ವಿಜಯಪುರ:
ವಿಜಯಪುರ ಜಿಲ್ಲೆಯ ಕೊಲಾರ ತಾಲೂಕಿನ ನಾಗರದಿನ್ನಿ ಗ್ರಾಮದ ಬಳಿ ಸೋಮವಾರ ರಾತ್ರಿ ಚಿರತೆ ಹಾಗೂ ಮರಿಗಳು ಕಾಣಿಸಿಕೊಂಡಿವೆ. ತಮ್ಮ ಜಮೀನಿನ ಬಳಿ ಕಾಡು ಪ್ರಾಣಿಗಳನ್ನು ಗಮನಿಸಿದ ಸ್ಥಳೀಯ ರೈತ ಸುರೇಶ ಕುಬಕಡ್ಡಿ ಅವರು ಈ ದೃಶ್ಯಗಳನ್ನು ಮೊದಲು ವರದಿ ಮಾಡಿದ್ದಾರೆ.
ಮಹಾದೇವ ಕೋಲ್ಕಾರ್ ಎಂಬುವವರ ಜಮೀನಿನ ಬಳಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ತಾಯಿ ಚಿರತೆ ಮತ್ತು ಅದರ ಮರಿಗಳ ಚಲನವಲನ ಜಮೀನಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ಪ್ರದೇಶದಲ್ಲಿ ಅವುಗಳ ಇರುವಿಕೆಯನ್ನು ದೃಢಪಡಿಸಿದೆ. ಇದೀಗ ಕಾಡು ಪ್ರಾಣಿಗಳ ಹಾವಳಿ ಇಲ್ಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿ ಬಸವರಾಜ ಕೊಣ್ಣೂರ, ಕೊಲ್ಹಾರ ತಹಸೀಲ್ದಾರ್, ಎಸ್.ಎಸ್.ನಾಯಕಲಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಒಂದು ವೇಳೆ ಕಾಡು ಪ್ರಾಣಿಗಳ ಚಲನವಲನ ಕಂಡು ಬಂದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜನರ ಬಳಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಆದಷ್ಟು ಬೇಗ ಪ್ರಾಣಿಗಳನ್ನು ಹಿಡಿಯಲು ಅಗತ್ಯ ಕ್ರಮಗಳನ್ನು ದಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ.
