ಬೆಂಗಳೂರು :ರೋಡ್‌ ರೇಜ್‌ ಗೆ ಯುವಕ ಬಲಿ …!

ಬೆಂಗಳೂರು

    ಬೆಂಗಳೂರಿನಲ್ಲಿ ದಿನನಿತ್ಯ ರೋಡ್‌ ರೇಜ್‌ ಘಟನೆಗಳು ಸರ್ವೇಸಾಮಾನ್ಯ ಎಂಬಂತೆ ನಡೆಯುತ್ತಿದೆ. ಆದರೆ, ಬುಧವಾರ ರಾತ್ರಿ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಮಾತ್ರ ಆಘಾತಕಾರಿಯಾಗಿದೆ. ಕಾರಿಗೆ ಬೈಕ್‌ ಟಚ್‌ ಆಯಿತು ಎಂದು ಶುರುವಾದ ಜಗಳದಲ್ಲಿ ಒಬ್ಬನ ಜೀವವನ್ನೇ ತೆಗೆದುಬಿಟ್ಟಿದ್ದಾರೆ. ಡೆಲಿವರಿ ಬಾಯ್ ಮಹೇಶ್ ಎಂಬಾತನೇ ಮೃತಪಟ್ಟ ಯುವಕ.

    ಮಹೇಶ್, ಬುಧವಾರ ಸಂಜೆ ಗೆಳೆಯರಾದ ಬಾಲಾಜಿ ಮತ್ತು ನಿಖಿಲ್ ಜೊತೆ ಟೀ ಕುಡಿಯಲು ಹೋಗಿದ್ದ. ಟೀ ಕುಡಿದು ಬೈಕ್‌ನಲ್ಲಿ ಬರುವಾಗ ಸ್ಪೀಡಾಗಿ ಬಂದ ಕಾರು ಹಾರ್ನ್‌ ಮಾಡಿದರೂ ಸೈಡ್‌ ಕೊಟ್ಟಿಲ್ಲ. ಈ ವೇಳೆ ಕಾರಿಗೆ ಬೈಕ್‌ ಸ್ವಲ್ಪ ಟಚ್‌ ಆಗಿತ್ತಂತೆ. ಇದೇ ಸಿಟ್ಟಲ್ಲಿ ಕಾರು ಚಾಲಕ ಅರವಿಂದ್, ಬೈಕ್‌ ಚಾಲಕನನ್ನ ಚೇಸ್ ಮಾಡಿಕೊಂಡು ಹೋಗಿದ್ದಾನೆ. ಮುಖ್ಯ ರಸ್ತೆಯಿಂದ ತಿರುಗಿಸುವಾಗ ಬೈಕ್‌ನಲ್ಲಿ ಹಿಂಬದಿ ಕೂತಿದ್ದ ಇಬ್ಬರು ಕೆಳಗೆ ಬಿದ್ದಿದ್ದಾರೆ. ಆದರೆ, ಜಿಕೆವಿಕೆ ಲೇಔಟ್‌ಗೆ ನುಗ್ಗಿದ ಮಹೇಶ್ ಬೈಕ್‌ಗೆ ಕಾರು ಚಾಲಕ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ತಿರುವಿನಲ್ಲಿದ್ದ ಮನೆಯ ಕಾಂಪೌಂಡ್‌ಗೆ ಮಹೇಶ್ ತಲೆ ಬಡಿದಿದೆ.

    ಅಪಘಾತದ ನಂತರ ಗಾಯಗೊಂಡಿದ್ದ ಮಹೇಶ್‌ನನ್ನ ಹೊತ್ತೊಯ್ಯಲು ಕಾರು ಚಾಲಕ ಮುಂದಾಗಿದ್ದಾನೆ. ಆದರೆ, ರಕ್ತದ ಮಡುವಿನಲ್ಲಿದ್ದ ಮಹೇಶ್ ಸಾವನ್ನಪ್ಪಿದ್ದಾನೆ. ನಂತರ ಆರೋಪಿ ಅರವಿಂದ್‌ ಮತ್ತು ಕೇಶವ್‌ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಪ್ಪಿಕೊಂಡ ಬಾಲಾಜಿ ಎಂಬ ಯುವಕ ನೀಡಿದ ದೂರಿನ ಅನ್ವಯ ವಿದ್ಯಾರಾಣ್ಯಪುರ ಪೊಲೀಸರು ಕೊಲೆ ಕೇಸ್ ದಾಖಲಿಸಿದ್ದಾರೆ.  

   ಒಟ್ಟಿನಲ್ಲಿ ಕೋಟ್ಯಂತರ ವಾಹನಗಳಿರುವ ಬೆಂಗಳೂರಿನಲ್ಲಿ ನಿತ್ಯವೂ ಸಣ್ಣ ಪುಟ್ಟ ಅಪಘಾತಗಳು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದನ್ನೇ ದೊಡ್ಡದು ಮಾಡಿ, ತಾಳ್ಮೆ ಕಳೆದುಕೊಂಡರೆ ಏನೆಲ್ಲಾ ಅನಾಹುತ ಆಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

Recent Articles

spot_img

Related Stories

Share via
Copy link