ಬೆಂಗಳೂರು
ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ಯಶಸ್ವಿಯಾಗಿದೆ.ಬಂದ್ನಿಂದ ಸಾಮಾನ್ಯ ಜನಜೀವನದಲ್ಲಿ ವ್ಯತ್ಯಯವಾಗಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಜನ ಸಂಚಾರ ವಿರಳವಾಗಿತ್ತು. ವಾಹನ ಸಂಚಾರ ಕಡಿಮೆ ಇತ್ತು. ಶಾಂತಿಯುವ ಬಂದ್ನಿAದಾಗಿ ಬೆಂಗಳೂರು ಸ್ತಬ್ಧಗೊಂಡಿದೆ.
ಎಲ್ಲೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ರಾಜ್ಯ ಸಾರಿಗೆ ಬಸ್ಗಳ ಓಡಾಟ ಇತ್ತಾದರೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇತ್ತು. ಬಂದ್ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದ ಬಹುತೇಕ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆ ಇತ್ತು. ಬಿಎಂಟಿಸಿ ಬಸ್ಗಳು ಮೆಟ್ರೊ ರೈಲುಸಂಚಾರ ಎಂದಿನಂತೆ ಇದ್ದರೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇತ್ತು.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಬಂದ್ ನಡೆಸುತ್ತಿದ್ದು, ಈ ಬಂದ್ಗೆ ಜೆಪಿ,. ಜೆಡಿಎಸ್, ಆಮ್ಆದ್ಮಿ ಪಕ್ಷ ಪಕ್ಷ, 50ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ವಾಣಿಜ್ಯ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ.
ಬಂದ್ಗೆ ಕನ್ನಡ ಚಿತ್ರೋದ್ಯಮ ಬೆಂಬಲ ನೀಡಿದ್ದು, ಎಲ್ಲ ಸಿನಿಮಾ ಥಿಯೇಟರ್, ಮಾಲ್ಗಳು ಬಂದ್ ಆಗಿದ್ದು, ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡಿತ್ತು. ಬೆಂಗಳೂರಿನಲ್ಲಿ ಆಟೋ ಸಂಚಾರವೂ ವಿರಳವಾಗಿದೆ. ಸರ್ಕಾರಿ ಕಚೇರಿಗಳಲ್ಲೂ ಹಾಜರಾತಿ ಕಡಿಮೆ ಇದೆ. ಜನಸಂಚಾರ ಕಡಿಮೆ ಇದ್ದು,ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗಿದೆ. ಬಂದ್ನಿಂದಾಗಿ ಚಲನಶೀಲ ನಗರವಾದ ಬೆಂಗಳೂರು ಸ್ತಬ್ದಗೊಂಡಂತಾಗಿದೆ.ಬಂದ್ನ ಬಿಸಿ ಜನರಿಗೆ ತಟ್ಟಿದ್ದು, ಜನ ಮನೆಯಿಂದ ಹೊರ ಬಂದಿಲ್ಲ.
ಬೆಂಗಳೂರು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಜನರ ಸಂಖ್ಯೆಕಡಿಮೆ ಇತ್ತು. ಆದರೆ, ವಿಮಾನನಿಲ್ದಾಣ ಹೆಚ್ಚಿನ ಜನರಿಂದ ತುಂಬಿರಲಿಲ್ಲ. ಟ್ಯಾಕ್ಸಿ ವಾಹನಗಳು ಸ್ಥಗಿತಗೊಂಡಿತ್ತು. ಪ್ರಯಾಣಿಕರು ಎಂದಿನಂತೆ ಸಂಚರಿಸಿದ್ದಾರೆ. ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಹುತೇಕ ಕಡೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಕೆಲ ಬಡಾವಣೆಗಳಲ್ಲಿ ಅಲ್ಲೊಂದು ಇಲ್ಲೊಂದು ಅಂಗಡಿಗಳು ತೆರೆದಿದ್ದವು.
ಆಸ್ಪತ್ರೆ, ಮೆಡಿಕಲ್ ಸ್ಟೋರ್, ತರಕಾರಿ, ಹಾಲು ಅಂಗಡಿಗಳು, ಅಂಚೆ ಕಚೇರಿ, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇದೆ. ನಾಡಿನ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ಸರ್ಕಾರಿ ಕಚೇರಿಯಲ್ಲಿ ನೌಕರರ ಹಾಜರಾತಿಯಲ್ಲಿ ವ್ಯತ್ಯಯವಾಗಿದ್ದು, ಬಂದ್ನ ಬಿಸಿ ಆಡಳಿತ ಕೇಂದ್ರಕ್ಕೂ ತಟ್ಟಿದೆ.
ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ವೃತ್ತಗಳು, ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು ಬ್ಯಾಂಕ್ ವೃತ್ತ, ಟೌನ್ಹಾಲ್, ಸ್ವತಂತ್ರ ಉದ್ಯಾನವನದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸ್ವತಂತ್ರ ಉದ್ಯಾನವನ ಹೊರತುಪಡಿಸಿ ಬೇರೆಲ್ಲೂ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ಕೊಟ್ಟಿಲ್ಲ.
ಇಂದು ಬೆಳಿಗ್ಗೆ ಟೌನ್ಹಾಲ್, ಮೈಸೂರು ಬ್ಯಾಂಕ್, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟಕಾರರ ನಡುವೆ ಜಟಾಪಟಿಯೇ ನಡೆದು ಪ್ರತಿಭಟನಾಕಾರರು ಧಿಕ್ಕಾರದ ಘೊಷಣೆಗಳನ್ನು ಕೂಗಿದರು.
ಸ್ವತಂತ್ರ ಉದ್ಯಾನವನದಲ್ಲಿ ರೈತಪರ ಹೋರಾಟಗಾರರು, ಬಾರುಕೋಲು ಚಳವಳಿ ನಡೆಸಿದರು. ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿ ತಮಿಳುನಾಡಿಗೆ ನೀರು ಹರಿಸಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು. ನೇಣು ಹಾಕಿಕೊಳ್ಳಲು ಯತ್ನಿಸಿದ ಹೋರಾಟಗಾರತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದನ್ನು ವಿರೋಧಿಸಿ ಹೋರಾಟಗಾರರೊಬ್ಬರು ಫ್ರೀಡಂಪಾರ್ಕ್ನಲ್ಲಿ ರೈತರ ಹಸಿರು ಶಾಲನ್ನೇ ಬಳಸಿ ನೇಣುಹಾಕಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಅದನ್ನು ತಡೆದು ಆ ವ್ಯಕ್ತಿಯನ್ನು ವಶಕ್ಕೆ ಪಡೆದರು.
ಬೆಂಗಳೂರು ಬಂದ್ಗೆ ಕನ್ನಡ ಚಿತ್ರೋದ್ಯಮ ಎಲ್ಲ ಪ್ರಮುಖ ನಟ-ನಟಿಯರು, ಕಲಾವಿದರು, ವಿತರಕರು, ಚಿತ್ರನಿರ್ಮಾಪಕರು, ತಾಂತ್ರಿಕರ ಒಕ್ಕೂಟ ಎಲ್ಲರೂ ಬೆಂಬಲ ನೀಡಿದ್ದು, ಚಿತ್ರೋದ್ಯಮ ಚಟುವಟಿಕೆಗಳು ಇಂದು ಬಂದ್ ಆಗಿವೆ. ಹಾಗೆಯೇ ಎಲ್ಲ ಸಿನಿಮಾ ಮಂದಿರಗಳಲ್ಲಿ ಚಿತ್ರಪ್ರದರ್ಶನ ಬಂದ್ ಆಗಿದೆ. ಟೆಲಿವಿಷನ್ ಅಸೋಸಿಯೇಷನ್ ಕೂಡ ಬಂದ್ಗೆ ಬೆಂಬಲ ನೀಡಿದ್ದು, ಯಾವುದೇ ಟಿವಿ ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣ ಇರಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
