ಬೆಂಗಳೂರು
ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಬುಧವಾರ ಬೆಳಗ್ಗೆ ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗಿದ್ದ ಸಿದ್ದರಾಮಯ್ಯ ಅವರು ಮಧ್ಯಾಹ್ನ ಖಾಸಗಿ ಆಸ್ಪತ್ರೆಗೆ ದಾಖಲಾದರು. ಅಲ್ಲಿ ಅವರು ಆಂಜಿಯೋಪ್ಲ್ಯಾಸ್ಟ್ ಚಿಕಿತ್ಸೆ ಪಡೆದರು.
ಬೆಳಿಗ್ಗೆ ಅಧಿಕ ರಕ್ತದೊತ್ತಡದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಹಲವಾರು ಅಭಿಮಾನಿಗಳು ಆಗಮಿಸಿ ಭೇಟಿ ಮಾಡಲು ಪ್ರಯತ್ನಿಸಿದರು. ಕೆಲವರಿಗೆ ಸಿದ್ದರಾಮಯ್ಯ ಅವರ ದರ್ಶನ ದೊರೆತರೆ ಹಲವರು ಬರಿಗೈಲಿ ವಾಪಸ್ ತೆರಳಿದರು. ಬಳಿಕ ತಮ್ಮ ನಾಯಕನಿಗೆ ಯಾವುದೇ ಸಮಸ್ಯೆ ಇಲ್ಲ ಎಂಬ ಮಾಹಿತಿಯಿಂದ ನಿಟ್ಟುಸಿರು ಬಿಟ್ಟರು ಮತ್ತು ತಮ್ಮ ಅಭಿಮಾನಿಗಳ ಆಂದೊಲನವನ್ನು ಗಮನಿಸಿದ ಸಿದ್ದರಾಮಯ್ಯ ಟ್ವೀಟ್ ಮೂಲಕ ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಆರೋಗ್ಯವಾಗಿದ್ದೇನೆ, ನಿಯಮಿತವಾದ ಆರೋಗ್ಯ ತಪಾಸಣೆಗಾಗಿ ವೈದ್ಯರ ಬಳಿ ಹೋಗಿದ್ದೇನೆ. ಗಾಳಿಸುದ್ದಿಗಳನ್ನು ನಂಬಿ ಯಾರೂ ಆತಂಕಪಡುವ ಅಗತ್ಯ ಇಲ್ಲ.
— Siddaramaiah (@siddaramaiah) December 11, 2019
ಅಧಿಕ ರಕ್ತದೊತ್ತಡ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 6:30ರ ಸುಮಾರಿಗೆ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದರು. ಜತೆಗೆ ಸಣ್ಣದಾಗಿ ಸಿದ್ದರಾಮಯ್ಯ ಅವರಿಗೆ ಎದೆನೋವು ಕೂಡ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇತ್ತೀಚಿಗೆ ಉಪಚುನಾವಣೆಯಲ್ಲಿ ಸಕ್ರಿಯವಾಗಿದ್ದ ಸಿದ್ದರಾಮಯ್ಯ ಅವರು ದಣಿದಿದ್ದರು. ಎಡೆಬಿಡದ ಪ್ರವಾಸದ ಹಿನ್ನೆಲೆಯಲ್ಲಿ ಬಳಲಿದ್ದು, ವಿಶ್ರಾಂತಿ ಪಡೆಯುವಂತ ವೈದ್ಯರು ಅವರಿಗೆ ಸೂಚಿಸಿದ್ದರು. ಬಳಿಕ ಬೆಳಗ್ಗೆ 11ರ ಸುಮಾರಿಗೆ ಮನೆಗೆ ವಾಪಸ್ ಆದರು. ನಂತರ ಮಧ್ಯಾಹ್ನ ಆಸ್ಪತ್ರೆಗೆ ಸೇರಿದರು.
ಆಪ್ತ ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಭೇಟಿ ನೀಡಿ ತಮ್ಮ ನಾಯಕನ ಆರೋಗ್ಯ ವಿಚಾರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾದೇವಪ್ಪ, ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ.ಅವರಿಗೆ ಅನಾರೋಗ್ಯ ಎಂದು ವದಂತಿ ಹಬ್ಬಿಸಲಾಗಿದ್ದು, ಅವರಿಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದಾರೆ. ಬೆಳಗ್ಗೆ ಆಸ್ಪತ್ರೆಗೆ ಹೋಗಿದ್ದು ನಿಯಮಿತ ಚೆಕಪ್ ಗೆ ಒಳಪಟ್ಟಿದ್ದಾರೆ. ಆಗಾಗ್ಗೆ ಸಿದ್ದರಾಮಯ್ಯ ಆಸ್ಪತ್ರೆಗೆ ಹೋಗುತ್ತಿರುತ್ತಾರೆ.ಇದರಲ್ಲೇನೂ ವಿಶೇಷತೆ ಇಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








