ಬೆಂಗಳೂರು:
ಬೆಂಗಳೂರು ನಮ್ಮ ಮೆಟ್ರೋ ಜಾಲ ನಗರಾದ್ಯಂತ ವಿಸ್ತರಣೆಗೊಳ್ಳುತ್ತಿದೆ. ಹಾಲಿ ಮಾರ್ಗಗಳ ಜೊತೆಗೆ ಹೊಸದಾಗಿ ಮಾರ್ಗಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ BMRCL ಮಹತ್ವದ ಹೆಜ್ಜೆ ಇಟ್ಟಿದೆ. ತನ್ನ ಹೊಣೆಗಾರಿಕೆ ಮತ್ತು ಸಾಮಾಜಿಕ ಜವಾಬ್ದಾರಿ ಮೆರೆಯಲು ಒಟ್ಟು 5.28 ಕೋಟಿ ರೂಪಾಯಿ ಮೀಸಲಿಟ್ಟಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಬೆಂಗಳೂರಿನ ಹಸಿರು ಹೊದಿಕೆ ಹೆಚ್ಚಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಯೋಜನೆಗಳಿಗಾಗಿ, ನಗರದಿಂದ ಹೊರ ವಲಯದವರೆಗೆ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಸಾವಿರಾರು ಮರಗಳಿಗೆ ಕತ್ತರಿ ಹಾಕಲಾಗಿದೆ. ಸಿಲ್ಕ್ ಬೋರ್ಡ್-ಕೆ.ಆರ್.ಪುರಂ-ಬೆಂಗಳೂರು ಏರ್ಪೋರ್ಟ್ ವರೆಗಿನ ನೀಲಿ ಮಾರ್ಗವನ್ನು 2A ಮತ್ತು 2B ಎಂದು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಈ ಸಂಬಂಧ ಅನೇಕ 7000ಕ್ಕೂ ಹೆಚ್ಚು ಮರಗಳಿಗೆ ಕತ್ತರಿ ಹಾಕಲಾಗಿತ್ತು.
ಇದು ಸೇರಿದಂತೆ ಬೇರೆ ಬೇರೆ ಮಾರ್ಗಗಳಲ್ಲೂ ಒಂದಷ್ಟು ಮರಗಳಿಗೆ ಕೊಡಲಿ ಏಟು ಬಿದ್ದಿತ್ತು. ನೀಲಿ ಮಾರ್ಗ ಸಂಬಂಧ ಸಾರ್ವಜನಿಕ ಪಿಐಎಲ್ ಸಹ ಸಲ್ಲಿಕೆ ಆಗಿದ್ದು, ಕೋರ್ಟ್ ಸಸಿ ನೆಡಲು ಸೂಚನೆ ಸಹ ನೀಡಿತ್ತು. ಜೊತೆಗೆ ಒಂದಷ್ಟು ಮರಗಳ ಸ್ಥಳಾಂತರಕ್ಕೆ ನಿರ್ದೇಶಿಸಿತಲ್ಲದೇ, ಕಾಲ ಕಾಲಕ್ಕೆ ಮರಗಳ ಬೆಳವಣಿಗೆ ಬಗ್ಗೆ ವರದಿ ನೀಡುವಂತೆ ಕೋರ್ಟ್ ಆದೇಶಿತ್ತು. ಅದರಂತೆ ಮರ ಕತ್ತರಿಸಿ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ.
ಇದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೊರ ವಲಯದಲ್ಲಿ ಒಟ್ಟು 20000 ಗಿಡಗಳನ್ನು ನೆಟ್ಟು ಪೋಷಿಸಲು ಮುಂದಾಗಿದೆ. ಒಟ್ಟು 5.28 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಮೂಲಕ ಬೆಂಗಳೂರು ನಗರದ ಹಸಿರು ಹೊದಿಕೆ ಹೆಚ್ಚಳಕ್ಕೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಎಷ್ಟು ಮರಗಳ ಕಡಿತ, ಅಂಕಿ ಸಂಖ್ಯೆ ಮೆಟ್ರೋ ಯೋಜನೆಗಳಿಗಾಗಿ 2021-2023ರ ಸಮಯದಲ್ಲಿ 3600ಕ್ಕೂ ಹೆಚ್ಚು ಮರಳಿಗೆ ಕೊಡಲಿ ಹಾಕಲಾಗಿದೆ. ಈ ಅವಧಿಗೂ ಒಂದು ವರ್ಷ ಮೊದಲು 850ಕ್ಕೂ ಹೆಚ್ಚು ಮರಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ನೀಲಿ ಮಾರ್ಗದಲ್ಲಿ ಎಲ್ಲ ಮರಗಳಿಗೂ ಕಟ್ ಮಾಡಿಲ್ಲ. ಅಗತ್ಯತೆ ನೋಡಿಕೊಂಡು 107 ಮರಗಳನ್ನು ಸ್ಥಳಾಂತರ ಮಾಡಲಾಗಿದೆ. 1165 ಮರಕ್ಕೆ ಕೊಡಲಿ ಹಾಕಲಾಗಿದೆ. ಈವರೆಗೆ 1200ರಷ್ಟು ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರಗೊಳಿಸಲಾಗಿದೆ. ಸದ್ಯ ಬೆಂಗಳೂರಿನ ಹೊರ ವಲಯದಲ್ಲಿ ಒಂದು ಹಂತದಲ್ಲಿ 5000 ಗಿಡಗಳಂತೆ ಒಟ್ಟು 4 ಹಂತಗಳಲ್ಲಿ 20000 ಸಾವಿರ ಗಿಡಗಳನ್ನು ನೆಟ್ಟು ಪೋಷಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮುಂದಾಗಿದೆ.