ಚಿತ್ರದುರ್ಗ:
ದೂರಸಂಪರ್ಕ ಕ್ರಾಂತಿ ಮೂಲಕ ದೇಶದ ಯುವಜನತೆ ಮೇಲೆ ವಿಶ್ವಾಸವಿಟ್ಟು ಹದಿನೆಂಟನೆ ವಯಸ್ಸಿಗೆ ಮತದಾನದ ಹಕ್ಕು ನೀಡಿದ ಮಾಜಿ ಪ್ರಧಾನಿ ದಿವಂಗತ ರಾಜೀವ್ಗಾಂಧಿರವರ ಆದರ್ಶ, ಚಿಂತನೆ, ತತ್ವಸಿದ್ದಾಂತಗಳನ್ನು ಕಾರ್ಯಕರ್ತರು ಮೈಗೂಡಿಸಿಕೊಂಡು ದೇಶಸೇವೆಗೆ ಮುಂದಾಗಿ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ರಾಜೀವ್ಗಾಂಧಿರವರ ಪುಣ್ಯತಿಥಿಯಲ್ಲಿ ರಾಜೀವ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಹೆಚ್.ಆಂಜನೇಯ ಇಂದಿರಾಗಾಂಧಿ ಹತ್ಯೆಯ ನಂತರ ದೇಶದ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಂಡ ರಾಜೀವ್ಗಾಂಧಿ 21 ನೇ ಶತಮಾನಕ್ಕೆ ದೇಶವನ್ನು ಸಜ್ಜುಗೊಳಿಸಿದ್ದರಿಂದಲೇ ಇಂದು ಎಲ್ಲರ ಬಳಿ ಟಿವಿ, ಮೊಬೈಲ್ಗಳಿವೆ.
ತೋಳ್ಬಲ, ಹಣಬಲವಿದ್ದವರು ಮಾತ್ರ ಅಧಿಕಾರ ಚಲಾಯಿಸುತ್ತಿದ್ದುದನ್ನು ಗಮನಿಸಿದ ರಾಜೀವ್ಗಾಂಧಿರವರು ಪಂಚಾಯತ್ರಾಜ್ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಅಧಿಕಾರ ವಿಕೇಂದ್ರಿಕರಣಗೊಳಿಸಿ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಒದಗಿಸಿದರು ಎಂದು ಸ್ಮರಿಸಿದರು.
ರಾಜೀವ್ಗಾಂಧಿರವರ ಕೊಡುಗೆಯನ್ನು ನಮ್ಮದೆಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರಮೋದಿ ಧರ್ಮ ಧರ್ಮಗಳ ವಿರುದ್ದ ಘರ್ಷಣೆಯಿಟ್ಟು. ಓಟಿನ ಲಾಭ ಪಡೆಯುತ್ತಿದ್ದಾರೆ. ಮನಮೋಹನ್ಸಿಂಗ್ ಶ್ರೇಷ್ಟ ಆರ್ಥಿಕ ತಜ್ಞರು ಎನ್ನುವುದನ್ನು ಕೋಮುವಾದಿ ಬಿಜೆಪಿ ಮರೆತಂತಿದೆ. ಏಕತೆ, ಸಮಗ್ರತೆ, ಸಾಮರಸ್ಯ ಬಲಪಡಿಸುವ ಚಿಂತನೆ ಹೊಂದಿದ್ದೆ ರಾಜೀವ್ ಹತ್ಯೆಗೆ ಕಾರಣ. ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಹಿನ್ನೆಡೆಯಾಗಿದೆ. ಅದಕ್ಕಾಗಿ ಯಾರು ನಿರಾಶರಾಗುವುದು ಬೇಡ.
ಅಧಿಕಾರಕ್ಕಾಗಿಯೆ ಹಪಹಪಿಸುವ ಬದಲು ತಳಹಂತದಿಂದ ಪಕ್ಷದ ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ಅಧಿಕಾರ ಹುಡುಕಿಕೊಂಡು ಬರುತ್ತದೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.ಯಾವುದೇ ಸಾಕ್ಷಿ ಪುರಾವೆಗಳಿಲ್ಲದೆ ರಾಜೀವ್ಗಾಂಧಿ ಮೇಲೆ ಭೋಫೋರ್ಸ್ ಹಗರಣ ಸುತ್ತಿಕೊಂಡಿತು. ಈಗಿನ ಕೇಂದ್ರ ಬಿಜೆಪಿ.ಯವರು ರಫೇಲ್ ಹಗರಣದಲ್ಲಿ ಭಾಗಿಯಾಗಿರುವುದನ್ನು ಅಂಕಿ ಅಂಶಗಳ ಸಮೇತ ದೃಢಪಡಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಕಳಂಕವನ್ನೇ ಪ್ರಚಾರವೆಂದು ಬಿಂಬಿಸಿಕೊಳ್ಳುತ್ತಿರುವ ಬಿಜೆಪಿ.ಯ ಹಿಟ್ಲರ್ ಆಡಳಿತ ಕೊನಗೊಳ್ಳಬೇಕಿದೆ. ಅದಕ್ಕಾಗಿ ಕಾರ್ಯಕರ್ತರು ಮತ್ತು ಮುಖಂಡರುಗಳು ಈಗಿನಿಂದಲೆ ಪಕ್ಷ ಬಲವರ್ಧನೆಗೆ ತೊಡಗಿಕೊಳ್ಳಿ ಎಂದರು.ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಮೇ 21 ಕಾಂಗ್ರೆಸ್ ಪಕ್ಷಕ್ಕೆ ದುಃಖದ ದಿನ. ರಾಜೀವ್ಗಾಂಧಿರವರಿಗೆ ದೀನ ದಲಿತರು, ಬಡವರು ದೇಶದ ಬಗ್ಗೆ ಅಪಾರವಾದ ಕಾಳಜಿ ಬದ್ದತೆಯಿತ್ತು. ಹೃದಯ ವೈಶಾಲತೆ ಹೊಂದಿದ್ದ ರಾಜೀವ್ಗಾಂಧಿ ದೇಶದ ಅಭಿವೃದ್ದಿಗೆ ತುಡಿಯುತ್ತಿದ್ದರು. ಆದರೆ ಈಗ ಹೃದಯವಿಲ್ಲದವರ ಕೈಗೆ ಅಧಿಕಾರ ಸಿಕ್ಕಿದೆ. ಹಚ್ಚೆ ದಿನ್ ಆಯೇಗಾ ಎಂದು ಬೊಬ್ಬೆ ಹೊಡೆಯುತ್ತಿದ್ದ ಕೋಮುವಾದಿ ಬಿಜೆಪಿ.ಯಿಂದ ದೇಶದ ಜನ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯನ್ನೇ ಅನುಭವಿಸಿಕೊಂಡು ಬರುತ್ತಿದ್ದಾರೆ. ಇಂದಿನ ಕಷ್ಟದ ಪರಿಸ್ಥಿತಿಯಲ್ಲಿ ಇಂದಿರಾಗಾಂಧಿ, ರಾಜೀವ್ಗಾಂಧಿಯವರಂತ ನಾಯಕರಿರಬೇಕಿತ್ತು ಎಂದು ದುಃಖಿಸಿದರು.
ಕೊರೋನಾ ವೈರಸ್ನಿಂದಾಗಿ ಇಡಿ ದೇಶವೇ ಲಾಕ್ಡೌನ್ ಆಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಪ್ಯಾಕೇಜ್ಗಳನ್ನು ಘೋಷಿಸಿವೆ. ಆದರೆ ಅವುಗಳೆಲ್ಲವೂ ಘೋಷಣೆಯಾಗಿ ಉಳಿದುಕೊಂಡಿದೆಯೇ ವಿನಃ ಸಂಕಷ್ಟದಲ್ಲಿರುವವರ ಕೈಸೇರಿಲ್ಲ. ಅನ್ನ ಆಹಾರಕ್ಕಾಗಿ ಬಡವರು, ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಕಷ್ಟಕಾಲಕ್ಕೆ ಇಲ್ಲದ ನೆರವು ಏನು ಪ್ರಯೋಜನ ಎಂದು ಬಿಜೆಪಿ.ಯ ನಿರ್ಲಕ್ಷೆ ವಿರುದ್ದ ಕಿಡಿಕಾರಿದರು.
ಪುಣ್ಯತಿಥಿಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ ದೂರದೃಷ್ಟಿಯುಳ್ಳವರಾಗಿದ್ದ ರಾಜೀವ್ಗಾಂಧಿ ದೇಶದ ಪ್ರಧಾನಿಯಾದ ಮೇಲೆ ಸಾಕಷ್ಟ ಬದಲಾವಣೆ ತಂದ ಪರಿಣಾಮ ಇಂದು ಎಲ್ಲರ ಕೈಯಲ್ಲಿಯೂ ಮೊಬೈಲ್ ಹರಿದಾಡುತ್ತಿದೆ. ಇಂದಿರಾಗಾಂಧಿ ಹತ್ಯೆಯ ನಂತರ ರಾಜೀವ್ಗಾಂಧಿ ಪೈಲೆಟ್ ಹುದ್ದೆಯನ್ನು ತ್ಯಜಿಸಿ ದೇಶದ ಜವಾಬ್ದಾರಿ ವಹಿಸಿಕೊಂಡರು.
ಪಂಚಾಯತ್ರಾಜ್ ವ್ಯವಸ್ಥೆ ಜಾರಿಗೆ ತಂದ ಅವರಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಿತ್ತು. ಎಂದು ಗುಣಗಾನ ಮಾಡಿದರು.ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಹಿರಿಯ ಉಪಾಧ್ಯಕ್ಷರುಗಳಾದ ಆರ್.ಕೆ.ನಾಯ್ಡು, ಶಬ್ಬೀರ್ಅಹಮದ್, ಅಜ್ಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಸಂಪತ್ಕುಮಾರ್, ಹೆಚ್.ಶಬ್ಬೀರ್ಭಾಷ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಓ.ಬಿ.ಸಿ.ಜಿಲ್ಲಾಧ್ಯಕ್ಷ ಜಿ.ಮನೋಹರ್, ಹಸನ್ತಾಹೀರ್, ಮಹಮದ್ ಜಿ.ಆರ್.ಹಳ್ಳಿ ಸೇರಿದಂತೆ ಅನೇಕ ಕಾರ್ಯಕರ್ತರು ಪುಣ್ಯತಿಥಿಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
