ಮಂಡ್ಯ :
ಬಸ್ಸಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿ ಬಳಿ ನಡೆದಿದೆ.
ಪತಿ ರವಿ (34), ಪತ್ನಿ ಮಂಜುಳಾ (25) ಮತ್ತು ಮಕ್ಕಳಾದ ಸಾಗರ್ (5) ಹಾಗೂ ಸುಕನ್ಯ (8) ಮೃತ ದುರ್ದೈವಿಗಳು. ಮೃತರು ಮಂಡ್ಯ ತಾಲೂಕಿನ ಕೊತ್ತತ್ತಿ ಹೋಬಳಿಯ ಹೆಬ್ಬಕವಾಡಿ ಗ್ರಾಮದವರು ಎಂದು ತಿಳಿದು ಬಂದಿದೆ.
ಕಾರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು. ಕೆಎಸ್ಆರ್ಟಿಸಿ ಬಸ್ ಬೆಂಗಳೂರು ಕಡೆಗೆ ಹೋಗುತ್ತಿತ್ತು. ಈ ಮಧ್ಯೆ ಅಲ್ಲೊಂದು ಕಾರು ಅಪಘಾತವಾಗಿ ನಿಂತಿತ್ತು. ಅದನ್ನು ತಪ್ಪಿಸಲು ಕಾರು ಚಾಲಕ ಪ್ರಯತ್ನಿಸಿದ್ದಾನೆ. ಆಗ ಸ್ವಿಫ್ಟ್ ಕಾರು ಡಿವೈಡರ್ಗೆ ಡಿಕ್ಕಿಯಾಗಿ ಹೆದ್ದಾರಿಯ ಮತ್ತೊಂದು ಕಡೆಗೆ ಹಾರಿದೆ. ಅದೇ ವೇಳೆ ಆಗಮಿಸುತ್ತಿದ್ದ ಬಸ್ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಮಕ್ಕಳ ಜೊತೆ ದಂಪತಿ ಬೆಂಗಳೂರಿನ ವಿಠಲ ನಗರದಲ್ಲಿ ವಾಸವಿದ್ದರು. ಇಂದು ತಮ್ಮ ಗ್ರಾಮಕ್ಕೆ ಕಾರಿನಲ್ಲಿ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಬರುತ್ತಿದ್ದರು ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮಿಮ್ಸ್ ಶವಾಗಾರದ ಬಳಿ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/07/Accident1564222382.gif)