ಬೆಂಗಳೂರು
ಯಾದಗಿರಿ ಜೆಡಿಎಸ್ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರತಿಭಟಿಸಿ ನ.೧೫ ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದಾರೆ. ಮಂಗಳವಾರ ಗೌಡರು ಟ್ವೀಟ್ ಮೂಲಕ ಇದನ್ನು ಸ್ಪಷ್ಟಪಡಿಸಿದ್ದಾರೆ.
ದೇವೇಗೌಡರ ನರ್ಧಾರದಿಂದ ಎಚ್ಚೆತ್ತುಕೊಂಡ ಸರ್ಕಾರ ಯಾದಗಿರಿ ನಗರ ಪೊಲೀಸ್ ಠಾಣೆ ಪಿಎಸ್ ಐ ಬಾಪುಗೌಡ ಪಾಟೀಲ್ ಅವರನ್ನು ರಜೆ ಮೇಲೆ ಕಳುಹಿಸುವಂತೆ ಯಡಿಯೂರಪ್ಪ ಆದೇಶಿಸಿದ್ದಾರೆ. ಈ ಕುರಿತು ಯಡಿಯೂರಪ್ಪ ಪ್ರತಿಕ್ರಯಿಸಿ, ಯಾದಗಿರಿ ಸಬ್ ಇನ್ಸಪೆಕ್ಟರ್ ವರ್ಗಾವಣೆ ಮಾಡಲಾಗಿದ್ದು, ಅವರನ್ನು ರಜೆ ಮೇಲೆ ತೆರಳುವಂತೆ ಸೂಚಿಸಲಾಗಿದೆ. ಬಾಪುಗೌಡ ಅವರ ಯಾದಗಿರಿಯಿಂದ ಬೇರೆ ಕಡೆ ಹೋಗುತ್ತಾರೆ ಎಂದರು.
ದೇವೇಗೌಡರು ಒಬ್ಬರು ಮಾಜಿ ಪ್ರಧಾನಿಗಳು. ತಮ್ಮ ನಿರ್ಧಾರದಿಂದ ಅವರು ಪ್ರತಿಭಟನೆ ಹಿಂಪಡೆಯುತ್ತಾರೆ ಎಂಬ ವಿಶ್ವಾಸವಿದೆ. ಅವರು ಹೇಳಿದಂತೆಯೇ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಯಡಿಯೂರಪ್ಪ ಕ್ರಮ ಕೈಗೊಂಡಿರುವುದು ಸಂತೋಷವಾದರೂ ಸಹ ಈ ವಿಚಾರವಾಗಿ ಕಾರ್ಯಕರ್ತರು ಹಿಗ್ಗಬೇಕಿಲ್ಲ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷದ ಕಾರ್ಯಕರ್ತರು ಶಾಂತಿ ಕಾಪಾಡಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ತಮ್ಮ ರಾಜಕೀಯ ಜೀವನದಲ್ಲಿ ಇಂತಹ ನೂರಾರು ಪ್ರಕರಣ ನೋಡಿದ್ದು, ಇಂತಹ ಘಟನೆಯಲ್ಲಿ ರಾಜಕೀಯ ಮಾಡುವ ವ್ಯಕ್ತಿ ತಾವಲ್ಲ. ಯಡಿಯೂರಪ್ಪಗೆ ಪ್ರತಿಭಟನೆ ನಡೆಸುವುದಾಗಿ ಭಯ ಹುಟ್ಟಿಸಲಿಲ್ಲ. ಈ ವಿಚಾರವನ್ನು ಅವರ ಗಮನಕ್ಕೆ ತಂದಿದ್ದೆ ಅಷ್ಟೆ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಇನ್ನು ಮುಂದೆ ಜೆಡಿಎಸ್ ಕಾರ್ಯಕರ್ತರು ಯಾದಗಿರಿ ಕ್ಷೇತ್ರದಲ್ಲಿ ರಾಜಕೀಯ ತಿಕ್ಕಾಟ ಮಾಡಿಕೊಳ್ಳದೇ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು.ಏನೋ ಸಾಧಿಸಿದ್ದೇವೆ ಎಂಬ ಭಾವನೆ ನಮ್ಮ ಕಾರ್ಯಕರ್ತರುಗಳಿಗೆ ಬೇಡ ಎಂದು ದೇವೇಗೌಡ ಕಿವಿ ಮಾತು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








