ್ವಾಮಿ ಎಂದು ಗುರುತಿಸಲಾಗಿದೆ.
ಹಾಡಹಗಲೇ ಗಾಂಜಾದ ನಶೆ ಏರಿಸಿಕೊಂಡು ತೂರಾಡುತ್ತಿದ್ದ ಯುವಕರು ನಡುಬೀದಿಯಲ್ಲಿ ಅಟ್ಟಹಾಸ ಮೆರೆದಿದ್ದರು. ಅಂಗಡಿಗೆ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದರು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಈ ಕೃತ್ಯ ನಡೆದಿತ್ತು. ಗಾಂಜಾ ಮತ್ತು ಎಣ್ಣೆ ನಶೆಯಲ್ಲಿದ್ದ ಐದರಿಂದ ಆರು ಪುಂಡರ ಗ್ಯಾಂಗ್ ಈ ಕೃತ್ಯ ಎಸಗಿದೆ. ಪ್ರತಿರೋಧ ವ್ಯಕ್ತಪಡಿಸಿದ ಯುವತಿಯ ಮೇಲೆ ಹಲ್ಲೆ ಮಾಡಿದ್ದರು. ಇದನ್ನು ಪ್ರತಿಭಟಿಸಿದ್ದ ಯುವತಿ ಪುಂಡರಿಗೆ ಕಾಲಿನಿಂದ ಒದ್ದು ಪ್ರತಿರೋಧ ತೋರಿದ್ದರು.
ನಂತರ ಅಲ್ಲಿಯೇ ಇದ್ದ ಮನೆಯೊಂದರಲ್ಲಿ ಹೋಗಿ ಸೇರಿಕೊಂಡಿದ್ದರು. ಆದರೆ ಗಾಂಜಾ ನಶೆಯಲ್ಲಿದ್ದ ಆ ಪುಂಡರ ಗ್ಯಾಂಗ್ ಮನೆಗೂ ನುಗ್ಗಿ ಮನೆಯವರಿಗೂ ಅವಾಜ್ ಹಾಕಿತ್ತು. ಈ ಕುರಿತು ಯುವತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರು ಪುಂಡರ ವಿರುದ್ಧ FIR ದಾಖಲಾಗಿದೆ.








