ಬೆಂಗಳೂರು
ಕಾವಲುಗಾರ(ಸೆಕ್ಯೂರಿಟಿ)ಕೆಲಸ ಅರಸಿ ಅಸ್ಸಾಂನಿಂದ ಬಂದು ಸಮಯವನ್ನೂ ಲೆಕ್ಕಿಸದೆ ಹೆಚ್ಚುವರಿ ಕೆಲಸ ಮಾಡಿ ಮಾಲೀಕನ ನಂಬಿಕೆ ಗಿಟ್ಟಿಸಿ ರಾತ್ರಿ ವೇಳೆ ಲೋಡ್ಗಟ್ಟಲೇ ಕಬ್ಬಿಣವನ್ನು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಸಲ್ಮಾನ್, ಮಂಜಿತ್, ರಂಜಿತ್ ಹಾಗೂ ಪಪ್ಪು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 14 ಲಕ್ಷ ರೂ. ಮೌಲ್ಯದ 14 ಟನ್ ಕಬ್ಬಿಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.ಸೆಕ್ಯುರಿಟಿ ಕೆಲಸ ಅರಸಿ ಅಸ್ಸಾಂನಿಂದ ನಗರದಿಂದ ಆರೋಪಿಗಳು, ನಿರ್ಮಾಣ ಹಂತದ ದೊಡ್ಡ ಕಟ್ಟಡಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು.ನಂತರ ಕೆಲಸದ ಅವಧಿ ಪೂರ್ಣಗೊಂಡರೂ, ಮನೆಗೆ ತೆರಳದೇ ಹೆಚ್ಚುವರಿ ಕೆಲಸ ಮಾಡುತ್ತಿದ್ದರು. ಈ ಕೆಲಸಕ್ಕೆ ಹೆಚ್ಚುವರಿ ಸಂಬಳವನ್ನೂ ಕೇಳುತ್ತಿರಲಿಲ್ಲ.
ಇದರಿಂದಾಗಿ ಮಾಲೀಕರಿಗೆ ಸೆಕ್ಯುರಿಟಿ ಗಾರ್ಡ್ ಗಳ ಮೇಲೆ ಅಪಾರ ನಂಬಿಕೆ ಬಂದಿತ್ತು. ಹೀಗೆ ನಂಬಿಕಸ್ಥರಂತೆ ವರ್ತಿಸಿ ರಾತ್ರಿ ಲಾರಿಯಲ್ಲಿ ಲೋಡ್ ಗಟ್ಟಲೇ ಕಬ್ಬಿಣವನ್ನು ಸಾಗಿಸಿದ್ದರು.ಹೊಂಬಾಳೆ ಕನ್ಸ್ಟ್ರಕ್ಷನ್ ಹಾಗೂ ಕಶ್ಯಪ್ ಗ್ರೂಪ್ ಕಂಪನಿಗಳಲ್ಲಿ ಕಬ್ಬಿಣ ಕಳವು ಪ್ರಕರಣ ದಾಖಲಿಸಿಕೊಂಡಿದ್ದ ಹೆಚ್ಎಎಲ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.