ಚಿತ್ರದುರ್ಗ 

ಕೆಎಸ್ಆರ್ಟಿಸಿ ವತಿಯಿಂದ ಜಿಲ್ಲೆಯಲ್ಲಿ ನೂತನವಾಗಿ 53 ಮಾರ್ಗಗಳಿಗೆ ಬಸ್ ಸಂಚಾರ ಪ್ರಾರಂಭಿಸಲು ಪರ್ಮಿಟ್ಗಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಖಾಸಗಿ ಬಸ್ನವರಿಂದ ಆಕ್ಷೇಪಣೆ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ, ಬಳಿಕ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ಖಾಸಗಿ ಬಸ್ಗಳಿಗೆ ನೂತನವಾಗಿ ಯಾವುದೇ ಹೊಸ ಮಾರ್ಗಗಳಿಗೆ ಪರ್ಮಿಟ್ ನೀಡುವುದನ್ನು ರದ್ದುಗೊಳಿಸಿದ್ದು, ಸದ್ಯ 2014 ರ ಡಿಸೆಂಬರ್ 18 ರವರೆಗೆ ಚಾಲ್ತಿಯಲ್ಲಿದ್ದ ಖಾಸಗಿ ಬಸ್ಗಳ ಪರ್ಮಿಟ್ಗಳನ್ನು ಮಾತ್ರ ನಿಯಮಾನುಸಾರ ನವೀಕರಿಸಲು ಅವಕಾಶವಿದೆ. ಇದೀಗ ಕರ್ನಾಟಕ ರಾಜ್ಯ ಸಮಗ್ರ ಸಾರಿಗೆ ಯೋಜನೆಯಡಿ ರಾಜ್ಯದಲ್ಲಿ ರಾಷ್ಟ್ರೀಕರಣಗೊಳಿಸಲಾಗಿದ್ದು, ಕೆಎಸ್ಆರ್ಟಿಸಿ ಬಸ್ಗಳಿಗೆ ಮಾತ್ರ ಹೊಸ ಮಾರ್ಗಗಳಿಗೆ ಪರ್ಮಿಟ್ ನೀಡಲಾಗುತ್ತಿದೆ ಎಂದರು
ಈ ಯೋಜನೆಯಂತೆ ಯಾವುದೇ ಮಾರ್ಗಕ್ಕೆ ಕೆಎಸ್ಆರ್ಟಿಸಿ ಸಾರಿಗೆ ಪ್ರಾಧಿಕಾರಕ್ಕೆ ಪರ್ಮಿಟ್ ಕೋರಿ ಅರ್ಜಿ ಸಲ್ಲಿಸಿದಲ್ಲಿ, ಅದನ್ನು ತಿರಸ್ಕರಿಸುವಂತಿಲ್ಲ. ಹೀಗಾಗಿ ಕೆಎಸ್ಆರ್ಟಿಸಿ ವತಿಯಿಂದ ಸಲ್ಲಿಸುವ ಹೊಸ ಮಾರ್ಗಗಳ ಪರ್ಮಿಟ್ಗಳಿಗೆ ಅನುಮತಿ ನೀಡಲೇಬೇಕಿದೆ. ಇದೀಗ ಕೆಎಸ್ಆರ್ಟಿಸಿಯವರು ಜಿಲ್ಲೆಯಿಂದ ನೂತನವಾಗಿ 53 ಮಾರ್ಗಗಳಿಗೆ ಪರ್ಮಿಟ್ ನೀಡುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದಾಗ್ಯೂ, ಈ ಕುರಿತು ಖಾಸಗಿ ಬಸ್ ಪ್ರವರ್ತಕರು ತಮ್ಮ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
2014 ರ ಡಿಸೆಂಬರ್ 18 ರವರೆಗೆ ಚಾಲ್ತಿಯಲ್ಲಿದ್ದ ಖಾಸಗಿ ಬಸ್ಗಳ ಪರ್ಮಿಟ್ಗಳನ್ನು ಮಾತ್ರ ನವೀಕರಣ ಮಾಡಿಕೊಡಲು ಅವಕಾಶವಿದೆ. ರಾಜ್ಯದಲ್ಲಿ ರಸ್ತೆ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸಲಾಗಿದ್ದು, ಹೊಸದಾಗಿ ಯಾವುದೇ ಖಾಸಗಿ ಬಸ್ಗಳಿಗೆ ನೂತನ ಮಾರ್ಗಗಳಿಗೆ ಪರ್ಮಿಟ್ ನೀಡಲಾಗುವುದಿಲ್ಲ.
ವಾಯಿದೆ ಸಿಂಧುವಾದವರಿಗೆ ಮಾತ್ರ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು ಕೆಲವು ಖಾಸಗಿ ಬಸ್ನವರು ತಮ್ಮ ಬಸ್ ಮಾರ್ಗಗಳಲ್ಲಿ ವೇಳಾಪಟ್ಟಿ ಪರಿಷ್ಕರಣೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಖಾಸಗಿ ಬಸ್ ಮಾರ್ಗಗಳ ವಿಸ್ತರಣೆಗೆ ಅವಕಾಶ ನೀಡಲು ಅವಕಾಶವಿಲ್ಲ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಈ ಅರ್ಜಿಗಳನ್ನು ಸಮನ್ವಯಗೊಳಿಸಿ, ನಿಯಮಾನುಸಾರ ಪರಿಷ್ಕರಣೆಗೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಕೆಎಸ್ಆರ್ಟಿಸಿ ಯವರು ನೂತನ ಮಾರ್ಗಗಳ ಪರ್ಮಿಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಚಾಲ್ತಿಯಲ್ಲಿರುವ ಖಾಸಗಿ ಬಸ್ಗಳನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಇದೀಗ ಕೆಎಸ್ಆರ್ಟಿಸಿ ಯವರೊಂದಿಗೆ ಅನಾರೋಗ್ಯಕರ ಸ್ಪರ್ಧೆ ಹಾಗೂ ಡೀಸೆಲ್ ದರ ನಿರಂತರ ಏರಿಕೆಯಿಂದಾಗಿ ನಮ್ಮ ಕುಟುಂಬಗಳು ಸಂಕಷ್ಟದಲ್ಲಿವೆ. ಹೀಗಾಗಿ ಕೆಎಸ್ಆರ್ಟಿಸಿ ಯವರಿಗೆ ನೂತನ ಮಾರ್ಗಗಳಿಗೆ ಅನುಮತಿ ನೀಡುವಾಗ ನಮ್ಮ ಮನವಿಯನ್ನೂ ಕೂಡ ಪರಿಗಣಿಸಬೇಕು ಎಂದು ತಿಳಿಸಿದರು
ಚುನಾವಣೆ ಸಂದರ್ಭಗಳಲ್ಲಿ ಖಾಸಗಿ ಬಸ್ಗಳನ್ನು ಚುನಾವಣೆ ಕರ್ತವ್ಯಕ್ಕೆ ಪಡೆಯಲಾಗುತ್ತಿದೆ. ಆದರೆ ದಿನದ ಬಾಡಿಗೆ ನೀಡುವ ಸಂದರ್ಭದಲ್ಲಿ ಖಾಸಗಿ ಬಸ್ಗಳಿಗೆ ಹಾಗೂ ಸರ್ಕಾರಿ ಬಸ್ಗಳಿಗೆ ದರ ನಿಗದಿಪಡಿಸುವ ಸಂದರ್ಭದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ದಯವಿಟ್ಟು ಇದನ್ನು ಸರಿಪಡಿಸಬೇಕು ಎಂದು ಖಾಸಗಿ ಬಸ್ ಮಾಲೀಕರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಆರ್ಟಿಸಿ ವಿಭಾಗೀಯ ಅಧಿಕಾರಿಗಳು, ಕೆಎಸ್ಆರ್ಟಿಸಿ ಸಂಸ್ಥೆಯು ಕೇವಲ ಲಾಭವನ್ನೇ ದೃಷ್ಟಿಯಾಗಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿಲ್ಲ. ಸೇವೆಯ ಆಧಾರದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ ಉಚಿತ ಬಸ್ ಪಾಸ್, ಹಿರಿಯ ನಾಗರಿಕರಿಗೆ ರಿಯಾಯಿತಿ ಹೀಗೆ ನಾನಾ ಸೇವೆ ನೀಡುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರು ಪ್ರತಿಕ್ರಿಯಿಸಿ, ಖಾಸಗಿ ಬಸ್ ಸೌಲಭ್ಯವು ಉದ್ಯಮದ ರೂಪದಲ್ಲಿದ್ದು, ಯಾರೂ ಕೂಡ ಲಾಭದಾಯಕವಲ್ಲದ ಉದ್ಯಮವನ್ನು ನಡೆಸುವುದಿಲ್ಲ. ಹೀಗಾಗಿ ಖಾಸಗಿ ಬಸ್ ಸೇವೆ ಉದ್ಯಮವೇ ಆಗಿದೆ. ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ಸೇವೆಯಲ್ಲಿನ ಪೈಪೋಟಿಯು ಆರೋಗ್ಯಪೂರ್ಣವಾಗಿರಬೇಕು ಎಂದು ಸೂಚನೆ ನೀಡಿದರು.ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ, ಸಾರಿಗೆ ಇಲಾಖೆಯ ಹೇಮಂತ್ಕುಮಾರ್, ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಖಾಸಗಿ ಬಸ್ ಮಾಲೀಕರು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
