ಬೆಂಗಳೂರು:
ಸೇವೆಯಲ್ಲಿನ ಕೊರತೆ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿಗೆ ಬಿಡಿಎಯನ್ನು ಹೊಣೆ ಮಾಡಿರುವ ಬೆಂಗಳೂರಿನ ಹೆಚ್ಚುವರಿ ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವಿಲ್ಲಾ ಮಾಲಿಕರೊಬ್ಬರಿಗೆ 2 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಸೂಚನೆ ನೀಡಿದೆ.
ವಿಲ್ಲಾ ಹಂಚಿಕೆಯಾದ ಬಳಿಕ 2 ಲಕ್ಷ ರೂಪಾಯಿಗಳನ್ನು ಕಾರು ಪಾರ್ಕಿಂಗ್ ಗಾಗಿ ಪಡೆಯಲಾಗಿತ್ತು. ಈ ಹಣವನ್ನು ಹಿಂತಿರುಗಿಸಿ 10,000 ರೂಪಾಯಿಗಳ ದಾವೆ ವೆಚ್ಚಗಳನ್ನೂ ಭರಿಸುವಂತೆ ಆಯೋಗ ಬಿಡಿಎ ಗೆ ಸೂಚನೆ ನೀಡಿದೆ.
ಆಯೋಗದ ಅಧ್ಯಕ್ಷರಾಗಿರುವ ಶಿವರಾಮ ಕೆ, ಚಂದ್ರಶೇಖರ್ ಎಸ್ ನೂಲಾ ಹಾಗೂ ರೇಖಾ ಸಾಯಣ್ಣವರ್ ಈ ಆದೇಶವಿತ್ತಿದ್ದು, ಅಪೂರ್ವ ಎಂಬುವವರು ದೂರು ದಾಖಲಿಸಿದ್ದರು.
2017 ರ ಆಗಸ್ಟ್ 24 ರ ಹಂಚಿಕೆ ಪತ್ರದಲ್ಲಿ ಎಲ್ಲಿಯೂ ಕಾರು ನಿಲ್ದಾಣಕ್ಕಾಗಿ ಪ್ರತ್ಯೇಕ ಶುಲ್ಕದ ಬಗ್ಗೆ ಮಾಹಿತಿ ಇಲ್ಲ. ಆದರೆ 2017 ರ ನವೆಂಬರ್ 3 ರಂದು ಬಿಡಿಎ ಆಯುಕ್ತರು ಪ್ರತ್ಯೇಕ ಅಧಿಸೂಚನೆ ಹೊರಡಿಸಿ ಪಾರ್ಕಿಂಗ್ ಸ್ಲಾಟ್ಗಳ ಬಗ್ಗೆ ಮಾಹಿತಿಯನ್ನು ವಿವರವಾಗಿ ನೀಡಿದ್ದರು ಇದು ಅನ್ಯಾಯ ಎಂದು ಆಯೋಗ ಹೇಳಿದೆ.ಬಿಡಿಎ ಉದ್ದೇಶ ವಿಲ್ಲಾಗಳಿಗೆ ಲಭ್ಯವಿರುವ ಮುಚ್ಚಿದ ಕಾರ್ ಪಾರ್ಕಿಂಗ್ ಸ್ಲಾಟ್ಗಳನ್ನು ಹಂಚಿಕೆ ಮಾಡುವುದಾಗಿತ್ತು.
ಆದರೆ ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ಹಂಚಿಕೆ ಮಾಡುವ ಸಮಯದಲ್ಲಿ ಅಥವಾ ಅದಕ್ಕಿಂತಲೂ ಮುಂಚೆ ನೀಡಿರಲಿಲ್ಲ. ಯಾವುದೇ ಶುಲ್ಕವನ್ನು ವಿಧಿಸುವ ಅಥವಾ ಹಣದ ಮೊತ್ತವನ್ನು ಗ್ರಾಹಕರು ಪಾವತಿಸುವ ಬಗ್ಗೆ ಪ್ರಾರಂಭಿಕ ಹಂತದಲ್ಲೇ ಮಾಹಿತಿ ನೀಡುವುದು ಬಿಡಿಎಯ ಜವಾಬ್ದಾರಿಯಾಗಿರುತ್ತದೆ ಎಂದು ಆಯೋಗ ಹೇಳಿದೆ.