ಬೆಂಗಳೂರು:
ನಗರದ ಮದರಸಾದಲ್ಲಿ 11 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಇದಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 16 ರಂದು ಹೆಗಡೆ ನಗರದಲ್ಲಿ ನಡೆದಿದ್ದ ಘಟನೆಯ ದೃಶ್ಯ ಮದರಸಾದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸಂತ್ರಸ್ತೆಯ ತಾಯಿ ಬುಧವಾರ ನೀಡಿದ ದೂರಿನಲ್ಲಿ, ತನ್ನ ಮಗಳನ್ನು ಮದರಸಾದಲ್ಲಿ ಐದನೇ ತರಗತಿಗೆ ಸೇರಿಸಲಾಗಿತ್ತು. ಹಾಸ್ಟೆಲ್ ಉಸ್ತುವಾರಿಯ ಪುತ್ರ ಮೊಹಮ್ಮದ್ ಹಸನ್ ಆಗಾಗ ಹಾಸ್ಟೆಲ್ಗೆ ಭೇಟಿ ನೀಡುತ್ತಿದ್ದರು. ಮಕ್ಕಳೊಡನೆ ಜಗಳವಾಡಿದ ಆರೋಪದಲ್ಲಿ ಮಗಳ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 16 ರಂದು ಸಂಜೆ ಬಾಲಕಿಯನ್ನು ಕಚೇರಿಗೆ ಕರೆಸಲಾಗಿದೆ. ಅಕ್ಕಿಯನ್ನು ಕೆಳಗೆ ಸುರಿದು ಮತ್ತು ಇತರ ಹಾಸ್ಟೆಲ್ ಹುಡುಗಿಯರೊಂದಿಗೆ ಆಟವಾಡುವಾಗ ಜಗಳವಾಡಿದ ಆರೋಪದ ಮೇಲೆ ಹಸನ್ ಬಾಲಕಿಗೆ ಥಳಿಸಿ, ಒದ್ದಿದ್ದಾನೆ. ಕೊತ್ತನೂರು ಪೊಲೀಸ್ ಠಾಣೆಯು ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 (ಮಕ್ಕಳ ಮೇಲಿನ ಕ್ರೌರ್ಯಕ್ಕೆ ಶಿಕ್ಷೆ) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಡಿಸಿಪಿ ಮಾತನಾಡಿ, ಥಣಿಸಂದ್ರದಲ್ಲಿ 2021ರಿಂದ ಮದರಸಾ ನಡೆಸಲಾಗುತ್ತಿದೆ. ಇಲ್ಲಿ 200 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಮದರಸಾವನ್ನು ತಂದೆ ಹಾಗೂ ಇಬ್ಬರು ಮಕ್ಕಳು ನಡೆಸುತ್ತಿದ್ದಾರೆ. ಬುಧವಾರ ರಾತ್ರಿ ಎಫ್ಐಆರ್ ದಾಖಲಿಸಿದ್ದೇವೆ. ಆರೋಪಿ ಮೊಹಮ್ಮದ್ ಹಸನ್ ಅಲಿ ಬಂಧನ ಮಾಡಿದ್ದೇವೆ. ಈತ ಮದರಸಾ ಆಡಳಿತದಲ್ಲಿ ಸದಸ್ಯನಾಗಿದ್ದು, ಆತನ ಸಹೋದರಿ ನಿಶಾ ಪ್ರಾಂಶುಪಾಲರಾಗಿದ್ದಾರೆ. ಹೀಗಾಗಿ ಮದರಸಾಗೆ ಬಂದು ಏಕಾಏಕಿ ನಾಲ್ಕೈದು ಮಕ್ಕಳಿಗೆ ಹಲ್ಲೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, CWC ಕಮಿಟಿಯವರಿಗೆ ಪತ್ರ ಬರೆದು ಘಟನೆ ಬಗ್ಗೆ ಮಾಹಿತಿ ಕಲೆ ಹಾಕಲು ತಿಳಿಸಿದ್ದೇವೆ. ರಿಪೋರ್ಟ್ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
