ಬೆಂಗಳೂರು
ಸಾಹಸ ಸಿಂಹ ವಿಷ್ಣುವರ್ಧನ್ ನಿಧನರಾಗಿ ಸೋಮವಾರ 10 ವರ್ಷಗಳು ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ವಿಷ್ಣುವರ್ಧನ್ ಸಮಾಧಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.ನಗರದ ಉತ್ತರಹಳ್ಳಿ ರಸ್ತೆಯ ವಿಷ್ಣುವರ್ಧನ್ ಸಮಾಧಿ ಸ್ಥಳದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿದರೆ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಕುಟುಂಬದ ಸದಸ್ಯರು ಮೈಸೂರಿನ ಹೊರವಲಯದಲ್ಲಿರುವ ವಿಷ್ಣು ಸ್ಮಾರಕ ಸ್ಥಳದಲ್ಲಿ ಪೂಜೆ ಸಲ್ಲಿಸುವ ಮೂಲಕ 10ನೇ ವರ್ಷದ ಪುಣ್ಯ ಸ್ಮರಣೆ ನೆರವೇರಿಸಿದರು.ಮೈಸೂರು ಬೆಂಗಳೂರು ಸೇರಿ2 ಕಡೆಯೂ ರಕ್ತದಾನ, ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾಮಗಾರಿ ಆರಂಭ
ನಟಿ ಭಾರತಿ ವಿಷ್ಣುವರ್ಧನ್ ಮಾತನಾಡಿ 10 ವರ್ಷಗಳ ನಂತರ ಒಳ್ಳೆಯ ಕಾಲ ಕೂಡಿ ಬಂದಿದೆ. ಇನ್ನೊಂದು ವಾರದಲ್ಲಿ ವಿಷ್ಣುವರ್ಧನ್ ಸ್ಮಾರಕ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ವಿಷ್ಣುವರ್ಧನ್ ನಿಧನರಾಗಿ 10 ವರ್ಷ ಕಳೆದಿದ್ದರೂ ಅಭಿಮಾನಿಗಳ ಪ್ರೀತಿ, ವಿಶ್ವಾಸ ಇನ್ನು ಕಡಿಮೆ ಆಗಿಲ್ಲ. ಅವರ ಘನತೆಗೆ ಯಾವುದೇ ಧಕ್ಕೆಯಾಗಿಲ್ಲ. ವಿಷ್ಣುವರ್ಧನ್ ನಮ್ಮೊಂದಿಗೆ ಇದ್ದಾರೆ. ಸ್ಮಾರಕ ನಿರ್ಮಾಣವಾಗಬೇಕು ಎನ್ನುವುದು ಅಭಿಮಾನಿಗಳ ಕನಸು ಅದು ಈಗ ನನಸಾಗುವ ಸಮಯ ಕೂಡಿ ಬಂದಿದೆ ಎಂದರು.
ಸ್ಮಾರಕದ ಬಗ್ಗೆ ಮುಂದಿನ ದಿನಗಳಲ್ಲಿ ಸಮಗ್ರ ಮಾಹಿತಿ ನೀಡಲಾಗುವುದು. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಟ್ಟಡ ಕಾಮಗಾರಿಗೆ ಸಹಾಯ ನೀಡುವ ಭರವಸೆ ನೀಡಿದ್ದಾರೆ ಎಂದರು.
ಹುಟ್ಟಿ ಬನ್ನಿ ದಾದ
ನಿಮ್ಮನ್ನು ನಾವು ಸ್ಮರಣೆ ಮಾಡಬೇಕಾಗಿಲ್ಲ. ಮರೆತವರನ್ನು ಮಾತ್ರ ಸ್ಮರಣೆ ಮಾಡಬೇಕಾಗುತ್ತದೆ. ನೀವು ಯಾವತ್ತೂ ನಮ್ಮ ನೆನಪಿನಿಂದ ಮರೆಯಾಗಲ್ಲ. ನೀವು ಹಚ್ಚಿದ ದೀಪದ ಬೆಳಕಿನಲ್ಲಿ ನಾವು, ಚಿತ್ರರಂಗ ನಡೆಯುತ್ತಿದೆ ಎಂದು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಡಾ. ರಾಜ್ಕುಮಾರ್ ಅವರಿಗೆ ರಾಜ್ಕುಮಾರ್ ಅವರೇ ಸಾಟಿ. ಆದರೆ, ನಾನು ಚಿಕ್ಕಂದಿನಿಂದಲೂ ಬೇರೆ ಎಲ್ಲರಿಗಿಂತಲೂ ವಿಷ್ಣುವರ್ಧನ್ ಅವರನ್ನು ಹೆಚ್ಚು ಇಷ್ಟಪಟ್ಟೆ. ಇದಕ್ಕೆ ಕಾರಣ ಮಧ್ಯಮ ವರ್ಗದವರ ಮೇಲೆ ಪ್ರಭಾವ ಬೀರುತ್ತಿದ್ದ ಅವರ ಸಿನಿಮಾಗಳೇ ಇರಬಹುದು. ಸಾಹಸಸಿಂಹ, ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್ ಅವರ 10ನೇ ಪುಣ್ಯಸ್ಮರಣೆ. ಮತ್ತೆ ಹುಟ್ಟಿ ಬನ್ನಿ ದಾದ!’ ಎಂದು ಸಾಫ್ಟ್ವೇರ್ ಉದ್ಯೋಗಿ ಮಲ್ಲಿಕಾರ್ಜುನ್ ಟ್ವೀಟ್ ಮಾಡಿದ್ದಾರೆ.