ಬೆಂಗಳೂರು
ಬೈಕ್ ಕಸಿದುಕೊಂಡು 20 ಸಾವಿರ ಹಣಕ್ಕಾಗಿ ಪೀಡಿಸಿ ಬೆದರಿಕೆ ಹಾಕುತ್ತಿದ್ದ ಕಾರಣಕ್ಕೆ ಸ್ನೇಹಿತನನ್ನೇ ಮಾರಕಾಸ್ತ್ರಗಳಿದ ಹೊಡೆದು ಕೊಲೆ ಮಾಡಿದ್ದ 11 ಮಂದಿ ಆರೋಪಿಗಳನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್ ನಗರದ ಮಂಜುನಾಥ್ ಅಲಿಯಾಸ್ ಟೆಂಟ್ ಮಂಜ (23), ರೋಷನ್ ಅಲಿಯಾಸ್ ರಾಕೇಶ್ (19), ಹರಿಕೃಷ್ಣ (19) ವಿಜಯನಗರದ ಕೆಇಬಿ ಕಚೇರಿ ಹಿಂಭಾಗದ ತಿಲಕ್ (19), ವಿಜಯನಗರದ ಮಹೇಂದ್ರ ಅಲಿಯಾಸ್ ಮಹಿ (18), ಜಗಜೀವನ್ ರಾಂನಗರದ ಸಂಜಯ್ ಅಲಿಯಾಸ್ ಜೋ (19), ಮರಿಯಪ್ಪನ ಪಾಳ್ಯದ ಜೀವ (20), ವಿಜಯ ಅಲಿಯಾಸ್ ಗುಬ್ಬಿ (18), ಶ್ರೀರಾಂಪುರದ ಅಖಿಲೇಶ್ (19), ಕಮಲಾನಗರದ ದೀಪಕ್ (18), ಎಲ್ಎನ್ ಪುರದ ವಿಘ್ನೇಶ್ (18) ಬಂಧಿತ ಆರೋಪಿಗಳಾಗಿದ್ದು ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳು ಕಳೆದ ಡಿ. 26 ರಂದು ರಾತ್ರಿ 9.30ರ ವೇಳೆ ಎಲ್ಎನ್ ಪುರ ಬಸ್ ನಿಲ್ದಾಣದ ಬಳಿ ಮಂಜುನಾಥ್ (25) ಎಂಬಾತನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಇನ್ಸ್ಪೆಕ್ಟರ್ ಚಂದ್ರಕಾಂತ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಆರೋಪಿಗಳು ವಿಚಾರಣೆಯಲ್ಲಿ ಕೊಲೆಯಾದ ಮಂಜುನಾಥ್ಗೆ ಸ್ನೇಹಿತರಾಗಿದ್ದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿ ತಿಲಕ್ನ ಬೈಕ್ನ್ನು ಕಸಿದುಕೊಂಡಿದ್ದ ಮಂಜುನಾಥ್, 20 ಸಾವಿರ ಹಣ ನೀಡಬೇಕೆಂದು ಬೆದರಿಸಿದ್ದ, ಈ ವಿಷಯವನ್ನು ಸ್ನೇಹಿತರಿಗೆ ತಿಲಕ್ ತಿಳಿಸಿದ್ದು, ಎಲ್ಲರೂ ಸೇರಿ ಮಂಜುನಾಥ್ನನ್ನು ಕೊಲೆ ಮಾಡಿದ್ದಾರೆ.ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








