ಚಿತ್ರದುರ್ಗ
ಮಳೆ ನೀರು ನುಗ್ಗಿ ತೆಂಗಿನಮರಗಳು ಕೊಚ್ಚಿ ಹೋಗಿದ್ದು ಪರಿಹಾರ ನೀಡುವಂತೆ ಆಗ್ರಹಿಸಿ ರೈತ ದಂಪತಿ ವಿಷದ ಬಾಟಲಿ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟಿಸಿದ ಘಟನೆ ನಡೆದಿದೆ.
ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಗ್ರಾಮದ ಚಿಕ್ಕಣ್ಣ ಕುಟುಂಬಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಮಳೆಯಿಂದ ಸಂಭವಿಸಿದ ಬೆಳೆ ಹಾನಿಗೆ ಸರ್ಕಾರ ಇನ್ನು ಪರಿಹಾರ ನೀಡಿಲ್ಲ, ಕೆಲ್ಲೋಡು ಗ್ರಾಮದ ರೈತ ಚಿಕ್ಕಣ್ಣ ಪತ್ನಿ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಬೆಳೆ ಹಾನಿ ಪರಿಹಾರ ಬಂದಿಲ್ಲ. ಹೀಗಾಗಿ ವಿಷಯ ಕುಡಿಯುವುದಾಗಿ ಎಚ್ಚರಿಕೆ ನೀಡಲು ಬಂದಿದ್ದೇವೆ ಎಂದರು.
ಕೆಲ್ಲೋಡು ವೇದಾವತಿ ನದಿಯ ಚೆಕ್ಡ್ಯಾಂ ಪಕ್ಕದಲ್ಲಿ ಜಮೀನು ಇದ್ದು ಕಳೆದ ಅಕ್ಟೋಬರ್ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲವೃತ್ತಗೊಂಡಿತ್ತು. ಅಲ್ಲದೆ ಪ್ರವಾಹಕ್ಕೆ ಪಂಪ್ಸೆಟ್, ಯಂತ್ರ ಹಾಗೂ ಕೃಷಿ ಉಪಕರಣಗಳು ಕೊಚ್ಚಿ ಹೋಗಿದ್ದವು. ಅಂದಾಜು 15 ಲಕ್ಷ ರೂಪಾಯಿ ನಷ್ಟ ಸಂಭವಿಸಿತ್ತು. ನಷ್ಟ ತುಂಬಿಕೊಡುವಂತೆ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಸುಮಾರು 6 ಎಕರೆ ಜಮೀನಿನಲ್ಲಿ ನಷ್ಟವಾದ ಬಗ್ಗೆ ತಹಸೀಲ್ದಾರ್ ಅವರು ವರದಿ ಮಾಡಿಕೊಂಡಿದ್ದು ಕೇವಲ 5 ಸಾವಿರ ಮಾತ್ರ ಖಾತೆಗೆ ಪರಿಹಾರ ಹಣ ಜಮಾ ಮಾಡಿದ್ದಾರೆ. ಆದರೆ ಒಂದು ಎಕರೆ ಜಮೀನಿನಲ್ಲಿದ್ದ 50ಕ್ಕೂ ಹೆಚ್ಚು ತೆಂಗಿನ ಮರಗಳು ಕೊಚ್ಚಿ ಹೋಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇದರ ಬಗ್ಗೆ ತಹಸೀಲ್ದಾರ್ ಕಚೇರಿಯಲ್ಲಿ ವಿಚಾರಿಸಿದರೆ ಸರಿಯಾಗಿ ಉತ್ತರ ನೀಢುತ್ತಿಲ್ಲ. ಆದ ಕಾರಣ ತೆಂಗಿನಮರಗಳು ಕೊಚ್ಚಿ ಹೋದ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ವರದಿ ತರಿಸಿಕೊಂಡು ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು .ಸಂಭವಿಸಿರುವ ನಷ್ಟಕ್ಕೆ ಸೂಕ್ತ ಪರಿಹಾರ ಕೊಡದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








