ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ;ತಿಪ್ಪಾರೆಡ್ಡಿ

ಚಿತ್ರದುರ್ಗ:

     ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಸುಸಜ್ಜಿತವಾದ ಕಟ್ಟಡ ಇಲ್ಲದಿರುವುದರಿಂದ ನನಗೂ ಅಸಮಾಧಾನವಿದೆ. ಮುಂದಿನ ದಿನಗಳಲ್ಲಿ ಭವ್ಯವಾದ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಕೇಳಿದ್ದೇನೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದರು.

     ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಸೋಮವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ 2019-20 ನೇ ಸಾಲಿನ ಸಾಂಸ್ಕøತಿಕ, ಕ್ರೀಡಾ, ಎನ್.ಎಸ್.ಎಸ್., ಯುವ ರೆಡ್‍ಕ್ರಾಸ್ ರೇಂಜರ್ಸ್ ಹಾಗೂ ಇತರೆ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

     ವಿಶಾಲವಾದ ಕಾಲೇಜು ಜಾಗದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳನ್ನು ಪುರಸ್ಕರಿಸುವುದು ಪದ್ದತಿ. ಕಟ್ಟಡ ಕಾಮಗಾರಿ ಆರಂಭಗೊಂಡು ಐದು ವರ್ಷವಾದರೂ ಇನ್ನು ಪೂರ್ಣಗೊಂಡಿಲ್ಲ. ಹತ್ತು ಕೋಟಿ ರೂ.ಗಳನ್ನು ನೀಡಲಾಗಿದೆ. ಆದರೆ ವಿದ್ಯಾರ್ಥಿನಿಯರಿಗೆ ಅನುಕೂಲವಾಗಿಲ್ಲ. ಹಳೆ ಮಾಧಮಿಕ ಶಾಲಾ ಆವರಣದಲ್ಲಿರುವ ಕಟ್ಟಡವನ್ನು ನಿಮ್ಮ ಕಾಲೇಜಿಗೆ ನೀಡುವಂತೆ ಈ ಹಿಂದೆಯೇ ಕೇಳಿದ್ದೆ. ದುರಂತವೆಂದರೆ ಹಿಂದಿನ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅಡ್ಡಗಾಲಾದರೂ ಎಂದು ಬೇಸರ ವ್ಯಕ್ತಪಡಿಸಿದರು.

    ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ನಗರಕ್ಕೆ ಬಂದಾಗ ಕಾಲೇಜು ಬಿಲ್ಡಿಂಗ್‍ಗಾಗಿ 25 ಕೋಟಿ ರೂ.ಗಳ ಅನುದಾನ ಕೇಳಿದ್ದೇನೆ. ಹಳ್ಳಿಗಾಡಿನಿಂದ ನಗರಕ್ಕೆ ಬರುವ ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆಯಾಗಬಾರದೆನ್ನುವ ಕಾರಣಕ್ಕೆ ಒಳ್ಳೆಯ ಕಟ್ಟಡ ಹಾಗೂ ಹಾಸ್ಟೆಲ್ ನಿರ್ಮಿಸಲಾಗುವುದು. ಇದುವರೆವಿಗೂ ನಿಮ್ಮ ಯಾವ ಪ್ರಾಧ್ಯಾಪಕರು ಕೊಠಿಡಿಯ ಕೊರತೆಯನ್ನು ನನ್ನ ಗಮನಕ್ಕೆ ತರಲಿಲ್ಲ. ಮುಂದೆ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸೋಣ. ನೀವುಗಳು ಮಾತ್ರ ಶಿಕ್ಷಣದ ಕಡೆ ಹೆಚ್ಚಿನ ಒತ್ತು ಕೊಟ್ಟು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.

     ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಮುಂದೆ ಇದ್ದಾರೆ. ಅಮೇರಿಕಾ ಸೇರಿದಂತೆ ಬಲಿಷ್ಟ ದೇಶಗಳ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಭಾರತದ ಯುವಕ/ಯುವತಿಯರು ಮುಂದಿದ್ದಾರೆ. ಅವಕಾಶ ಸಿಕ್ಕರೆ ಪ್ರಪಂಚವನ್ನು ಗೆಲ್ಲುವ ಬುದ್ದಿವಂತ ಯುವ ಪೀಳಿಗೆ ನಮ್ಮ ದೇಶದಲ್ಲಿರುವುದು ಹೆಮ್ಮೆಯ ಸಂಗತಿ. ಕೆಲವು ಪ್ರತಿಭಾವಂತರು ಬಡತನದಿಂದ ಅವಕಾಶ ವಂಚಿತರಾಗುತ್ತಾರೆ.

     ನಮ್ಮ ದೇಶದ ಯುವ ಪೀಳಿಗೆ ಮೇಲೆ ಅಮೇರಿಕಾ ದೇಶದವರಿಗೆ ಗೌರವವಿದೆ. ಮತ್ತೊಬ್ಬರ ಮೇಲೆ ನಮ್ಮ ದೇಶ ಎಂದಿಗೂ ಆಕ್ರಮಣ ಮಾಡಲಿಲ್ಲ. ಬಹಳ ವರ್ಷಗಳ ಹಿಂದೆ ಕೆಲವೇ ಜಾತಿಯವರು ಪಿ.ಹೆಚ್.ಡಿ.ಪದವಿ ಪಡೆಯುತ್ತಿದ್ದರು. ಈಗ ಎಲ್ಲಾ ವರ್ಗದವರು ಪಿ.ಹೆಚ್.ಡಿ.ಪಡೆದುಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಪಿ.ಯು.ಸಿ., ಪದವಿ ಮುಗಿದ ಮೇಲೆ ಮನೆಯಲ್ಲಿ ಕಷ್ಟವಿದೆ ಎಂದು ಕೊರಗಿ ಕೂರುವ ಕಾಲ ಇದಲ್ಲ.

    ಉನ್ನತ ಶಿಕ್ಷಣಕ್ಕೆ ಇಪತ್ತು ಮೂವತ್ತು ಲಕ್ಷ ರೂ.ಗಳನ್ನು ಬ್ಯಾಂಕ್ ಸಾಲ ನೀಡುತ್ತದೆ. ಇದಕ್ಕೆ ಯಾವುದೇ ಗ್ಯಾರೆಂಟಿ ಬೇಕಿಲ್ಲ. ಪ್ರತಿಭಾವಂತ ಮಕ್ಕಳು ಇದರ ಸೌಲಭ್ಯ ಪಡೆದುಕೊಳ್ಳಿ. ಒಂದು ವೇಳೆ ಬ್ಯಾಂಕ್‍ನಲ್ಲಿ ಶಿಕ್ಷಣಕ್ಕೆ ಸಾಲ ಸಿಗದಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

   ಕಳೆದ ಎಪ್ಪತ್ತು ವರ್ಷಗಳಿಂದಲೂ ಜಮ್ಮು-ಕಾಶ್ಮೀರದವರು ಎರಡು ಮೂರು ಲಕ್ಷ ಕೋಟಿ ರೂ.ಗಳನ್ನು ಕೇಂದ್ರದಿಂದ ಪಡೆದುಕೊಂಡು ಮಜಾ ಮಾಡುತ್ತಿದ್ದರು. ಅಲ್ಲಿನ 370 ವಿಧಿ ಹಿಂದಕ್ಕೆ ಪಡೆಯಲು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳಿಗೆ ಆಗಿರಲಿಲ್ಲ. ಮೋದಿರವರು ಎರಡನೆ ಬಾರಿಗೆ ದೇಶದ ಪ್ರಧಾನಿಯಾದ ಕೂಡಲೆ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370 ವಿಧಿಯನ್ನು ರದ್ದುಗೊಳಿಸಿ ದಿಟ್ಟತನದ ತೀರ್ಮಾನತೆಗೆದುಕೊಂಡಿರುವುದು ಸುಲಭವಲ್ಲ. ಇಂತಹ ವಿಚಾರಗಳನ್ನು ನೀವುಗಳು ತಿಳಿದುಕೊಂಡಿರಬೇಕೆಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

      ವಿಶ್ರಾಂತ ಪ್ರಾಂಶುಪಾಲರಾದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡುತ್ತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತ ಶಿಕ್ಷಣ ನೀಡುವ ಹೊಣೆಗಾರಿಕೆ ಪ್ರಾಧ್ಯಾಪಕರು ಹಾಗೂ ಕಾಲೇಜು ಆಡಳಿತ ಮಂಡಳಿಯ ಮುಖ್ಯಸ್ಥರ ಮೇಲಿದೆ. ಕಲಿಸುವವರು ಹಾಗೂ ಕಲಿಯುವವರಿಗೆ ಶ್ರದ್ದೆಯಿಲ್ಲದಿದ್ದರೆ ನಾಳಿನ ಬದುಕು ನಿರ್ಮಾಣ ಮಾಡಿಕೊಳ್ಳಲು ಆಗುವುದಿಲ್ಲವೆಂದರು.

      ನಿರಂತರ ಪಠ್ಯ ಚಟುವಟಿಕೆ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುತ್ತಿದ್ದರೆ ನಿಮ್ಮಲ್ಲಿರುವ ಬಹುಮುಖ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಧ್ಯ. ಕ್ರೀಡೆ, ಎನ್.ಎಸ್.ಎಸ್, ಯುವ ರೆಡ್‍ಕ್ರಾಸ್, ರೇಂಜರ್ಸ್‍ನಿಂದ ವಿದ್ಯಾರ್ಥಿ ದೆಸೆಯಲ್ಲಿಯೇ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ. ದೈಹಿಕ, ಮಾನಸಿಕ, ಸಾಮಾಜಿಕ ಕೌಶಲ್ಯದ ಮೇಲೆ ಆತ್ಮವಿಶ್ವಾಸವಿಟ್ಟುಕೊಂಡರೆ ವ್ಯಕ್ತಿತ್ವ ವಿಕಸನ ಸಬಲೀಕರಣಗೊಳ್ಳುತ್ತದೆ. ಪೋಷಕರ ಮತ್ತು ವಿದ್ಯಾರ್ಥಿಗಳ ಕನಸು ಸಾಕಾರಗೊಳ್ಳಬೇಕಾದರೆ ಶಿಕ್ಷಕರು ಹಾಗೂ ಪ್ರಾಧ್ಯಾಪಕರುಗಳ ಪಾತ್ರ ತುಂಬಾ ಮುಖ್ಯ ಎಂದು ನುಡಿದರು.

     ಸಿ.ಬಿ.ಸಿ.ಎಸ್.ನಲ್ಲಿ ವಿವಿಧ ಚಟುವಟಿಕೆಗಳಿದೆ. ವಿಜ್ಞಾನ-ತಂತ್ರಜ್ಞಾನ ಬೆಳೆದಂತೆಲ್ಲಾ ವಿದ್ಯಾರ್ಥಿಗಳ ಕೈಯಲ್ಲಿ ಸದಾ ಮೊಬೈಲ್ ಹರಿದಾಡುತ್ತಿರುವುದು ಅಪಾಯಕಾರಿ ಸಂಗತಿ. ವಾಟ್ಸ್‍ಪ್, ಫೇಸ್‍ಬುಕ್‍ಗಳಿಂದ ಸಮಯ, ಸಂಪನ್ಮೂಲ ವ್ಯರ್ಥವಾಗುತ್ತಿದೆ ಎನ್ನುವುದನ್ನು ಬಿಟ್ಟರೆ ಭವಿಷ್ಯದ ದೃಷ್ಟಿಯಿಂದ ಯಾವ ಲಾಭವೂ ಇಲ್ಲ. ಅದಕ್ಕೆ ಬದಲಾಗಿ ಪಠ್ಯಪುಸ್ತಕಗಳನ್ನು ಓದಿ ಜೀವನ ಕೌಶಲ್ಯವನ್ನು ವೃದ್ದಿಸಿಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ಹೇಳಿದರು.

     ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಬಿ.ಎಂ.ಲಕ್ಷ್ಮಿನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ಡಿ.ಓ.ಸಿದ್ದಪ್ಪ, ಐ.ಕ್ಯೂ.ಎ.ಸಿ.ಸಂಚಾಲಕಿ ಪ್ರೊ.ಹೆಚ್.ಶಕುಂತಲ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಚಕ್ರವರ್ತಿ, ನವೀನ್‍ಚಾಲುಕ್ಯ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಮೇಘನ ಪ್ರಾರ್ಥಿಸಿದರು. ವಾಣಿಜ್ಯಶಾಸ್ತ್ರ ಮುಖ್ಯಸ್ಥ ಡಿ.ಸಿ.ಚನ್ನಕೇಶವ ಸ್ವಾಗತಿಸಿದರು. ಪ್ರೊ.ಹೆಚ್.ಶಕುಂತಲ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಮಂಜುನಾಥ್ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link