ಮಣಿಪುರಕ್ಕೆ ಮತ್ತೆ 20 ತುಕಡಿ ಅರೆಸೇನಾ ಪಡೆ ರವಾನೆ

ಇಂಫಾಲ್‌ : 

   ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಮತ್ತೆ ಗಲಭೆ , ಹಿಂಸಾಚಾರಗಳು   ಶುರುವಾಗಿದೆ. ಗಲಭೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ   ಶುಕ್ರವಾರ ಮಣಿಪುರಕ್ಕೆ ಇನ್ನೂ 20 ತುಕಡಿ ಅರೆಸೇನಾ ಪಡೆಗಳನ್ನು  ರವಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಇತ್ತೀಚೆಗೆ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ   ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಣಿಪುರಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ಸೂಚನೆ ನೀಡಿದ್ದರು. ನಂತರ ತಕ್ಷಣ 50 ಅರೆಸೇನಾ ತುಕಡಿಗಳನ್ನು ಮಣಿಪುರಕ್ಕೆ ನಿಯೋಜಿಸಲಾಗಿತ್ತು. ಇದೀಗ ಮತ್ತೆ 20,000 ಹೆಚ್ಚುವರಿ ಅರೆಸೇನಾ ಸಿಬ್ಬಂದಿಯನ್ನು ಒಳಗೊಂಡಿರುವ 20 ತುಕಡಿಗಳನ್ನು ಕಲಹ ಪೀಡಿತ ರಾಜ್ಯಕ್ಕೆ ಕಳುಹಿಸಲಾಗಿದೆ.

   ಇದರೊಂದಿಗೆ, ಕಳೆದ 10 ದಿನಗಳಲ್ಲಿ ಹಿಂಸಾತ್ಮಕ ಚಟುವಟಿಕೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಈಶಾನ್ಯ ರಾಜ್ಯದಲ್ಲಿ 90,000 ಹೆಚ್ಚುವರಿ ಅರೆಸೇನಾ ಸಿಬ್ಬಂದಿಗಳನ್ನು ಒಳಗೊಂಡ ಒಟ್ಟು 90 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

  ಮಣಿಪುರದ ಭದ್ರತೆಯ ಕುರಿತು ಮಾತನಾಡಿದ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಇಂದು, ನಾವು ಭದ್ರತಾ ಪರಿಶೀಲನಾ ಸಭೆಯನ್ನು ನಡೆಸಿದ್ದೇವೆ ಮತ್ತು ಈ ಸಭೆಯಲ್ಲಿ ಎಲ್ಲಾ ಜಿಲ್ಲೆಗಳು ಮತ್ತು ಇಂಫಾಲ್ ನಗರದ ಭದ್ರತೆಯನ್ನು ಪರಿಶೀಲಿಸಿದ್ದೇವೆ. ಈಗಾಗಲೇ ಎಲ್ಲಾ ಜಿಲ್ಲೆಗಳ ಡಿಸಿ ಮತ್ತು ಎಸ್ಪಿಗಳೊಂದಿಗೆ ಸಮಸ್ಯೆಗಳನ್ನು ಚರ್ಚಿಸಿದ್ದೇವೆ. ಹಿಂಸಾಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸಭೆಯಲ್ಲಿ ಸೇನೆ, ಪೊಲೀಸ್, ಸಿಆರ್‌ಪಿಫ್‌, ಬಿಎಸ್‌ಎಫ್‌, ಐಟಿಬಿಪಿ ಅಧಿಕಾರಿಗಳು ಉಪಸ್ಥಿತರಿದ್ದರು.

  ಮಣಿಪುರದಲ್ಲಿ ಜನಾಂಗೀಯ ಕಲಹ ಹೆಚ್ಚಾಗಿದ್ದು, ನವೆಂಬರ್ 11 ರಂದು ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕುಕಿ ಸಮುದಾಯದ ಬಂಡುಕೋರರು ಹತರಾಗಿದ್ದರು.  ಅದರ ಪ್ರತಿಕಾರವಾಗಿ ಬಂಡುಕೋರರು ಮೈತೆಯಿ ಸಮಾಜದ ಆರು ಜನರನ್ನು ಅಪಹರಣ ಮಾಡಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ನಂತರ ಆರು ಮಂದಿಯ ಶವ ಪತ್ತೆಯಾಗಿತ್ತು. ಈ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಮಣಿಪುರದ ಕೆಲ ಶಾಸಕರ ಮನೆಗೆ ಬೆಂಕಿ ಹಚ್ಚಲಾಗಿತ್ತು. ಸದ್ಯ ಮಣಿಪುರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಗಲಭೆ ಹಾಗೂ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆ.

 

Recent Articles

spot_img

Related Stories

Share via
Copy link