ಶಿರಾ
ಸೋಮವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಪೂಜಾರಮುದ್ದನಹಳ್ಳಿ, ರಾಗಲಹಳ್ಳಿ, ಕಲ್ಲಹಳ್ಳಿ, ಸೀಗಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸಂತ್ರಸ್ತ ರೈತರ ತೋಟಗಳಿಗೆ ಶಾಸಕ ಬಿ.ಸತ್ಯನಾರಾಯಣ್ ಮಂಗಳವಾರ ಭೇಟಿ ನೀಡಿದರು.
ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಪೂಜಾರಮುದ್ದನಹಳ್ಳಿ ಗೇಟ್ ಬಳಿ ಬಿರುಗಾಳಿಗೆ ನೆಲಕಚ್ಚಿದ ವಿದ್ಯುತ್ ಕಂಬಗಳು, ಸುಟ್ಟು ಹೋದ ಟ್ರಾನ್ಸ್ಫಾರ್ಮರ್ಗಳನ್ನು ಪರಿಶೀಲಿಸಿದರು.ಪೂಜಾರ ಮುದ್ದನಹಳ್ಳಿಯ ಶ್ರೀ ಸಿದ್ಧಾರೂಢ ಶಿವಾಶ್ರಮಕ್ಕೆ ಭೇಟಿ ನೀಡಿದ ಅವರು, ಗಾಳಿಗೆ ಬಿದ್ದು ಹೋದ ಮಠದ ಮೇಲ್ಛಾವಣಿ, ಮರಗಳು ಹಾಗೂ ತೋಟದ ವೀಕ್ಷಣೆ ಮಾಡಿದರು.
ವಿವಿಧ ಗ್ರಾಮಗಳ ರೈತರ ತೆಂಗು, ಬಾಳೆ, ಅಡಕೆ, ಪಪ್ಪಾಯಿ, ಮಾವು ಸೇರಿದಂತೆ ಬೆಲೆ ಬಾಳುವ ಬೆಳೆಗಳು ನಷ್ಟಗೊಂಡಿದ್ದು, ರೈತರಾದ ಚಂದ್ರಪ್ಪ, ಸಿದ್ಧಪ್ಪ, ಆರತಿ ವೀರಪ್ಪ ಸೇರಿದಂತೆ ಹಲವು ರೈತರ ತೋಟಗಳಿಗೆ ಭೇಟಿ ನೀಡಿ ಸಂತ್ರಸ್ತ ರೈತರಿಗೆ ಧೈರ್ಯ ತುಂಬಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಿ. ಸತ್ಯನಾರಾಯಣ್, ಶಿರಾ ಭಾಗದಲ್ಲಿ ಈಗಾಗಲೆ ಸಮರ್ಪಕವಾಗಿ ಮಳೆ-ಬೆಳೆ ಇಲ್ಲದೆ ನೊಂದಿದ್ದು, ಇದೀಗ ಬಿರುಗಾಳಿಯಂತಹ ಪ್ರಕೃತಿ ವಿಕೋಪದಿಂದ ರೈತರು ಮತ್ತಷ್ಟು ಸಂದಿಗ್ಧತೆಗೆ ಸಿಲುಕಿದ್ದಾರೆ. ಸಂತ್ರಸ್ತ ರೈತರಿಗೆ ಸರ್ಕಾರದಿಂದ ನೆರವು ದೊರಕಿಸುವಂತೆ ಒತ್ತಾಯಿಸಿ ಈಗಾಗಲೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಸಿ.ಆರ್.ಉಮೇಶ್, ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಮೂಡಲಗಿರಿಯಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ಎಸ್.ಎಲ್.ಗೋವಿಂದರಾಜು, ಸೀಗಲಹಳ್ಳಿ ವೀರೇಂದ್ರ, ಆರತಿವೀರಪ್ಪ, ಹಂದಿಕುಂಟೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ್, ಲಕ್ಕನಹಳ್ಳಿ ಮಂಜುನಾಥ್, ಕೋಟೆ ಮಹದೇವ್, ಹಂದಿಕುಂಟೆ ಚಂದ್ರಶೇಖರ್, ಈರಣ್ಣ, ತಾ.ಪಂ. ಇ.ಓ. ಮೋಹನ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗನಾಥ್, ಬೆಸ್ಕಾಂ ಇಲಾಖೆಯ ಶಾಂತರಾಜು, ಜಲ್ದೇಶ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ವಿಜಯ, ಸಹಾಯಕ ತೋಟಗಾರಿಕಾ ಅಧಿಕಾರಿ ತ್ಯಾಗರಾಜು, ಹುಲಿಕುಂಟೆ ಉಪ ತಹಸೀಲ್ದಾರ್ ಚಂದ್ರಣ್ಣ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
