ಹೊಳಲ್ಕೆರೆ:
ರಾಮಗಿರಿ ರೈಲ್ವೆ ನಿಲ್ದಾಣದಲ್ಲಿ ಯಾವುದೇ ಎಕ್ಸ್ಪ್ರೆಸ್ ರೈಲು ಗಾಡಿಗಳ ನಿಲುಗಡೆ ಇರುವುದಿಲ್ಲ. ಹಾಗಾಗಿ ವಿಶ್ವಮಾನವ, ಶಿವಮೊಗ್ಗ-ತಿರುಪತಿ, ವಾಸ್ಕೋ ಒಟ್ಟು ಮೂರು ಎಕ್ಸ್ಪ್ರೆಸ್ ರೈಲು ಗಾಡಿಗಳನ್ನು ನಿಲುಗಡೆ ಮಾಡುವಂತೆ ರಾಮಗಿರಿ ಹಾಗೂ ಸುತ್ತಲಿನ ಗ್ರಾಮಸ್ಥರು ಹುಬ್ಬಳ್ಳಿ ನೈರುತ್ಯ ವಲಯದ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ಡಾ.ಎಚ್.ಪಿ.ನಿಜಗುಣಸ್ವಾಮಿ ಮಾತನಾಡಿ, ರಾಮಗಿರಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಕರಿಸಿದ್ದೇಶ್ವರಸ್ವಾಮಿ ನೆಲೆಸಿರುವ ಪುಣ್ಯಕ್ಷೇತ್ರವಾಗಿದ್ದು, ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ತುಮಕೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಭಕ್ತರಿದ್ದಾರೆ. ಅಲ್ಲದೆ ರಾಮಗಿರಿ ಹೋಬಳಿ ಕೇಂದ್ರವಾಗಿದ್ದು, ಇಲ್ಲಿನ ರೈಲು ನಿಲ್ದಾಣ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕೇಂದ್ರವಾಗಿದೆ. ಇಷ್ಟಿದ್ದು ಕೂಡ ಇಲ್ಲಿ ಯಾವುದೇ ಎಕ್ಸ್ಪ್ರೈಸ್ ರೈಲುಗಾಡಿಗಳ ನಿಲುಗಡೆ ಇರುವುದಿಲ್ಲ ಹಾಗಾಗಿ ರಾಮಗಿರಿ ರೈಲ್ವೆ ನಿಲ್ದಾಣದಲ್ಲಿ ವಿಶ್ವಮಾನವ, ತಿರುಪತಿ ಎಕ್ಸಪ್ರೆಸ್, ವಾಸ್ಕೋ ಮೂರು ರೈಲುಗಳ ನಿಲುಗಡೆ ನೀಡಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಗ್ರಾಮಸ್ಥರು, ಮುಖಂಡರು, ಗ್ರಾಪಂನಿಂದ ಸೇರಿದಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಹಾಗೆಯೇ ಸಂಸದ ನಾರಾಯಣಸ್ವಾಮಿ ಅವರು ಕೂಡ ಈ ಗ್ರಾಮದ ಬಗ್ಗೆ ಹೆಚ್ಚು ಕಾಳಜಿ ಹೊಂದಿದವರಾಗಿದ್ದು, ಅವರು ಕೂಡ ಈ ಬಗ್ಗೆ ಕೋರಿಕೆ ಸಲ್ಲಿಸಿದ್ದಾರೆ. ಅಲ್ಲದೆ ದೂರವಾಣಿ ಮೂಲಕ ತಮಗೆ ರೈಲು ನಿಲುಗಡೆಗೆ ಕೋರಿದ್ದಾರೆ ಎಂದರು.
ಹುಬ್ಬಳ್ಳಿ ನೈರುತ್ಯ ವಲಯದ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಮಾತನಾಡಿ, ಇಲ್ಲಿನ ರೈಲು ನಿಲ್ದಾಣ ಸುಸಜ್ಜಿತವಾಗಿದೆ. ಉತ್ತಮ ವಾತಾವರಣ ಹೊಂದಿದ್ದು, ಸಾಕಷ್ಟು ಮಂದಿ ಸೇರಿದ್ದೀರಿ. ಇಲ್ಲಿಗೆ ಮೂರು ರೈಲು ಗಾಡಿ ನಿಲುಗಡೆ ಕಷ್ಟವಾಗಿದ್ದು, ಸದ್ಯದಲ್ಲಿ ವಿಶ್ವ ಮಾನವ ರೈಲು ಮಾತ್ರ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸ್ಥಳಿಯ ಸಂಸದರಾದ ನಾರಾಯಣಸ್ವಾಮಿ ಅವರ ಕೋರಿಕೆ ಕೂಡ ಅತ್ಯಂತ ಅಗತ್ಯವಿದ್ದು ಆ ಪ್ರಯತ್ನ ಮಾಡಿ ಎಂದರು.
ರೈಲ್ವೆ ನಿಲ್ದಾಣದಲ್ಲಿ ರಾಮಗಿರಿ ಹಾಗೂ ಶ್ರೀ ಕರಿಸಿದ್ದೇಶ್ವರಸ್ವಾಮಿ ದೇವಾಲಯ ಬಗ್ಗೆ ಹಾಕಲಾಗಿದ್ದ ಮಾಹಿತಿ ಜಿಎಂ ಸಂಪೂರ್ಣವಾಗಿ ಓದಿ ಖುಷಿ ಪಟ್ಟರು. ಪಾರ್ಕ ನಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಕೃಷ್ಣನ ಪ್ರತಿಮೆಯನ್ನು ಉದ್ಘಾಟಿಸಿದರು. ರೈಲ್ವೆ ನಿಲ್ದಾಣದ ಸುತ್ತಲೂ ಗಿಡಗಳಿಗೆ ನೀರು ಹಾಕುವ ಮೂಲಕ ಪಾರ್ಕ ಉದ್ಘಾಟಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ