ನವದೆಹಲಿ:
ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್ಡೌನ್ನಿಂದ ಕುಸಿತಕ್ಕೊಳಗಾಗಿರುವ ದೇಶದ ಆರ್ಥಿಕತೆಗ ಬಲ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಹಿಂದೆ ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ನ ಮೊದಲ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರದಂದು ನೀಡಿದ್ದರು. ಇದೀಗ ಈ ಆರ್ಥಿಕ ಪ್ಯಾಕೇಜಿನ ಎರಡನೇ ಹಂತದ ವಿವರಗಳನ್ನುಇಂದು ನೀಡುತ್ತಿದ್ದಾರೆ.
ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ಉದ್ಯಮದಾರರು, ಸ್ವಯಂ ಉದ್ಯೋಗಿಗಳು ಮತ್ತು ಸಣ್ಣ ಹಿಡುವಳಿ ರೈತರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿದರು. ಗ್ರಾಮೀಣ ಭಾಗದ ಜನತೆಗೆ ಬಂಪರ್ ಕೊಡುಗೆ ನೀಡಿದ ವಿತ್ತ ಸಚಿವೆ, ಗ್ರಾಮೀಣಾಭಿವೃದ್ಧಿಗೆ 4200 ಕೋಟಿ ರೂ. ಹಾಗೂ ಕೃಷಿ ಉತ್ಪಾದನೆ ಹೆಚ್ಚಳಕ್ಕೆ 6700 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದರು.
ಮುಖ್ಯ ಘೋಷಣೆಗಳು:
- ಮಾರ್ಚ್ 1ಕ್ಕಿದ್ದ ಬೆಳೆ ಸಾಲದ ಮೇಲಿನ ಕಂತು ಪಾವತಿ ಅಂತಿಮ ದಿನಾಂಕವನ್ನು ಮೇ 31ಕ್ಕೆ ವಿಸ್ತರಣೆ.
- ವಲಸೆ ಕಾರ್ಮಿಕರು ಹಾಗೂ ಬೀದಿ ವ್ಯಾಪಾರಿಗಳಿಗೆ 5 ಸಾವಿರ ಕೋಟಿ ರೂಪಾಯಿ ಸಾಲ. 50 ಲಕ್ಷ ಬೀದಿ ವ್ಯಾಪಾರಿಗಳಿಗೆ ನೆರವು. ತಮ್ಮ ವ್ಯಾಪಾರ ಪುನರಾರಂಭಿಸಲು 10 ಸಾವಿರ ರೂಪಾಯಿ ನಿಗದಿ.
- ವಲಸೆ ಕಾರ್ಮಿಕರ ಹಿತ ಕಾಯಲು ಮುಂದಿನ ಎರಡು ತಿಂಗಳು ಉಚಿತ ಆಹಾರ ಧಾನ್ಯ. 8 ಕೋಟಿ ವಲಸಿಗರಿಗೆ ಇದರಿಂದ ಉಪಯೋಗ.
- ಪಡಿತರ ಚೀಟಿ ಪೋರ್ಟಬಿಲಿಟಿ ಮಾಡಲು ಅವಕಾಶ. ಇದರ ಮೂಲಕ ದೇಶದ ಯಾವುದೇ ಸ್ಥಳದಲ್ಲಿ ಪಡಿತರ ಪಡೆದುಕೊಳ್ಳಲು ಅವಕಾಶ. ಇದರಿಂದ 67 ಕೋಟಿ ಪಡಿತರದಾರರಿಗೆ ಪ್ರಯೋಜನ.
- ಕನಿಷ್ಠ 10 ಮಂದಿ ಕೆಲಸ ಮಾಡುವ ಸ್ಥಳಗಳಿಗೆ ಕನಿಷ್ಠ ವೇತನ ಸಿಗುವ ಕಾನೂನು
-
14.62 ಲಕ್ಷ ಮಾನವ ಕೆಲಸ ಸೃಷ್ಟಿ
-
ರಾಜ್ಯ ವಿಪತ್ತು ನಿಧಿ ಬಳಸಿ ವಸತಿಹೀನರಿಗೆ ಮೂರು ಹೊತ್ತಿನ ಊಟ ನೀಡಲು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಅನುಮತಿ
- ವಲಸೆ ಕಾರ್ಮಿಕರ ಬಾಡಿಗೆ ಮನೆಗಳಿಗೆ ನಿರ್ಧಿಷ್ಟ ಬಾಡಿಗೆ ನಿಗದಿಗೆ ಕ್ರಮ. ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚನೆ.
- ತಮ್ಮ ತಮ್ಮ ರಾಜ್ಯಗಳಿಗೆ ಹಿಂದಿರುಗಿರುವ ವಲಸೆ ಕಾರ್ಮಿಕರ ದಾಖಲಾತಿಯನ್ನು ಸೂಕ್ತವಾಗಿ ಮಾಡಲು ಕ್ರಮ.
- 25 ಲಕ್ಷ ಕಿಸಾನ್ ಕಾರ್ಡ್. 2.5 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ಉಪಯೋಗ
- ರೈತರಿಗೆ 30 ಸಾವಿರ ಹೆಚ್ಚುವರಿ ತುರ್ತು ಸಾಲ. ಮೀನುಗಾರರಿಗೂ, ಪಶುಪಾಲಕರಿಗೆ ಇದರಿಂದ ಉಪಯೋಗ.
- 12 ಸಾವಿರ ಸ್ವಸಹಾಯ ಸಂಘಗಳಿಂದ 3 ಕೋಟಿ ಮಾಸ್ಕ್ ತಯಾರಿ.
- 6 ರಿಂದ 8 ಲಕ್ಷ ವಾರ್ಷಿಕ ಆದಾಯ ಇರುವ ಮಧ್ಯಮ ಆದಾಯ ಹೊಂದಿರುವವರಿಗೆ ಸಬ್ಸಿಡಿ ವಿಸ್ತರಣೆ. 2.5 ಲಕ್ಷ ಕುಟುಂಬಗಳಿಗೆ ಇದರಿಂದ ಉಪಯೋಗ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ