ನವದೆಹಲಿ:
ಪ್ರತಿಷ್ಠಿತ ಇಂಡಿಯಾ ಓಪನ್ 2022 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಿದ ಭಾರತದ ಕಿಡಂಬಿ ಶ್ರೀಕಾಂತ್ ಸೇರಿದಂತೆ ಏಳು ಮಂದಿ ಶಟಲ್ ಪಟುಗಳಿಗೆ ಕೋವಿಡ್ ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಟೂರ್ನಿಯಿಂದಲೇ ನಿರ್ಗಮನದ ಹಾದಿ ಹಿಡಿದಿದ್ದಾರೆ.
ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ರಿತಿಕಾ ರಾಹುಲ್ ಥಕ್ಕರ್, ತ್ರಿಷಾ ಜೌಲಿ, ಮಿಥುನ್ ಮಂಜುನಾಥ್, ಸಿಮ್ರಾನ್ ಸಿಂಘಿ ಹಾಗೂ ಖುಷಿ ಗುಪ್ತಾ ಕೊರೊನಾ ಸೋಂಕು ತಗುಲಿದ ಇತರೆ ಶಟಲ್ ಪಟುಗಳಾಗಿದ್ದಾರೆ.
ಕೋವಿಡ್ ನಿಯಮಾವಳಿಯಂತೆ ಎಲ್ಲ ಆಟಗಾರರಲ್ಲೂ ಪ್ರತ್ಯೇಕವಾಸದಲ್ಲಿರುವಂತೆ ಸೂಚಿಸಲಾಗಿದೆ. ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಬಳಿಕ ನವದಹೆಲಿಯಿಂದ ತಮ್ಮ ತಮ್ಮ ನಗರಗಳಿಗೆ ಹಿಂತಿರುಗಲು ಅನುಮತಿ ನೀಡಲಾಗುತ್ತದೆ.
ಕ್ರೀಡಾಪಟುಗಳಲ್ಲಿ ಕೋವಿಡ್ ದೃಢಪಟ್ಟಿರುವ ಹೊರತಾಗಿಯೂ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 500 ಚಾಂಪಿಯನ್ಷಿಪ್ ನಿಗದಿತ ವೇಳಾಪಟ್ಟಿಯಂತೆ ಮುಂದುವರಿಸಲು ಸಂಘಟಕರು ನಿರ್ಧರಿಸಿದ್ದಾರೆ.
ಅನಿವಾರ್ಯವಾಗಿ ಹಿಂದೆ ಸರಿದಿರುವ ಏಳು ಶಟಲ್ ಪಟುಗಳಿಗೆ ಬದಲಿ ಆಟಗಾರರನ್ನು ಘೋಷಿಸಲಾಗಿಲ್ಲ. ಅಲ್ಲದೆ ಅವರ ಎದುರಾಳಿಗಳಿಗೆ ಮುಂದಿನ ಸುತ್ತಿಗೆ ವಾಕ್ಓವರ್ ಲಭಿಸಿದೆ.
ಈ ಆಟಗಾರರೆಲ್ಲ ಮಂಗಳವಾರ ನಿಯಮಿತ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಗುರುವಾರ ಪರೀಕ್ಷಾ ವರದಿ ಪಾಸಿಟಿವ್ ಎಂದು ವರದಿಯಾಗಿದೆ.
28ರ ಹರೆಯದ ಶ್ರೀಕಾಂತ್ ಕಳೆದ ವರ್ಷಾಂತ್ಯದಲ್ಲಿ ನಡೆದ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
