ಬೆಂಗಳೂರು :
ರೈಲಿನಿಂದ ಇಳಿಯುವ ಆತುರದಲ್ಲಿ ಕುಟುಂಬವೊಂದು ಮಲಗಿದ್ದ ಮಗುವನ್ನೇ ಮರೆತು ರೈಲು ಇಳಿದ ಘಟನೆಯೊಂದು ನಗರದಲ್ಲಿ ನಡೆದಿದೆ.
ಬೀದರ್-ಯಶವಂತಪುರ ಕೋವಿಡ್ ವಿಶೇಷ ರೈಲಿನಲ್ಲಿ ಬಂದಿರುವ ಕುಟುಂಬವೊಂದು ರಾಜನುಕುಂಟೆಯ ಸಿಗ್ನಲ್ ನಲ್ಲಿ ರೈಲು ಇಳಿದಿದ್ದಾರೆ. ಈ ವೇಳೆ ರೈಲಿನಲ್ಲಿ ಮಲಗಿದ್ದ ಎರಡೂವರೆ ವರ್ಷದ ಮಗುವನ್ನು ಮರೆತು ರೈಲಿನಿಂದ ಇಳಿದಿದ್ದಾರೆ.
ಬಳಿಕ ತಮ್ಮ ಮರೆವನ್ನು ಅರಿತ ಕುಟುಂಬ ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ರೈಲ್ವೇ ಅಧಿಕಾರಿಗಳು ರೈಲ್ವೇ ರಕ್ಷಣಾ ಪಡೆ ಹಾಗೂ ಇತರೆ ನಿಲ್ದಾಣಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಎಚ್ಚೆತ್ತ ಆರ್’ಪಿಎಫ್ ಪಡೆ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಬಂದಿಳಿದ ರೈಲನ್ನು ತಪಾಸಣೆ ನಡೆಸಿ, ಎಸ್6 ಸ್ಲೀಪಿಂಗ್ ಕೋಚ್ ನಲ್ಲಿ ಮಲಗಿದ್ದ ಮಗುವನ್ನು ರಕ್ಷಣೆ ಮಾಡಿದ್ದಾರೆ. ಸಂಗಪ್ಪ ಹಾಗೂ ಅವರ ಪತ್ನಿ, ನಾಲ್ವರು ಮಕ್ಕಳು ರೈಲಿನಲ್ಲಿ ಪ್ರಯಾಣಿಸಿದ್ದು, ರೈಲು ಯಶವಂತಪುರ ತಲುಪುವ ಮಾರ್ಗದ ಮಧ್ಯೆಯೇ ಸಿಗ್ನಲ್ ನಲ್ಲಿ ರೈಲು ಇಳಿದಿದ್ದಾರೆ.
ಈ ವೇಳೆ ಮಗುವನ್ನು ಮರೆತುಹೋಗಿದ್ದಾರೆಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ