ಬೆಂಗಳೂರು:
ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 50 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ನೈಋತ್ಯ ರೈಲ್ವೆ ಮೂಲಕ ಹಾದುಹೋಗುವ ವಂದೇ ಭಾರತ್ ರೈಲುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದು, ಇದೀಗ ಈ ಪ್ರಕರಣ ಸಂಬಂಧ ಪೊಲೀಸರು 50 ಮಂದಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನಿಂದ ಬೇರೆ ಬೇರೆ ಭಾಗಕ್ಕೆ ಹೋಗುವ ಮೂರು ವಂದೇ ಭಾರತ್ ರೈಲುಗಳ ಮೇಲೆ 50 ಬಾರಿ ಕಲ್ಲು ತೂರಾಟ ಮಾಡಲಾಗಿದೆ. ಹೀಗಾಗಿ ತನಿಖೆ ನಡೆಸಿರುವ ರೈಲ್ವೆ ಪೊಲೀಸರು ಬೆಂಗಳೂರಿನಲ್ಲಿ ಒಟ್ಟು 50 ಜನರನ್ನು ಬಂಧಿಸಿದ್ದಾರೆ. ಕಿಡಿಗೇಡಿಗಳು ನಿತ್ಯ ಒಂದಲ್ಲ ಒಂದು ವಂದೇ ಭಾರತ್ ರೈಲಿಗೆ ಕಲ್ಲು ಎಸೆಯುವುದನ್ನೇ ರೂಢಿ ಮಾಡಿಕೊಂಡಿದ್ದರು. ಇದು ರೈಲ್ವೆ ಇಲಾಖೆಗೆ ಭಾರೀ ನಷ್ಟವನ್ನುಂಟು ಮಾಡಿತ್ತು. ದುಷ್ಕರ್ಮಿಗಳು ಚಲಿಸುವ ರೈಲಿಗಳಿಗೆ ಕಲ್ಲು ಎಸೆದು ಹಾನಿ ಮಾಡುತ್ತಿದ್ದರು.
ಬೆಂಗಳೂರಿನ ನೈಋತ್ಯ ರೈಲ್ವೆ ವಲಯದ ಮೂಲಕ ಹಾದುಹೋಗುವ 2 ವಂದೇ ಭಾರತ್ ರೈಲುಗಳ ಮೇಲೆ ಇತ್ತೀಚೆಗೆ ಮೂರು ಕಡೆ ಪ್ರತ್ಯೇಕವಾಗಿ ಕಲ್ಲು ತೂರಾಟದ ಪ್ರಕರಣಗಳು ನಡೆದಿತ್ತು. ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಮಾ.03 ರಂದು ದುಷ್ಕರ್ಮಿಗಳು ಕಲ್ಲು ತೂರಿದ್ದು, ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿತ್ತು.
ಈ ವರ್ಷವೊಂದರಲ್ಲೇ ವಂದೇ ಭಾರತ್ ರೈಲಿನ ಮೇಲೆ 10 ಬಾರಿ ಕಲ್ಲು ತೂರಾಟ ನಡೆಸಿದ ಪ್ರಕರಣಗಳು ಬೆಳಕಿಗೆ ಬಂದಿತ್ತು. ಕಳೆದ ವರ್ಷ 40 ಕಲ್ಲು ತೂರಾಟ ಪ್ರಕರಣಗಳು ನಡೆದಿದ್ದವು. ಅದೃಷ್ಟವಶಾತ್ ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಆದರೆ, ರೈಲುಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿತ್ತು.
ಸೆಕ್ಷನ್ 147 (ರೈಲ್ವೆ ಹಳಿಯಲ್ಲಿ ಅತಿಕ್ರಮಣ) ಮತ್ತು ಸೆಕ್ಷನ್ 153 (ಉದ್ದೇಶ ಪೂರ್ವಕ ಕ್ರಿಯೆ ಅಥವಾ ಲೋಪದಿಂದ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ಕ್ರಿಮಿನಲ್ ಅಪರಾಧವಾಗಿದೆ. ರೈಲ್ವೇ ಕಾಯ್ದೆ ಸೆಕ್ಷನ್ 153ರ ಅಡಿಯಲ್ಲಿ 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.
