ಚಿತ್ರದುರ್ಗ:

ಹೆಣ್ಣು ಅಬಲೆ ಅಲ್ಲ ಸಬಲೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಗಂಡಿನಷ್ಟೇ ಸರಿಸಮನಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಬಹುತೇಕ ಇಲಾಖೆಗಳಲ್ಲಿ ಎಲ್ಲಾ ಅಧಿಕಾರಿಗಳು ಮಹಿಳೆಯರೇ ಅಧಿಕಾರ ನಡೆಸುತ್ತಿರುವುದು ನನಗೆ ಬಹಳ ಖುಷಿ ತರುವ ಸಂಗತಿಯಾಗಿದೆ. ಹೆಣ್ಣಿಲ್ಲದ ಜಗತ್ತೇ ಇಲ್ಲ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ನಗರದ ತ.ರಾ.ಸು. ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಮಾನ ಕಲ್ಪಿಸಲಾಗಿದೆ. ಯಾವುದೇ ಕ್ಷೇತ್ರಗಳಲ್ಲಿ ಹೆಣ್ಣು ಕೆಲಸ ಮಾಡುವುದಕ್ಕೆ ಹಿಂಜರಿಯುವ ಕಾಲ ಈಗಿಲ್ಲ. ಇದೀಗ ಮಹಿಳೆಯರು ಪುರುಷರು ನಿರ್ವಹಿಸಬಹುದಾದ ಎಲ್ಲ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ. ಸದ್ಯ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಮಹಿಳೆಯರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ನಿಜಕ್ಕೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಈ ವಿದ್ಯಮಾನ ಜಿಲ್ಲೆ ಹೆಮ್ಮೆ ಪಡುವಂತೆ ಮಾಡಿದೆ ಎಂದು ವಿಶಾಲಾಕ್ಷಿ ನಟರಾಜ್ ಹೇಳಿದರು.
ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಮಾತನಾಡಿ, ಮಹಿಳೆ ಮನೆಕೆಲಸಕ್ಕೆ ಮಾತ್ರ ಸೀಮಿತವಲ್ಲ ಮಹಿಳೆ ಇಡೀ ಜಗತ್ತಿಗೆ ಸರಿಸಾಟಿಯಾಗಿ ಇದ್ದಾಳೆ. ಅಮೆರಿಕಕ್ಕೆ ಸ್ವಾತಂತ್ರ್ಯ ಬಂದು 300 ವರ್ಷ ಆದರೂ ಇದುವರೆಗೂ ಮಹಿಳೆ ಅಧ್ಯಕ್ಷೆಯಾಗಿರುವುದು ಇತಿಹಾಸದಲ್ಲಿ ಇಲ್ಲ. ಆದರೆ ನಮ್ಮ ಭಾರತದಲ್ಲಿ ಪ್ರತಿಭಾ ಪಾಟೀಲ್ ರಾಷ್ಟ್ರಪತಿಗಳಾಗಿದ್ದರೆ, ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದರು. ಮಹಿಳೆ ಮೀಸಲಾತಿಗೆ ಅವಲಂಬಿತವಾಗದೆ, ಸ್ವತಂತ್ರವಾಗಿ ತನ್ನ ವೃತ್ತಿಯಲ್ಲಿ ಮುಂದುವರಿಯಬೇಕು. ಮಹಿಳೆ ಎಷ್ಟು ಧೈರ್ಯಶಾಲಿ ಎಂದರೆ ಉರಿ ದಾಳಿಯಲ್ಲಿ ಪಾಕಿಸ್ತಾನಕ್ಕೆ ವಿಮಾನವನ್ನು ಹಾರಿಸಿಕೊಂಡು ಹೋಗಿ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿದ್ದಾರೆ ಎಂದು ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು.
ಜಿಲ್ಲಾಧಿಕಾರಿ ಆರ್. ವಿನೊತ್ ಪ್ರಿಯಾ ಮಾತನಾಡಿ ಸಮಾನತೆಯನ್ನುವುದು ಮತ್ತೊಬ್ಬರಿಂದ ಪಡೆಯುವುದಲ್ಲ, ಸಮಾನತೆ ಎಂಬುದು ನಾವೇ ಪಡೆದುಕೊಳ್ಳುವುದು. ಸಮಾನತೆ ಪಡೆಯಬೇಕು ಎಂದರೆ ಹೆಣ್ಣು ಮಕ್ಕಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕು. ತಾಯಂದಿರು ಮನೆಯಲ್ಲಿ ಹೆಣ್ಣು ಗಂಡು ಎಂಬ ತಾರತಮ್ಯ ತೋರಬಾರದು. ಮನೆಯಲ್ಲಿ ತಾಯಿಂದಿರು ಮಕ್ಕಳಿಗೆ ಹೆಣ್ಣಿನ ಮೇಲೆ ಗೌರವ ಕೊಡುವುದನ್ನು ಕಲಿಸಬೇಕು, ಇದರಿಂದ ಅತ್ಯಾಚಾರ ನಿಲ್ಲಿಸಬಹುದು. ಮನೆಯಲ್ಲಿ ತಾಯಂದಿರು ಹೆಣ್ಣುಮಕ್ಕಳನ್ನು ಸ್ವಾತಂತ್ರವಾಗಿ ಬೆಳೆಸಬೇಕು ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಜಿ ರಾಧಿಕಾ ಮಾತನಾಡಿ, ಹೆಣ್ಣು-ಗಂಡು ಎಂಬ ಭೇದಭಾವ ಹುಟ್ಟುವುದೇ ಮಹಿಳೆ ಗರ್ಭಾವಸ್ಥೆಯಲ್ಲಿ. ಹೆಣ್ಣು ಹುಟ್ಟಿದರೆ ಹೆಚ್ಚು ವೆಚ್ಚವಾಗುತ್ತದೆ ಎಂಬ ಮನೋಭಾವ ಇನ್ನೂ ಇದೆ. ಹೆಣ್ಣನ್ನು ಸ್ವಾತಂತ್ರವಾಗಿ ಬೆಳೆಸಬೇಕು, ಹೆಣ್ಣನ್ನು ಸಮಾಜ ಮುಖಿಯಾಗಿ ಬೆಳೆಸಲು ತಂದೆ-ತಾಯಿಯರು ಕೈಜೋಡಿಸಬೇಕು ಎಂದರು.
ರುಡ್ಸೆಟ್ ನಿರ್ದೇಶಕಿ ಜಿ. ಮಂಜುಳ ಮಹಿಳಾ ದಿನಾಚರಣೆ ಎನ್ನುವುದು ಆಚರಣೆಗೆ ಸೀಮಿತವಾಗದೆ ಎಲ್ಲಾ ಹೆಣ್ಣುಮಕ್ಕಳು ಯಶಸ್ಸು ಕಡೆ ದಾಪುಗಾಲು ಇಡುತ್ತಿದ್ದಾರೆ ಎಂದು ಉಪನ್ಯಾಸ ನೀಡಿದರು.
ನ್ಯಾಯವಾದಿ ಡಿ.ಕೆ ಶೀಲಾ, ಮಹಿಳಾ ದಿನಾಚರಣೆ ಎನ್ನುವುದು ಸಮಾನತೆ ಪಡೆದ ದಿನವಾಗಿ ಆಚರಿಸುತ್ತಿದ್ದೇವೆ. ಮಹಿಳೆ ಸಮಾನತೆ ಕೊಡಿ ಎಂದು ಕೇಳಬಾರದು. ಸಮಾನತೆ ಅನ್ನುವುದು ನಾವು ಇಷ್ಟಪಟ್ಟು ಒಂದು ಕ್ಷೇತ್ರದಲ್ಲಿ ವೃತ್ತಿ ಜೀವನ ಮಾಡುವುದೇ ಸಮಾನತೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಜೀವಿಸಬೇಕು. ಕಾನೂನಿನಲ್ಲಿ ಮಹಿಳೆ ಮತ್ತು ಪುರುಷರು ಸಮಾನರು ಎಂದು ಉಪನ್ಯಾಸ ನೀಡಿದರು.ತಾಲೂಕು ಪಂಚಾಯತ್ ಅಧ್ಯಕ್ಷ ಲಿಂಗರಾಜು, ಜಿ.ಪಂ. ಸದಸ್ಯ ಕೃಷ್ಣಮೂರ್ತಿ, ತಾ.ಪಂ. ಉಪಾಧ್ಯಕ್ಷೆ ಶಾಂತಮ್ಮ ರೇವಣಸಿದ್ದಪ್ಪ, ಜಿಲ್ಲಾ ಶ್ರೀಶಕ್ತಿ ಒಕ್ಕೂಟ ಅಧ್ಯಕ್ಷ ಕೊಲ್ಲಿ ಲಕ್ಷ್ಮಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








