ಬೆಂಗಳೂರು
ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟು ಕೊಡಿಸುವುದಾಗಿ ವಂಚಿಸುತ್ತಿದ್ದ ಜಾಲವನ್ನು ಬೇಧಿಸಿ ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು ಜಾರ್ಖಂಡ್, ಪಶ್ಚಿಮ ಬಂಗಾಳ, ಕೇರಳ ಹಾಗೂ ಬಿಹಾರ ೧೧ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ನೇಹಿಲ್, ಪವನ್ ಕುಮಾರ್, ನಿಶಾಂತ್, ಕುನಾಲ್ ಕುಮಾರ್ ಸಿಂಗ್, ಮುನೀಶ್, ನಿತಿನ್, ಟಿಂಕು ಮಂಡಲ್, ಕೌಶಲ್ ಕುಮಾರ್, ಸೀಜು ಡ್ಯಾನಿಯಲ್, ರಾಹುಲ್ ಸಿಂಗ್, ಅಂಕಿತ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳಾಗಿದ್ದಾರೆಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತರಿಂದ ೧ ಕಾರು, ಕಾಲೇಜುವೊಂದರ ಹೆಸರಿನಲ್ಲಿದ್ದ ೧ ಲಕ್ಷದ ಡಿಡಿ, ಕಮಿಷನ್ ರೂಪದಲ್ಲಿ ಪಡೆದಿದ್ದ ೧ ಲಕ್ಷ ೮೦ ಸಾವಿರ ನಗದು, ೧೧ ಮೊಬೈಲ್ಗಳು ಹಾಗೂ ವಿವಿಧ ಕಾಲೇಜುಗಳ ಪ್ರವೇಶದ ಕುರಿತ ದಾಖಲಾತಿಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಜಾಲದ ಮುಖ್ಯಸ್ಥನಾದ ಸೌರವ್ ರಂಜಿತ್ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಆರೋಪಿಗಳು ಜಾರ್ಖಂಡ್, ಪಶ್ಚಿಮ ಬಂಗಾಳ, ಕೇರಳ ಹಾಗೂ ಬಿಹಾರ ರಾಜ್ಯದವರಾಗಿದ್ದಾರೆ ಆರೋಪಿಗಳು ಕರ್ನಾಟಕದ ವಿವಿಧ ವೈದ್ಯಕೀಯ-ದಂತವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ನಗರದ ಕುಕ್ಟೌನ್ನಲ್ಲಿರುವ ಬಿ.ಆರ್ ಅಂಬೇಡ್ಕರ್ ಮೆಡಿಕಲ್ ಕಾಲೇಜು ಬಳಿ ಮೆರೀಟ್ ವೈಸ್ ಕನ್ಸಲ್ಟೆನ್ಸ್ ಕಚೇರಿ ತೆಗೆದು ಅದರ ಮುಖ್ಯಸ್ಥರುಗಳು ಹಾಗೂ ಏಜೆಂಟರುಗಳು ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ-ದಂತವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಕೊಡಿಸುತ್ತಾರೆ ಎಂಬ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








