ಕೆ ಎಸ್ ಆರ್ ಟಿ ಸಿಯಿಂದ ಸಂಕಷ್ಟ ನಿಭಾಯಿಸಲು ನಾನಾ ಕಸರತ್ತು ..!

ಬೆಂಗಳೂರು

    ಲಾಕ್‍ಡೌನ್‍ನಿಂದ ಸಂಕಷ್ಟ ಅನುಭವಿಸುತ್ತಿರುವ ಕೆಎಸ್‍ಆರ್‍ಟಿಸಿ ಆರ್ಥಿಕ ಹೊರೆಯನ್ನು ತಪ್ಪಿಸಲು ವಿವಿಧ ಮಾರ್ಗೋಪಾಯಗಳ ಮೊರೆ ಹೋಗುತ್ತಿದ್ದು, ಇದಕ್ಕಾಗಿ ಅಧಿಕಾರಿಗಳು ಕಸರತ್ತು ಆರಂಭಿಸಿದ್ದಾರೆ.

     ಕೆಎಸ್‍ಆರ್‍ಟಿಸಿ ತನ್ನ ಸಿಬ್ಬಂದಿಗೆ ವೇತನ ರಹಿತ ಕಡ್ಡಾಯ ರಜೆ ನೀಡಲು ಚಿಂತನೆ ನಡೆಸಿದೆ. ಆರ್ಥಿಕ ಹೊರೆ ತಪ್ಪಿಸಲು ಶೇಕಡ 50ರಷ್ಟು ಸಿಬ್ಬಂದಿಗೆ ನಾಲ್ಕು ತಿಂಗಳ ಕಡ್ಡಾಯ ರಜೆ ನೀಡುವ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎನ್ನಲಾಗಿದೆ.1.20 ಲಕ್ಷ ಸಿಬ್ಬಂದಿಯಲ್ಲಿ 60 ಸಾವಿರ ಸಿಬ್ಬಂದಿಗೆ ಕಡ್ಡಾಯವಾಗಿ ರಜೆ ನೀಡಲು ಇಲಾಖೆ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭದ್ರತೆ ಹಾಗೂ ಹೊರ ಗುತ್ತಿಗೆ ನೌಕರರನ್ನು ಕೈ ಬಿಡುವ ಬಗ್ಗೆಯೂ ಇಲಾಖೆ ತೀರ್ಮಾನ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

     656 ಕೋಟಿ ರೂ. ಪ್ರತಿ ತಿಂಗಳೂ ಸಿಬ್ಬಂದಿ ವೇತನ ಹಾಗೂ ಭತ್ಯೆ ಪಾವತಿಸಬೇಕಿರುವ ಕೆಎಸ್‍ಆರ್‍ಟಿಸಿ, ಆರ್ಥಿಕ ಮಿತವ್ಯಯ ಸಾಧಿಸದಿದ್ದರೆ ನಷ್ಟ ಸರಿದೂಗಿಸಲು ಕಷ್ಟ ಸಾಧ್ಯ. ಈಗಾಗಲೇ ಸಾರಿಗೆ ನಿಗಮಗಳು ಭಾರಿ ನಷ್ಟಕ್ಕೆ ತುತ್ತಾಗಿದ್ದು, ಇದು ಮುಂದೆಯೂ ಇದೇ ರೀತಿ ಮುಂದುವರಿದರೆ ಸಂಸ್ಥೆಯನ್ನು ನಡೆಸುವುದು ಕಷ್ಟ ಎಂಬ ತೀರ್ಮಾನಕ್ಕೆ ಬಂದಿದೆ.

    ವೇತನ ಪಾವತಿಸಲು ಕಳೆದೆರಡು ತಿಂಗಳಿಂದ ಸರ್ಕಾರದ ಮೇಲೆ ಅವಲಂಬಿತವಾಗಿದೆ. ಪದೇ ಪದೇ ಸರ್ಕಾರ ಕೂಡ ವೇತನ ನೀಡುವುದಿಲ್ಲ ಎಂದ ಸತ್ಯವನ್ನು ಅರಿತಿರುವ ಸಾರಿಗೆ ಸಂಸ್ಥೆ, ಈ ನಿರ್ಧಾರಕ್ಕೆ ಬಂದಿದೆ.

     ಇಲಾಖೆಯಲ್ಲಿ 50 ವರ್ಷ ಮೇಲ್ಪಟ್ಟವರು, ಮಧುಮೇಹ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಜೆ ನೀಡುವುದು ಅಥವಾ ಸಂಸ್ಥೆಯಲ್ಲಿರುವ 1.20 ಲಕ್ಷ ಸಿಬ್ಬಂದಿಗೆ ರೊಟೇಷನ್ ಆಧಾರದಲ್ಲಿ ಕರ್ತವ್ಯ ವಹಿಸುವುದು. ಅಂದರೆ ಪ್ರತಿ 15 ದಿನ ಕೆಲಸ ಮಾಡಿದರೆ, ಇನ್ನು 15 ದಿನ ರಜೆ ನೀಡುವುದು ಎಂಬ ಪ್ರಸ್ತಾವನೆ ಸಲ್ಲಿಕೆಯಾಗಿದೆ.

    ಈ ರೀತಿ ಮಾಡುವ ಮೂಲಕ ಆರ್ಥಿಕ ಹೊರೆಯನ್ನು ನಿಭಾಯಿಸಬಹುದು ಎಂಬುದರ ಬಗ್ಗೆಯೂ ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದಿದೆ. ಯಾವುದೇ ಸಿಬ್ಬಂದಿ ಮದುವೆ, ಮತ್ತಿತರ ಕಾರ್ಯಕ್ರಮಗಳಿಗೆ ದೀರ್ಘಾವಧಿ ರಜೆ ಕೇಳಿದರೂ ತಕ್ಷಣ ಅವರು ಕೇಳಿದಷ್ಟು ರಜೆಯನ್ನು ವೇತನರಹಿತವಾಗಿ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

     ಲಾಕ್‍ಡೌನ್ ಸಡಿಲಿಕೆಯಾದರೂ ಸಾರಿಗೆ ಸಂಸ್ಥೆಗಳು ಈ ಹಿಂದಿನಂತೆ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ. ಪ್ರತಿ ಬಸ್‍ನಲ್ಲಿ 30 ಜನರನ್ನು ಕರೆದುಕೊಂಡು ಹೋದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸಾರಿಗೆ ಇಲಾಖೆ ಈ ಎಲ್ಲಾ ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link