ಗುಬ್ಬಿ :
ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಪರಿಶಿಷ್ಟ ಪಂಗಡದ ಏಕೈಕ ಅಭ್ಯರ್ಥಿ ಬಿಜೆಪಿಯ ಜಿ.ಎನ್.ಅಣ್ಣಪ್ಪಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಆದರೆ ತೀವ್ರ ಕುತೂಹಲಕ್ಕೆ ಕಾರಣವಾದ ಸಾಮಾನ್ಯ ಮಹಿಳಾ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನ ಹತ್ತು ಸದಸ್ಯರ ಬೆಂಬಲದೊಂದಿಗೆ 11 ಮತಗಳು ಪಡೆದು ಪಕ್ಷೇತರ ಸದಸ್ಯೆ ಕೆ.ಮಹಾಲಕ್ಷ್ಮೀ ಜಯಶೀಲರಾದರು.
ಬಹುಮತವಿಲ್ಲದ ಬಿಜೆಪಿ ಅಧ್ಯಕ್ಷ ಗಾದಿಗೇರಿದರೆ, ಸ್ಪಷ್ಟ ಬಹುಮತವಿರುವ ಜೆಡಿಎಸ್ ಉಪಾಧ್ಯಕ್ಷ ಸ್ಥಾನ ಪಡೆದುಕೊಳ್ಳುವ ಮೂಲಕ ಸ್ಥಳೀಯ ಸಂಸ್ಥೆಗೆ ದ್ವಿಪಕ್ಷೀಯ ಆಡಳಿತದ ನಾಂದಿ ಹಾಡಿದರು.
ಒಟ್ಟು 19 ಸದಸ್ಯರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಎರಡು ವರ್ಷಗಳ ನಂತರ ಕಾಲ ಕೂಡಿಬಂದಿದ್ದು. 10 ಸ್ಥಾನ ಪಡೆದುಕೊಂಡ ಜೆಡಿಎಸ್ ಬಹುಮತ ವಿದ್ದರೂ, ಅಧ್ಯಕ್ಷ ಸ್ಥಾನದ ಮೀಸಲು ಪರಿಶಿಷ್ಟ ಪಂಗಡಕ್ಕೆ ನಿಗದಿಯಾಗಿ್ದು,6 ಸ್ಥಾನ ಹೊಂದಿರುವ ಬಿಜೆಪಿಯಲ್ಲಿನ ಜಿ.ಎನ್.ಅಣ್ಣಪ್ಪಸ್ವಾಮಿ ಅವರೊಬ್ಬರೇ ಪ್ರತಿನಿಧಿ ಇದ್ದರಿಂದ ಏಕೈಕ ಅಭ್ಯರ್ಥಿಯಾಗಿ ಉಮೇದುವಾರಿಕೆ ಪ್ರತಿಸ್ಪರ್ಧಿ ಇಲ್ಲದೆ ಅಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಪಡೆದುಕೊಂಡಿದ್ದಾರೆ. ಇದು ಪಟ್ಟಣ ಪಂಚಾಯಿತಿ ಇತಿಹಾಸದಲ್ಲಿ ಬಿಜೆಪಿ ಬಾವುಟ ಮೊದಲ ಬಾರಿ ಹಾರಿಸಲಾಗಿದೆ. ಆದರೆ ಸಾಮಾನ್ಯ ಮಹಿಳಾ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನಲ್ಲಿ ತೀವ್ರ ಪೈಪೋಟಿ ಕಂಡು ಬಂದ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಸ್ಪಷ್ಟ ಸಂಖ್ಯೆ ಪಡೆದುಕೊಳ್ಳಲು ಒಂದಾಟವನ್ನು ಆಡಿದ್ದು ಚುನಾವಣೆ ಮುಗಿಯುವವರೆಗೆ ಕೌತುಕಕ್ಕೆ ಕಾರಣವಾಗಿತ್ತು.
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಕೆ.ಮಹಾಲಕ್ಷ್ಮೀ, ಬಿಜೆಪಿ ಬೆಂಬಲಿತ ಕಾಂಗ್ರೆಸ್ನ ಆಯೀಷಾ ತಸ್ಲೇನಾ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸವಿತಾ.ಎಸ್.ಗೌಡ ನಾಮಪತ್ರ ಸಲ್ಲಿಸಿದ್ದರು. ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಎಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ವ್ಯತ್ಯಾಸವಾಗುವುದೇ ಎಂದು ಆತಂಕ ಮನೆ ಮಾಡಿತ್ತು. ಆದರೆ ನಿರೀಕ್ಷೆಯಂತೆ ಶಾಸಕರ ಮತ ಸೇರಿ 11 ಮತಗಳು ಪಡೆದ ಕೆ.ಮಹಾಲಕ್ಷ್ಮೀ ಉಪಾಧ್ಯಕ್ಷರಾಗಿ ಚುನಾಯಿತರಾದರು. ಪ್ರತಿಸ್ಪರ್ಧಿ ಕಾಂಗ್ರೆಸ್ನ ಆಯೀಷಾ ತಸ್ಲೇನಾ ಸಂಸದರ ಮತ ಸೇರಿ 9 ಮತಗಳು ಗಳಿಸಿ ಪರಾಜಯಗೊಂಡರು. ಬಂಡಾಯವಾಗಿದ್ದ ಸವಿತಾ.ಎಸ್.ಗೌಡ ಅವರ ಒಂದು ಮತ ಮಾತ್ರ ಹಾಕಿಕೊಂಡು ಕಣದಿಂದ ಹಿಂದೆ ಸರಿಯದೇ ಪಕ್ಷಕ್ಕೆ 20 ವರ್ಷಗಳಿಂದ ದುಡಿದಿದ್ದರೂ ತಮಗೆ ಜೆಡಿಎಸ್ ಪಕ್ಷ ಬೆಂಬಲ ಸೂಚಿಸಿಲ್ಲ ಎಂದು ನಿರಾಸೆ ವ್ಯಕ್ತಪಡಿಸಿದರು.
ಅನುದಾನ ಕೊಡ್ತಾರಾ ನೋಡೋಣ: ಚುನಾವಣೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಆರ್.ಶ್ರೀನಿವಾಸ್ ಸ್ಪಷ್ಟ ಬಹುಮತವಿದ್ದರೂ ಮೀಸಲಾತಿ ಅನ್ವಯ ನಮ್ಮಲ್ಲಿ ಅಭ್ಯರ್ಥಿ ಇಲ್ಲದ ಕಾರಣ ಪರಿಶಿಷ್ಟ ಪಂಗಡದ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ. ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿಗೆ 11 ಮತಗಳೊಂದಿಗೆ ವಿಜಯ ದೊರೆಕಿದೆ. ಕಳೆದ ಒಂದು ವರ್ಷದಿಂದ ಅಭಿವೃದ್ದಿ ಕೆಲಸಗಳಿಗೆ ಸರ್ಕಾರಿದಿಂದ ಅನುದಾನ ಬರುತ್ತಿಲ್ಲ. ಅಲ್ಪ ಹಣದಲ್ಲೇ ಕೆಲಸ ನಡೆದಿದೆ. ಮುಂದಿನ ದಿನದಲ್ಲಿ ಬಿಜೆಪಿ ಸರ್ಕಾರ ಅನುದಾನ ನೀಡುತ್ತದೆಯೇ ಕಾದು ನೋಡಬೇಕಿದೆ ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಉಪಾಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದೆವು. ಆದರೆ 9 ಮತಗಳ ಪಡೆದು ಸೋಲು ಒಪ್ಪಿಕೊಳ್ಳಬೇಕಾಯಿತು. ಆದರೆ ಮುಂದಿನ ಸ್ಥಳೀಯ ಅಭಿವೃದ್ದಿಗೆ ನಡೆಯುವ ಸಭೆಗಳಿಗೆ ಕೋರಂ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಸದಸ್ಯರು ಸೇರಿದಂತೆ ಬಂಡಾಯದ ಅಭ್ಯರ್ಥಿ ಸಹಕಾರ ನಮಗೆ ಸಿಗಲಿದೆ. ಈ ನಿಟ್ಟಿನಲ್ಲಿ ಅಭಿವೃದ್ದಿ ವೇಗವಾಗಿ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ಎರಡು ವರ್ಷಗಳಿಂದ ನೆನಗುದಿಗೆ ಬಿದ್ದ ಕೆಲಸಗಳಿಗೆ ಚಾಲ್ತಿ ನೀಡಲಾಗುವುದು. ಮೂಲಭೂತ ಸವಲತ್ತುಗಳಾದ ರಸ್ತೆ, ಬೀದಿದೀಪ, ನೀರು, ಕಸ ವಿಲೇವಾರಿ ವಿಚಾರಗಳಿಗೆ ನಿಗಾವಹಿಸಲಾಗುವುದು ಅಲ್ಲದೆ ಪಟ್ಟಣದ ಸರ್ವತೋಮುಕ ಅಭಿವೃಧ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು.
ತಹಸೀಲ್ದಾರ್ ಡಾ.ಪ್ರದೀಪ್ಕುಮಾರ್ಹಿರೇಮಠ್ ಚುನಾವಣಾಧಿಕಾರಿಯಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಬಿಜೆಪಿ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ, ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಹೆಚ್.ಜಗನ್ನಾಥ್, ಪಪಂ ಸದಸ್ಯ ಜಿ.ಆರ್.ಶಿವಕುಮಾರ್, ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಎನ್.ಸಿ.ಪ್ರಕಾಶ್, ಎಸ್.ಡಿ.ದಿಲೀಪ್ಕುಮಾರ್, ಚಂದ್ರಶೇಖರಬಾಬು, ಕೆ.ಬಿ.ಕೃಷ್ಣಪ್ಪ ಮುಂತಾದವರು ಭಾಗವಹಿಸಿದ್ದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಗುರುರೇಣುಕಾರಾದ್ಯ, ಮುಖಂಡರಾದ ಕೆ.ಆರ್.ವೆಂಕಟೇಶ್. ಕೆ.ಸಿ.ಕೃಷ್ಣಮೂರ್ತಿ, ಪಪಂ ಸದಸ್ಯರಾದ ಕುಮಾರ್, ಸಿ.ಮೋಹನ್, ರೇಣುಕಾಪ್ರಸಾದ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/11/photo1-scaled-e1604726255458.jpg)