ನವದೆಹಲಿ:
ಅಕ್ರಮ ಗಣಿಗಾರಿಕೆ ಸಂಬಂಧ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹರಿಯಾಣದ ಸೋನಿಪತ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಇ.ಡಿ ಅಧಿಕಾರಿಗಳು ಸುರೇಂದರ್ ಪನ್ವಾರ್ ಮನೆ ಹಾಗೂ ಕಚೇರಿಗಳ ಮೇಲೆ ಜನವರಿಯಲ್ಲಿ ದಾಳಿ ನಡೆಸಿದ್ದರು. ಈ ಪ್ರಕರಣದಲ್ಲಿ ಯಮುನಾನಗರದ ಇಂಡಿಯನ್ ನ್ಯಾಷನಲ್ ಲೋಕದಳದ (ಐಎನ್ಎಲ್ಡಿ) ಮಾಜಿ ಶಾಸಕ ದಿಲ್ಬಾಗ್ ಸಿಂಗ್ ಮತ್ತು ಆತನ ಸಹಚರರೊಬ್ಬರನ್ನು ಇ.ಡಿ ಬಂಧಿಸಿತ್ತು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ವಿಧಿಸಿರುವ ನಿಷೇಧದ ನಡುವೆಯೂ ಯಮುನಾನಗರ ಮತ್ತು ಸಮೀಪದ ಜಿಲ್ಲೆಗಳಲ್ಲಿ ಕಲ್ಲು ಮತ್ತು ಮರಳು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕುರಿತು ಹರಿಯಾಣ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಗಣಿಗಾರಿಕೆ ಪ್ರದೇಶಗಳಲ್ಲಿ ತೆರಿಗೆ ವಂಚನೆಯನ್ನು ತಡೆಗಟ್ಟಲು ಹರಿಯಾಣ ಸರ್ಕಾರವು 2020ರಲ್ಲಿ ಪರಿಚಯಿಸಿದ ಆನ್ಲೈನ್ ಪೋರ್ಟಲ್ ‘ಇ-ರಾವಣ’ ಯೋಜನೆಯಡಿ ದಾಖಲಾಗಿರುವ ವಂಚನೆ ಪ್ರಕರಣಗಳ ಕುರಿತು ಇ.ಡಿ ತನಿಖೆ ನಡೆಸುತ್ತಿದೆ.
ಅಧಿಕೃತ ಮೂಲಗಳ ಪ್ರಕಾರ, ಫೆಡರಲ್ ತನಿಖಾ ಸಂಸ್ಥೆಯು ಪನ್ವಾರ್ ಅವರನ್ನು ಹರಿಯಾಣದ ಅಂಬಾಲಾದ ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ಕರೆದೊಯ್ಯಬಹುದು, ಅಲ್ಲಿ ಅವರು ಶಾಸಕರ ಕಸ್ಟಡಿಗೆ ಕೋರುವ ಸಾಧ್ಯತೆಯಿದೆ.ಇ ಡಿ ಗುರುಗ್ರಾಮ್ ಕಚೇರಿಯ ತಂಡವೊಂದು ಮುಂಜಾನೆ ಶಾಸಕರ ನಿವಾಸಕ್ಕೆ ಆಗಮಿಸಿ ಕೆಲಕಾಲ ವಿಚಾರಣೆ ನಡೆಸಿದ ಬಳಿಕ ಅವರನ್ನು ಬಂಧಿಸಲಾಯಿತು.