ನವದೆಹಲಿ :
ಫೆ.23 ರಂದು ಈ ಚಾಂಪಿಯನ್ಸ್ ಟ್ರೋಫಿಯ ಅತ್ಯಂತ ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ. ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಈ ಮಹತ್ವದ ಪಂದ್ಯ ನಡೆಯಲಿದೆ. ಪಂದ್ಯಕ್ಕೂ ಮುನ್ನವೇ ಮಹಾಕುಂಭದಲ್ಲಿ ಭಾರೀ ಸುದ್ದಿಯಾದ ಮಾಜಿ ಏರೋಸ್ಪೇಸ್ ಇಂಜಿನಿಯರ್ ‘ಐಐಟಿ ಬಾಬಾ’ ಅಭಯ್ ಸಿಂಗ್ ಅವರು ಪಂದ್ಯ ಭವಿಷ್ಯ ನುಡಿದ್ದಾರೆ. ಇವರು ನುಡಿದ ಭವಿಷ್ಯವಾಣಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ವಿರೋಧ ವ್ಯಕ್ತವಾಗಿದೆ.
ಸ್ಥಳೀಯ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ ಐಐಟಿ ಬಾಬಾ,’ವಿರಾಟ್ ಕೊಹ್ಲಿ ಮತ್ತು ತಂಡ ಇತರ ಆಟಗಾರರು ಎಷ್ಟೇ ಪ್ರಯತ್ನಿಸಿದರೂ ಈ ಬಾರಿ ಭಾರತ ತಂಡ ಪಾಕ್ ವಿರುದ್ಧ ಗೆಲ್ಲುವುದಿಲ್ಲ. ನಾನು ಭವಿಷ್ಯ ನುಡಿದ ಮೇಲೆ ಅದು ನಿಜವಾಗಿತ್ತದೆ. ಪಾಕ್ ಗೆದ್ದೇ ಗೆಲ್ಲುತ್ತದೆ. ಈ ಕುರಿತ ಯಾವ ಸವಾಲಿಗೂ ನಾನು ಸಿದ್ಧ’ ಎಂದು ಹೇಳಿದ್ದಾರೆ. 2024ರ ಟಿ20 ವಿಶ್ವಕಪ್ ವೇಳೆ ಭಾರತ ತಂಡ ಕಪ್ ಗೆಲ್ಲಲಿದೆ ಎಂದು ಇದೇ ಐಐಟಿ ಬಾಬಾ ಭವಿಷ್ಯ ನುಡಿದಿದ್ದರು. ಅಂದು ಅವರ ಭವಿಷ್ಯದಂತೆ ಭಾರತ ದಕ್ಷಿಣ ಆಫ್ರಿಕಾವನ್ನು ಮಣಿಸಿ ಕಪ್ ಗೆದ್ದಿತ್ತು.
ಅವರ ಈ ಭವಿಷ್ಯ ಕೇಳಿದ ಬಳಿಕ ಭಾರತೀಯ ನೆಟ್ಟಿಗರು ಅವರನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ. ಒಂದೊಮ್ಮೆ ನಿಮ್ಮ ಭವಿಷ್ಯ ಸುಳ್ಳಾದರೆ ನೀವೇನು ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ನಿಮ್ಮ ಭವಿಷ್ಯ ಸುಳ್ಳಾದರೆ ಸನ್ಯಾಸ ತೊರೆದು ಮತ್ತೆ ಏರೋಸ್ಪೇಸ್ನಲ್ಲಿ ಕೆಲಸ ಮುಂದುವರಿಸಿ ಎಂದಿದ್ದಾರೆ.
ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅಜೇಯ ದಾಖಲೆ ಹೊಂದಿದ್ದರೂ, ಟಿ20 ವಿಶ್ವಕಪ್ನಲ್ಲಿ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಬಲಿಷ್ಠವಾದ ದಾಖಲೆ ಹೊಂದಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ಪಾಕ್ ಎದುರು ಹಿನ್ನಡೆ ಅನುಭವಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಆಡಿರುವ 5 ಪಂದ್ಯಗಳಲ್ಲಿ 3ರಲ್ಲಿ ಸೋತು, 2 ಪಂದ್ಯದಲ್ಲಷ್ಟೆ ಜಯ ಸಾಧಿಸಿದೆ. ಅದರಲ್ಲೂ 2017ರ ಫೈನಲ್ ಸೋಲು ಭಾರತಕ್ಕೆ ದೊಡ್ಡ ಮುಖಭಂಗವಾಗಿತ್ತು. ಈ ಬಾರಿ ಭಾರತ ಗೆಲುವು ಸಾಧಿಸಬಹುದೇ ಎಂದು ಕಾದು ನೋಡಬೇಕಿದೆ.
ಪಾಕಿಸ್ತಾನ ತಂಡ ತವರಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ಗೆಲ್ಲಲ್ಲೇ ಬೇಕಾದ ಒತ್ತಡವಿದೆ. ಪಾಕ್ ತಂಡ ತವರಿನ ಪಿಚ್ನಲ್ಲಿ ಅಷ್ಟಾಗಿ ಬಲಿಷ್ಠವಾಗದಿದ್ದರೂ ದುಬೈ ಪಿಚ್ನಲ್ಲಿ ಅತ್ಯಂತ ಅಪಾಯಕಾರಿ. ಇದಕ್ಕೆ 2021 ರ ಟಿ20 ವಿಶ್ವಕಪ್ ಟೂರ್ನಿಯೇ ಸಾಕ್ಷಿ. ಅಂದು ಭಾರತವನ್ನು ಪಾಕ್ ತಂಡ 10 ವಿಕೆಟ್ ಅಂತರದಿಂದ ಮಣಿಸಿತ್ತು. ಕಿವೀಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಫಖರ್ ಜಮಾನ್ ಟೂರ್ನಿಯಿಂದ ಹೊರಬಿದ್ದಿರುವುದು ಪಾಕ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರು ಭಾರತ ವಿರುದ್ಧ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದರು.
