ತಿರುವನಂತಪುರಂ:
ಕೋವಿಡ್ ಸೋಂಕು ಇಲ್ಲದ ಭಕ್ತಾದಿಗಳಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.
ಕೋವಿಡ್ ಲಾಕ್ ಡೌನ್ ಸಮಯದಿಂದ ಶಬರಿಮಲೆಗೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ತಿಂಗಳ ವಿಶೇಷ ಪೂಜೆಯ ಸಮಯದಲ್ಲಿಯೂ ಸಿಬ್ಬಂದಿಗಳು ಮಾತ್ರ ಭೇಟಿ ನೀಡುತ್ತಿದ್ದಾರೆ. ಜೂನ್ 15ರಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ಬಳಿಕ ಸರ್ಕಾರ ತನ್ನ ತೀರ್ಮಾನವನ್ನು ವಾಪಸ್ ಪಡೆದಿತ್ತು.
ನವೆಂಬರ್ 15 ರಿಂದ ಜನವರಿ 20ರ ವರೆಗೆ ಶಬರಿಮಲೆ ತೀರ್ಥಯಾತ್ರೆ ನಡೆಯಲಿದ್ದು, ಈ ಬಾರಿ ಕೊರೊನಾ ಭೀತಿ ಇರುವುದರಿಂದ ಸೀಮಿತ ಸಂಖ್ಯೆಯ ಯಾತ್ರಾರ್ಥಿಗಳೊಂದಿಗೆ ಆಚರಣೆಗಳನ್ನು ನಡೆಸಲಾಗುವುದು ಮತ್ತು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಅಕ್ಟೋಬರ್ 16ರಂದು ಒಂದು ವಾರದ ವಿಶೇಷ ಪೂಜೆಗಾಗಿ ದೇವಾಲಯ ಬಾಗಿಲು ತೆರೆಯಲಾಗುತ್ತದೆ. ಆಗ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನವೆಂಬರ್ 15ರ ತನಕ ದರ್ಶನ ಪಡೆಯಬಹುದಾಗಿದೆ. ಆದರೆ, ಭಕ್ತರು ದೇವಾಲಯದ ಆವರಣದಲ್ಲಿ ಇರುವಂತಿಲ್ಲ ಅಭಿಷೇಕ, ಪೂಜೆಗಳನ್ನು ಮಾಡುವಂತಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.
ಈ ಬಾರಿಯ ನಿಯಮಗಳು ಹೀಗಿವೆ:
- ಯಾತ್ರಾರ್ಥಿಗಳು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಅದೇ ದಿನ ಹಿಂದಿರುಗಬೇಕು
- ಅವರಿಗೆ ಅಲ್ಲಿಯೇ ಉಳಿಯುವ ವ್ಯವಸ್ಥೆ ಈ ಬಾರಿ ಇರುವುದಿಲ್ಲ
- ಕೆಲ ಭಕ್ತರಿಗೆ ಮಾತ್ರ ಪೇಪರ್ ತಟ್ಟೆಗಳಲ್ಲಿ ಅನ್ನದಾನದ ವ್ಯವಸ್ಥೆ ಇರುತ್ತದೆ
- ದೇವಾಲಯ ಮಂಡಳಿ ಗೊತ್ತುಪಡಿಸಿದ ಸ್ಥಳದಲ್ಲಿ ಅಭಿಷೇಕಕ್ಕಾಗಿ ತುಪ್ಪ ಸಂಗ್ರಹಿಸಲು ವಿಶೇಷ ವ್ಯವಸ್ಥೆ ಮಾಡಲಾಗುವುದು
- ಭಕ್ತರು ಬೆಟ್ಟವನ್ನು ಏರುವಾಗ ಮಾಸ್ಕ್ ಕಡ್ಡಾಯ
- ಪಂಪಾ ನದಿಯಲ್ಲಿ ಸ್ನಾನ ಮಾಡಲು ಅವಕಾಶವಿಲ್ಲ, ಸ್ನಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು
- ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ವಿಶೇಷ ಸೇವೆಗಳನ್ನು ನೀಡಲಿದೆ
- ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳನ್ನು ನಿಯೋಜಿಸಲಿದೆ
ಬೇರೆ ರಾಜ್ಯದಿಂದ ಆಗಮಿಸುವ ಭಕ್ತರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ತರಬೇಕು. ಪಂಪಾ ಬಳಿ ಭಕ್ತರಿಗೆ ಆಂಟಿಜೆನ್ ಟೆಸ್ಟ್ ನಡೆಸಲು ಸಹ ದೇವಾಲಯದ ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ಮಾರ್ಗಸೂಚಿ ತಯಾರು ಮಾಡಲಿದೆ. ಮಾರ್ಗಸೂಚಿ ಅನ್ವಯ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ