ಚಿತ್ರದುರ್ಗ
ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸುವುದರಲ್ಲಿ ಪುರುಷರ ಸಹಭಾಗಿತ್ವವೂ ಅಗತ್ಯವಾಗಿದ್ದು, ಇದರಿಂದ ಸಹಬಾಳ್ವೆ ಹಾಗೂ ಸಾಮರಸ್ಯ ಮೂಡಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಹೇಳಿದರು.
ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣ ದಲ್ಲಿ ಜಿಲ್ಲೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಗಾರ ಹಾಗೂ ಕುಟುಂಬ ಕಲ್ಯಾಣ ಯೋಜನೆಯ ಮಾಹಿತಿ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬ ಕಲ್ಯಾಣ ಯೋಜನೆ ನಿಭಾಯಿಸುವ ಜಬಾಬ್ದಾರಿಯನ್ನು ಹೆಚ್ಚಾಗಿ ಮಹಿಳೆಯರೇ ವಹಿಸಿಕೊಳ್ಳುವುದು ಸಾರ್ವತ್ರಿಕವಾಗಿದೆ. ಆದರೆ ಇದರಲ್ಲಿ ಪುರುಷರ ಸಹಭಾಗಿತ್ವವೂ ಅಗತ್ಯವಾಗಿದೆ ಎಂದು ಹೇಳಿದ ಡಾ. ಪಾಲಾಕ್ಷ ಅವರು, ತಾಯಿ ಮಕ್ಕಳ ಪರಿಪೂರ್ಣ ತಯಾರಿ, ಕುಟುಂಬ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಪುರುಷರ ಸಹಭಾಗಿತ್ವ ಈ ದಿನಗಳಲ್ಲಿ ಪ್ರಮುಖ ವಿಷಯವಾಗಿದೆ.
ತಾಯಂದಿರ ಮರಣ ನಿಯಂತ್ರಿಸಲು ಸಂಸಾರದಲ್ಲಿ ಸಹಬಾಳ್ವೆ, ಸಾಮರಸ್ಯ ಹಸಿರಾಗಿರಲು ಹೆಚ್ಚು ಪುರುಷರು ಈ ಕುಟುಂಬ ಕಲ್ಯಾಣ ವಿಧಾನಗಳಲ್ಲಿ ಎನ್.ಎಸ್.ವಿ ವಿಧಾನ ಸರಳ, ಸುಲಭ, ನೋವಿಲ್ಲದ, ಹೊಲಿಗೆ ಇಲ್ಲದ ವಿಧಾನವಾಗಿದೆ. ಇದನ್ನು ಅನುಸರಿಸಲು ಪುರುಷರು ಮುಂದೆ ಬರುವಂತೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ತಮ್ಮ ತಮ್ಮ ಕ್ಷೇತ್ರದಲ್ಲಿ ಮನ ಒಲಿಸುವ ಕಾರ್ಯ ಮಾಡಬೇಕು ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾ ಯೋಜನಾಧಿಕಾರಿ ಡಾ.ಸಿ.ಓ.ಸುಧ ಅವರು, ನೂತನ ಗರ್ಭ ನಿರೋಧಕಗಳಾದ ಛಾಯ, ಮಾಲಾ ಎನ್, ಇ.ಸಿ.ಪಿಲ್ಸ್ ನುಂಗುವ ಮತ್ರೆಗಳು, ವಂಕಿ ಇತರೆ ವಿಧಾನಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮುಗಪ್ಪ, ಪೂರ್ಣಿಮ, ಆಶಾ ಬೋಧಕಿ, ಪ್ರಫುಲ್ಲಾ, ಜಿಲ್ಲಾ ನಿರ್ವಾಹಕ ವೀರೆಶ್ ಉಪಸ್ಥಿತರಿದ್ದರು. ತರಬೇತಿ ಕಾರ್ಯಗಾರದಲ್ಲಿ ಜಿಲ್ಲೆಯ ಆರೂ ತಾಲ್ಲೂಕಿನ ಒಟ್ಟು 60 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
