ಬೆಂಗಳೂರು:
ಯೂಕ್ರೇನ್ನ ಖಾರ್ಕೀವ್ನಲ್ಲಿ ಕನ್ನಡಿಗ ವೈದ್ಯ ವಿದ್ಯಾರ್ಥಿ ನವೀನ್ ಹುತಾತ್ಮರಾದ ಸ್ಥಳದಲ್ಲಿ ರಷ್ಯಾ ಶೆಲ್ ದಾಳಿ ಮುಂದುವರಿದಿರುವ ಕಾರಣ ಮೃತದೇಹ ಪತ್ತೆಗೆ ಅಡ್ಡಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಹೇಳಿದರು.
ಆರ್ಟಿ ನಗರದ ತಮ್ಮ ನಿವಾಸದ ಬಳಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನವೀನ್ ಮೃತದೇಹವನ್ನು ಪಡೆಯುವ ಪ್ರಯತ್ನ ಜಾರಿಯಲ್ಲಿದೆ. ನಿಖರ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ಯೂಕ್ರೇನ್ನಿಂದ ಹಲವಾರು ಕನ್ನಡಿಗರನ್ನು ಕರೆತರಲಾಗಿದೆ. ಖಾರ್ಕೀವ್, ಕೀವ್ ನಲ್ಲಿ ಹೊರಬರಲಾರದ ಪರಿಸ್ಥಿತಿಯೂ ಇದೆ. ಸಿಲುಕಿಕೊಂಡವರನ್ನು ಪತ್ತೆ ಹಚ್ಚಲು ರಾಯಭಾರಿ ಕಚೇರಿಯವರೂ ಕಾರ್ಯನಿರತರಾಗಿದ್ದಾರೆ.
ದಾಳಿ ಕಡಿಮೆಯಾದ ಕೂಡಲೇ ಸಂಪರ್ಕ ಸಾಧಿಸಲಾಗುವುದು ಎಂದು ಹೇಳಿದ್ದಾರೆ. ನಿನ್ನೆಯೂ ಕೇಂದ್ರ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದು, ಯೂಕ್ರೇನ್ ರಾಯಭಾರ ಕಚೇರಿಯೊಂದಿಗೂ ಮಾತನಾಡಲಾಗಿದೆ ಎಂದರು.
ಶಿಕಾರಿಪುರದಲ್ಲಿ ರೈತರ ಸಭೆಯಲ್ಲಿ ಪಾಲ್ಗೊಂಡು, ರಾಣಿಬೆನ್ನೂರಿನಲ್ಲಿ ಯೂಕ್ರೇನ್ನಲ್ಲಿ ಮೃತಪಟ್ಟ ನವೀನ್ ಅವರ ತಂದೆಯವರನ್ನು ಭೇಟಿಯಾಗಲಿದ್ದೇನೆ ಎಂದರು. ಸರ್ಕಾರದಿಂದ ನವೀನ್ ಕುಟುಂಬಕ್ಕೆ ಪರಿಹಾರ ಕೊಡಲು ನಿರ್ಧರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
