ಕೊರಟಗೆರೆ:
ಪರಿಸರ ಸ್ವಚ್ಛತೆ ಶಾಲಾ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿರದೆ ಪ್ರತಿ ನಾಗರಿಕನೂ ತನ್ನ ಸುತ್ತ ಪರಿಸರ ಸ್ವಚ್ಛತೆಗೆ ಸಂಕಲ್ಪ ಮಾಡಿದರೆ ಆರೋಗ್ಯ ಸಮಾಜ ಸಾಧ್ಯ ಎಂದು ತಹಸೀಲ್ದಾರ್ ನಾಹಿದಾ ಜಮ್ಜಮ್ ತಿಳಿಸಿದರು.
ಅವರು ಪಟ್ಟಣದ ಗೌರಿಬಿದನೂರು ರಸ್ತೆಯ ದೇವರಾಜ ಅರಸು ಹಿಂದುಳಿದ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿ ಮತ್ತು ಅಧಿಕಾರಿಗಳೊಂದಿಗೆ ಸ್ವಚ್ಛತಾಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇವುಗಳನ್ನು ತಡೆಗಟ್ಟಬೇಕಾದ್ದು, ನಮ್ಮ ಸುತ್ತಲಿನ ಪರಿಸರವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಸ್ವಚ್ಛತೆ ಅರಿವು ಮತ್ತು ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮಾತ್ರ ಸಿಮಿತವಾಗಿರದೆ ಪ್ರತಿ ನಾಗರಿಕರಲ್ಲು ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಇದರ ಮಹತ್ವದ ಬಗ್ಗೆ ಅರಿವು ಮೂಡಿಸಿ ಕಾರ್ಯರೂಪಕ್ಕೆ ತಂದರೆ ಮಾತ್ರ ಆರೋಗ್ಯ ಸಮಾಜ ರೂಪಿಸಲು ಸಾಧ್ಯ. ಸ್ವಚ್ಛತೆ ಪ್ರತಿಯೊಬ್ಬರ ಬದುಕಿಗೆ ಅತ್ಯವಶ್ಯಕವಾಗಿದೆ ಎಂದರು.
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅನಂತರಾಜು ಮಾತನಾಡಿ, ಸರ್ಕಾರ ಮತ್ತು ಇಲಾಖಾ ಅಧಿಕಾರಿಗಳ ಆದೇಶದಂತೆ ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿ ನಿಲಯ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಲಾಗುವುದು. ನಿಲಯಗಳ ಸ್ವಚ್ಛ ಪರಿಸರಕ್ಕೆ ವಿದ್ಯಾರ್ಥಿಗಳ ನಿಲಯ ಪಾಲಕರ ಬದ್ದತೆ ಅತಿ ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಸಿಬ್ಬಂದಿ ರಂಗಸ್ವಾಮಿ, ಅನಂತರಾಜಯ್ಯ, ಶ್ರುತಿ, ಮಂಗಳಾಂಬಿಕೆ, ನರೇಗಾ ಅಭಿಯಂತರ ಕುಮಾರಸ್ವಾಮಿ ಸೇರಿದಂತೆ ವಿದ್ಯಾರ್ಥಿಗಳು ಇತರರು ಇದ್ದರು.
ಕೊರಟಗೆರೆ ಪಟ್ಟಣದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ತಹಸೀಲ್ದಾರ್ ನಾಹಿದಾ ಜಮ್ಜಮ್ ಸ್ವಚ್ಛತಾ ಕಾರ್ಯ ಮಾಡುತ್ತಿರುವುದು. ಹಿಂದುಳಿದ ವರ್ಗಗಳ ಆಧಿಕಾರಿ ಅನಂತರಾಜು ಸೇರಿದಂತೆ ಇತರರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ