ಲಾಕ್‍ಡೌನ್ : ಕಳಪೆ ಪಡಿತರ : ದುಬಾರಿ ಬೆಲೆಗೆ ಸೋಪು, ಉಪ್ಪು ಮಾರಾಟ!!

ತಿಪಟೂರು : 

        ನಗರದ ರೈಲ್ವೇಸ್ಟೇಷನ್ ರಸ್ತೆಯಲ್ಲಿರುವ ತಾಲ್ಲೂಕು ಪಂಚಾಯಿತಿ ಕಛೇರಿ ಪಕ್ಕದ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ಕೊಡುತ್ತಿರುವ ಪಡಿತರದಲ್ಲಿ ಕಳೆಪೆ ಗುಣಮಟ್ಟದ ದವಸ-ಧಾನ್ಯ ನೀಡುತ್ತಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿನ್ನೆ ಜೂ.14 ರಂದು ಪಡಿತರ ಪಡೆದ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೆ ವಿಡಿಯೋ ಮಾಡಿದ್ದು, ಕೊರೊನಾ ಸಂಕಷ್ಟದ ಈ ಸಮಯದಲ್ಲಿ, ಲಾಕ್‍ಡೌನ್ ನೆಪದಲ್ಲಿ ಸರ್ಕಾರವು ತಾನು ಕೊಡುವ ಆಹಾರ ಧಾನ್ಯಗಳಲ್ಲಿ ಒಂದು ಗೋಧಿಗೆ 2 ಕಲ್ಲುಗಳಿರುವಂತೆ ಕೊಟ್ಟಿದ್ದಾರೆ. ಇದನ್ನು ತಿನ್ನುವುದಾದರು ಹೇಗೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

      ಈ ವಿಡಿಯೋ ನೋಡಿದ ತಕ್ಷಣ ಸಂಬಂಧಿಸಿದ ಆಹಾರಾಧಿಕಾರಿ ನ್ಯಾಯಬೆಲೆ ಅಂಗಡಿಯವರನ್ನು ವಿಚಾರಿಸಿದ ನಂತರ ನ್ಯಾಯಬೆಲೆ ಅಂಗಡಿಯವರು ಈಗಾಗಲೇ ಪಡಿತರ ಪಡೆದವರನ್ನು ವಾಪಸ್ ಕರೆಸಿ ಕೊಟ್ಟಿದ್ದ ಪಡಿತರವನ್ನು ಹಿಂಪಡೆದು ಬೇರೆ ಕೊಟ್ಟಿದ್ದಾಗಿ ತಿಳಿದುಬಂದಿದೆ.

      ಅಲ್ಲದೆ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದಿಂದ ಬರುವ ಆಹಾರ ಧಾನ್ಯಗಳ ವಿತರಣೆ ಜೊತೆಗೆ ಸೋಪು, ಉಪ್ಪು, ಮೈದಾ, ರವೆ, ಅಡುಗೆ ಎಣ್ಣೆ ಮೊದಲಾದ ದಿನಸಿ ಸಾಮಗ್ರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಗುಟ್ಟೇನು ಅಲ್ಲ, ಆದರೆ ಜನ ಇದನ್ನು ಪ್ರಶ್ನಿಸದೆ ಅವರು ಹೇಳಿದ ಬೆಲೆ ನೀಡಿ ಕೊಂಡೊಯ್ಯುತ್ತಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಒಟ್ಟಿನಲ್ಲಿ ಪಡಿತರ ಪಡೆದ ವ್ಯಕ್ತಿ ಧೈರ್ಯದಿಂದ ಕಳಪೆ ಆಹಾರ ವಿತರಣೆಯ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರಿಂದ ಕಳಪೆ ಪಡಿತರ ವಾಪಸ್ ಪಡೆದು ಬೇರೆ ಪಡಿತರ ಕೊಟ್ಟಿದ್ದಾರೆ. ಇಲ್ಲದಿದ್ದರೆ ಜನ ಕಲ್ಲು ಸಹಿತ ಆಹಾರ ಧಾನ್ಯಗಳನ್ನೆ ಉಪಯೋಗಿಸಬೇಕಾಗಿತ್ತು. ವೀಡಿಯೊ ನೋಡಿದ ನಂತರ ನ್ಯಾಯಬೆಲೆ ಅಂಗಡಿಯವರಿಗೆ ತಮ್ಮ ತಪ್ಪಿನ ಅವರಿವಾಯಿತೆ? ಅದಕ್ಕೂ ಮೊದಲು ಚೀಲದಲ್ಲಿದ್ದ ಕಳಪೆ ಪಡಿತರ ಕಾಣಲಿಲ್ಲವೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ಸದ್ಯ ಜನರ ಪರಿಸ್ಥಿತಿ ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link