ಚಿಕ್ಕನಾಯಕನಹಳ್ಳಿ

ಪಟ್ಟಣದ ಹಲವು ಕಡೆ ರಾತ್ರಿ ವೇಳೆ ಮನೆಗಳ ಬೀಗ ಮುರಿದು ಕಳ್ಳತನ ನಡೆದಿವೆ ಹಾಗೂ ಗೋಡೆಕೆರೆಯಲ್ಲಿ ರಾತ್ರಿ ವೇಳೆಯಲ್ಲಿ ಮನೆಗಳ ಚಿಲಕ ಹಾಕುವಂತಹ ಕಿಡಿಗೇಡಿ ಉಪಠಳ ಹೆಚ್ಚಾಗಿದೆ, ಪೊಲಿಸರು ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು ಎಂದು ಡಿಎಸ್ಎಸ್ ಮುಖಂಡರು ಒತ್ತಾಯಿಸಿದರು.
ಪಟ್ಟಣದ ಪೊಲಿಸ್ ಠಾಣೆಯಲ್ಲಿ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಒತ್ತಾಯಿಸಿದರು. ದಲಿತ ಮುಖಂಡ ಸಿ.ಎಸ್.ಲಿಂಗದೇವರು ಮಾತನಾಡಿ, ಪಟ್ಟಣದಲ್ಲಿ ಸಿದ್ದೇಶ್ವರ ಮಠದ ಸುತ್ತಾಮುತ್ತಾ, ನಿಂಗನಾಯಕನಹಟ್ಟಿ, ರೇವಣ್ಣಪ್ಪಮಠ ಸೇರಿದಂತೆ ಸುತ್ತಮುತ್ತಲ ಹಲವು ಬೀದಿಗಳಲ್ಲಿ ಈಗಾಗಲೇ ಮನೆಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ, ಇದರಿಂದ ಸಾರ್ವಜನಿಕರು ಪಟ್ಟಣದಲ್ಲಿ ಮನೆ ತೊರೆದು ಹೊರ ಹೋಗಲು ಭಯ ಪಡುವಂತಾಗಿದೆ ಕೂಡಲೇ ಪೊಲಿಸ್ ಇಲಾಖೆಯವರು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ತಾಲ್ಲೂಕಿನ ಹಳ್ಳಿ ಭಾಗ ಸೇರಿದಂತೆ ಪಟ್ಟಣದಲ್ಲೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ, ದಲಿತರ ಕಾಲೋನಿಗಳಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ, ಜೊತೆಗೆ ತಾಲ್ಲೂಕಿನ ಕಾತ್ರಿಕೆಹಾಳ್, ಹಂದನಕೆರೆ, ಕಂದಿಕೆರೆ ಭಾಗಗದ ಕೆಲವು ಹೋಟೆಲ್ ಗಳಲ್ಲಿ ಈಗಲೂ ದಲಿತರಿಗೆ ಪ್ಲಾಸ್ಟಿಕ್, ತಟ್ಟೆ, ಲೋಟ ನೀಡಿ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ ಇಂತಹ ವಿಷಯಗಳ ಬಗ್ಗೆ ಹೊಸದಾಗಿ ಬಂದಿರುವ ಸಬ್ ಇನ್ಸ್ ಪೆಕ್ಟರ್ ರವರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣದ ಪುಟ್ ಪಾತ್ ಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅಂಗಡಿ ಮಾಲೀಕರು ವಸ್ತುಗಳನ್ನು ಇಟ್ಟಿರುವುದರಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ, ಈಗಾಗಲೇ ಪುಟ್ ಪಾತ್ ನಲ್ಲಿ ಸಂಚರಿಸಲು ಜಾಗವಿಲ್ಲದೆ ಅಪಘಾತಗಳು ನಡೆದಿವೆ ಹಾಗಾಗಿ ಪೊಲಿಸ್ ಇಲಾಖೆಯವರು ಪುಟ್ ಪಾತ್ ಜಾಗವನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಸಂಚರಿಸಲು ಅನುಕೂಲ ಮಾಡಿಕೊಡಬೇಕೆಂದು ಡಿಎಸ್ಎಸ್ ಮುಖಂಡರು ಒತ್ತಾಯಿಸಿದರು.
ಸೋಮವಾರ ಸಂತೆ ದಿನವಾದ್ದರಿಂದ ಕೆ.ಎಂ.ಎಚ್.ಪಿ.ಎಸ್ ಶಾಲಾ ಮುಂಭಾಗ ಸಂಚಾರದ ದಟ್ಟಣಿ ಹೆಚ್ಚಾಗಿ ಓಡಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಈ ಭಾಗದಲ್ಲಿ ಪ್ರತಿ ಸೋಮವಾರ ಸಂಚಾರ ವ್ಯವಸ್ಥೆ ಸುಗಮವಾಗುವಂತೆ ಮಾಡಬೇಕು ಎಂದರು.
ಪೊಲಿಸ್ ಸಬ್ ಇನ್ಸ್ಪೆಕ್ಟರ್ ಶ್ರೀಕಾಂತ್ ಮಾತನಾಡಿ, ನಾನು ಹೊಸದಾಗಿ ಬಂದಿದ್ದೇನೆ, ನೀವು ನೀಡಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತೇನೆ, ಕಳ್ಳತನ ಪಕ್ರರಣಗಳ ಬಗ್ಗೆ ಬೀಟ್ ಹೆಚ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ಗೋ.ನಿ.ವಸಂತ್ಕುಮಾರ್, ಮಲ್ಲಿಕಾರ್ಜುನ್, ರಂಗನಾಥ್, ಗೋವಿಂದರಾಜು, ಶೀಡ್ಲಯ್ಯ, ಅಶೋಕ್, ಎ.ಎಸೈಗಳಾದ ರವೀಂದ್ರ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು
