ತುಮಕೂರು :
ಖಾಲಿ ನಿವೇಶನದಲ್ಲಿ ಕಸ ಸುರಿದು ಅದಕ್ಕೆ ಬೆಂಕಿ ಹಚ್ಚುತ್ತಿರುವ ಪರಿಣಾಮ ಅದರ ಪಕ್ಕದಲ್ಲೇ ಇರುವ ನಿವಾಸಿಗಳು ಆನಾರೋಗ್ಯ ಪೀಡಿತರಾಗಬೇಕಾದ ಪರಿಸ್ಥಿತಿ ಸಿದ್ದಗಂಗಾ ಬಡಾವಣೆಯಲ್ಲಿ ನಡೆಯುತ್ತಿದೆ.
ಬಡಾವಣೆಯ ಡಾಕ್ಟರ್ ವಾಟರ್ ಸಮೀಪವೇ ರಸ್ತೆಗೆ ಹೊಂದಿಕೊಂಡಂತೆ ಒಂದು ಖಾಲಿ ನಿವೇಶನವಿದೆ. ಇಲ್ಲಿ ಆಗಾಗ್ಗೆ ಗೊತ್ತಿಲ್ಲದಂತೆ ಕಸ ಬೀಳುತ್ತದೆ. ಯಾರು ಕಸ ಹಾಕುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಕಸ ಸುರಿಯುವುದರ ಜೊತೆಗೆ ಅದಕ್ಕೆ ಬೆಂಕಿ ಹಚ್ಚಿ ಹೋಗುತ್ತಾರೆ. ಕಸದ ಹೊಗೆ ಪಕ್ಕದ ಮನೆಗಳಿಗೆ ಹರಡಿ ಕೆಲವರು ಅನಾರೋಗ್ಯ ಪೀಡಿತರಾಗಿದ್ದಾರೆ. ಧೂಳು ಕಿಟಕಿ ಮೂಲಕ ಆವರಿಸಿ ಕೆಮ್ಮು ನೆಗಡಿ ಬರಲು ಕಾರಣವಾಗುತ್ತಿದೆ.
ಇಲ್ಲೆಲ್ಲ ತಿಳಿದ ವಿದ್ಯಾವಂತ ನಾಗರೀಕರೇ ಇದ್ದಾರೆ. ಆದರೂ ಯಾರಿಗೂ ಗೊತ್ತಿಲ್ಲದ ಹಾಗೆ ಹೀಗೆ ಪರಿಸರ ಅನೈರ್ಮಲ್ಯ ನಡೆಯುತ್ತಿದೆ. ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೋ ಅಥವಾ ಕಸವನ್ನು ತಂದು ಸುರಿದು ಇಲ್ಲಿ ಬೆಂಕಿ ಹಚ್ಚಲಾಗುತ್ತಿದೆಯೋ .. ಅಂತೂ ಇಲ್ಲಿ ಪರಿಸರ ಮಾತ್ರ ಹಾಳಾಗುತ್ತಿದೆ. ಕಸವನ್ನು ಎಲ್ಲೆಂದರಲ್ಲಿ ಹಾಕುವುದು ಅಪರಾಧ. ಹಾಗೆಯೇ ಕಸಕ್ಕೆ ಬೆಂಕಿ ಹಚ್ಚಿ ನೈರ್ಮಲ್ಯ ಹಾಳು ಮಾಡುವುದು ಸಹ ಮತ್ತೊಂದು ಅಪರಾಧ. ನಗರ ಪಾಲಿಕೆಯವರು ಏಕೆ ಇತ್ತ ಗಮನ ಹರಿಸುತ್ತಿಲ್ಲ ತಿಳಿಯದಾಗಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಸಮಾಜ ಸೇವಕಿ ರಾಜೇಶ್ವರಿ ಚಂದ್ರಶೇಖರ್ ಅವರು ಹಲವು ತಿಂಗಳುಗಳಿಂದ ಈ ಖಾಲಿ ನಿವೇಶನದಲ್ಲಿ ಕಸ ಹಾಕಲಾಗುತ್ತಿದೆ. ಆಗಾಗ್ಗೆ ಬೆಂಕಿ ಹಚ್ಚುತ್ತಾರೆ. ಹೊಗೆ ಮತ್ತು ಧೊಳಿನಿಂದಾಗಿ ನನ್ನ ಪತಿ ಕಳೆದ 20 ದಿನಗಳಿಂದ ಅನರೋಗ್ಯಕ್ಕೆ ಒಳಗಾಗಿದ್ದಾರೆ. ನಗರಪಾಲಿಕೆಯವರು ಕೊಡಲೇ ಇತ್ತ ಗಮನ ಹರಿಸಿ ಕಸ ಮುಕ್ತ ಮಾಡಬೇಕು, ಯಾರು ಕಸ ಸುರಿಯುತ್ತಾರೋ ಅಂತಹವರಿಗೆ ದಂಡ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ