ಬೆಂಗಳೂರು:
ರಾಜ್ಯದ 15 ಮಂದಿ ಭ್ರಷ್ಟಾತಿಭ್ರಷ್ಟರ ಜನ್ಮ ಜಾಲಾಡಿರುವ ಭ್ರಷ್ಟಾಚಾರ ನಿಗ್ರಹದಳ ಎಸಿಬಿ, ಅವರಿಗೆ ಸಂಬಂಧಿಸಿದ 60 ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಭಾರಿ ಪ್ರಮಾಣದ ಆಸ್ತಿಪಾಸ್ತಿ ಪತ್ತೆ ಮಾಡಿದೆ. ಅಪಾರ ಪ್ರಮಾಣದ ನಗ-ನಾಣ್ಯ, ಸಂಪತ್ತು ಪತ್ತೆ ಮಾಡಿದ್ದು, ಇದನ್ನು ಕಂಡು ಜನಸಾಮಾನ್ಯರಿರಲಿ ಎಸಿಬಿ ಅಧಿಕಾರಿಗಳೆ ಬೆಚ್ಚಿ ಬೀಳುವಂತಾಗಿದೆ.
8 ಎಸ್ಪಿಗಳು, 100 ಅಧಿಕಾರಿಗಳು ಮತ್ತು 300 ಸಿಬ್ಬಂದಿಯ ತಂಡ ಈ ದಾಳಿ ನಡೆಸಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಚಿನ್ನದ ಗುಣಮಟ್ಟ ಪರಿಶೀಲನೆಗಾಗಿ ಅಕ್ಕಸಾಲಿಗರನ್ನೂ ಸಹ ಕರೆಸಿದ್ದು, ಈ ಬಾರಿಯ ದಾಳಿಯ ವಿಶೇಷವಾಗಿದೆ.
ವಿಶೇಷ ಎಂದರೆ ಸಿ ಮತ್ತು ಡಿ ಗ್ರೂಪ್ ಸಿಬ್ಬಂದಿ ಮನೆಗಳಲ್ಲಿಯೂ ಕೆಜಿಗಟ್ಟಲೆ ಬಂಗಾರ, ಹಣ, ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಅಧಿಕಾರಿಗಳ ಮನೆಯಲ್ಲಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ. ಗದಗ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಅವರ ಮನೆಯಲ್ಲಿ 7 ಕೆ ಜಿ ಚಿನ್ನದ ಬಿಸ್ಕತ್ತು, 15 ಲಕ್ಷ ರೂಪಾಯಿ ನಗದು ಸಿಕ್ಕಿದೆ.
ಬೆಂಗಳೂರಿನಲ್ಲಿ ಸಕಾಲ ಕೆಎಎಸ್ ಅಧಿಕಾರಿ ನಾಗರಾಜ್, ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಜಿಯೋಥೆರಪಿಸ್ಟ್ ರಾಜಶೇಖರ, ಬಿಬಿಎಂಪಿ ಸಿಬ್ಬಂದಿ ಮಾಯಣ್ಣ, ಬಿಬಿಎಂಪಿ ಡಿ ಗ್ರೂಪ್ ನೌಕರ ಬಾಗಲಗುಂಟೆಯ ಗಿರಿ ಸೇರಿ ಒಟ್ಟು ನಾಲ್ವರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿ ಇಇ ಕೆ.ಎಸ್.ಲಿಂಗೇಗೌಡ, ಮಂಡ್ಯ ಹೆಚ್ಎಲ್ಬಿಸಿ ಇಇ ಕೆ.ಶ್ರೀನಿವಾಸ್, ದೊಡ್ಡಬಳ್ಳಾಪುರದ ಕಂದಾಯ ನಿರೀಕ್ಷಕ ಲಕ್ಷ್ಮೀನರಸಿಂಹಯ್ಯ, ಮಾಜಿ ಪ್ರಾಜೆಕ್ಟ್ ಮ್ಯಾನೇಜರ್ ವಾಸುದೇವ್, ಬೆಂಗಳೂರು ನಿರ್ಮಿತಿ ಕೇಂದ್ರದ ಮಾಜಿ ಪ್ರಾಜೆಕ್ಟ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಬಿ.ಕೃಷ್ಣಾರೆಡ್ಡಿ, ಬೆಂಗಳೂರು ನಂದಿನಿ ಡೇರಿಯ ಜನರಲ್ ಮ್ಯಾನೇಜರ್, ಗದಗ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಕೆ. ಮಸ್ತಿ ತಂಡದಿಂದ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಜೆ.ಇ. ಶಾಂತಗೌಡ ಬಿರಾದಾರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ನಗರದ ಗುಬ್ಬಿ ಕಾಲನಿಯಲ್ಲಿನ ಪಿಡಬ್ಲ್ಯುಡಿ ಜೆ.ಇ. ಶಾಂತಗೌಡ ಬಿರಾದಾರ್ ಮನೆ, ಕಚೇರಿ ಮತ್ತು ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆ ದಾಳಿ ಮಾಡಿದ್ದಾರೆ.
ಬಲೆಗೆ ಬಿದ್ದರುವ ಅಧಿಕಾರಿಗಳು ಗಳಿಸಿರುವ ಅಕ್ರಮ ಆಸ್ತಿ ಬಗ್ಗೆ ಬಂದ ನೂರಾರು ದೂರುಗಳ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಏಕಕಾಲಕ್ಕೆ ದಾಳಿ ನಡೆಸಿದಾಗ ಪತ್ತೆಯಾದ ಅಕ್ರಮ ಆಸ್ತಿಪಾಸ್ತಿಗಳನ್ನು ಒಂದೆಡೆ ಕಲೆ ಹಾಕಿ ಲೆಕ್ಕ ಮಾಡುವುದೆ ಅಧಿಕಾರಿಗಳಿಗೆ ಸಾಕು ಸಾಕಾಗಿ ಹೋಗಿದೆ. 2021ರ ಜುಲೈನಲ್ಲಿ ನಿವೃತ್ತಿ ಹೊಂದಿದ್ದ ಬಳ್ಳಾರಿ ಸಬ್ ರಿಜಿಸ್ಟ್ರ್ಟಾರ್ ಕೆ.ಎಸ್.ಶಿವಾನಂದ್ ಅವರ ಬಳಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ.
ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿಗಳ ಕಚೇರಿ ಮನೆಗಳು ಆಸ್ತಿ ಪಾಸ್ತಿಗಳ ಮೇಲೆ ಬುಧವಾರ ಮುಂಜಾನೆಯಿಂದ ನಡೆದಿರುವ ದಾಳಿಯು ಇನ್ನೂ ಮುಂದುವರೆದಿದ್ದು, ವಶಪಡಿಸಿಕೊಂಡ ಆಸ್ತಿಪಾಸ್ತಿಗಳು ಸ್ವತ್ತುಗಳ ಪರಿಶೀಲನೆ ನಡೆಸಲಾಗಿದೆ. ಒಂದೆರಡು ದಿನಗಳಲ್ಲಿ ಅವುಗಳ ಒಟ್ಟಾರೆ ಮೌಲ್ಯ ದೊರೆಯಲಿದೆ ಎಂದರು.ಎಸಿಬಿ ಬಲೆಗೆ ಬಿದ್ದ ಶಾಂತನಗೌಡರು ಮನೆಯ ಪೈಪ್ನಲ್ಲಿ ಹಣ ಬಚ್ಚಿಟ್ಟಿದ್ದರು. ಅಷ್ಟೇ ಅಲ್ಲದೆ ಬಕೆಟ್ನಲ್ಲಿ ಹಣ ತುಂಬಿಟ್ಟಿದ್ದು ಪತ್ತೆಯಾಗಿದೆ.
ಬಲೆಗೆ ಬಿದ್ದ ಭ್ರಷ್ಟಾಚಾರಿಗಳು :
1.ಕೆ.ಎಸ್ಲಿಂಗೇಗೌಡ,ಕಾರ್ಯನಿರ್ವಾಹಕ ಇಂಜಿನಿಯರ್ ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರು.
2.ಶ್ರೀನಿವಾಸ್ ಕೆ. ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಎಲ್.ಬಿ.ಸಿ ಮಂಡ್ಯ.
3. ಲಕ್ಷ್ಮಿಕಾಂತಯ್ಯ, ರೆವಿನ್ಯೂ ಇನ್ಸ್ಪೆಕ್ಟರ್ ದೊಡ್ಡಬಳ್ಳಾಪುರ.
4. ವಾಸುದೇವ್, ಪ್ರಾಜೆಕ್ಟ್ ಮ್ಯಾನೇಜರ್ ನಿರ್ಮಿತಿ ಕೇಂದ್ರ ಬೆಂಗಳೂರು.
5. ಬಿ.ಕೃಷ್ಣಾರೆಡ್ಡಿ, ಜನರಲ್ ಮ್ಯಾನೇಜರ್, ನಂದಿನಿ ಡೈರಿ ಬೆಂಗಳೂರು.
6. ಟಿ.ಎಸ್.ರುದ್ರೇಶಪ್ಪ, ಜಂಟಿ ನಿರ್ದೇಶಕ ಕೃಷಿ ಇಲಾಖೆ ಗದಗ.
7. ಎ.ಕೆ.ಮಸ್ತಿ, ಕೋ ಆಪರೇಟಿವ್ ಅಭಿವೃದ್ಧಿ ಅಧಿಕಾರಿ ಸವದತ್ತಿ ಎರವಲು ಸೇವೆ, ಬೈಲಹೊಂಗಲ.
8. ಸದಾಶಿವ ಮರಲಿಂಗಣ್ಣನವರ್, ಸೀನಿಯರ್ ಮೋಟಾರ್ ಇನ್ಸ್ಪೆಕ್ಟರ್ ಗೋಕಾಕ್.
9.ನಾತಾಜೀ ಹೀರಾಜಿ ಪಾಟೀಲ್, ಗ್ರೂಪ್ ಸಿ ಬೆಳಗಾಂ ಹೆಸ್ಕಾಂ.
10.ಕೆ.ಎಸ್.ಶಿವಾನಂದ್, ನಿವೃತ್ತ ಸಬ್ ರಿಜಿಸ್ಟ್ರಾರ್, ಬಳ್ಳಾರಿ.
11. ರಾಜಶೇಖರ್, ಫಿಜಿಯೋಥೆರಪಿಸ್ಟ್, ಯಲಹಂಕ ಸರ್ಕಾರಿ ಆಸ್ಪತ್ರೆ.
12. ಮಾಯಣ್ಣ ಎಂ, ಪ್ರಥಮ ದರ್ಜೆ ಸಹಾಯಕ ಬಿಬಿಎಂಪಿ ಬೆಂಗಳೂರು ರೋಡ್ಸ್ &ಇನ್ಫ್ರಾಸ್ಟ್ರಕ್ಚರ್.
13. ಎಲ್.ಸಿ.ನಾಗರಾಜ್, ಸಕಾಲ, ಅಡಳಿತಾಧಿಕಾರಿ, ಬೆಂಗಳೂರು.
14. ಜಿ.ವಿ.ಗಿರಿ, ಡಿ ಗ್ರೂಪ್ ಸಿಬ್ಬಂದಿ ಬಿಬಿಎಂಪಿ ಯಶವಂತಪುರ.
15. ಎಸ್.ಎಂ.ಬಿರಾದಾರ್, ಜಾಯಿಂಟ್ ಎಂಜಿನಿಯರ್ ಲೋಕೋಪಯೋಗಿ ಇಲಾಖೆ, ಜೇವರ್ಗಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ