ದುಬೈ:
2023ರ ಏಕದಿನ ವಿಶ್ವಕಪ್ ವೇಳೆ ಟೀಮ್ ಇಂಡಿಯಾ ಫೀಲ್ಡಿಂಗ್ ಗುಣಮಟ್ಟ ಹೆಚ್ಚಿಸಲು ಮತ್ತು ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುವ ಸಲುವಾಗಿ ಭಾರತೀಯ ಡ್ರೆಸ್ಸಿಂಗ್ ರೂಂನಲ್ಲಿ ಹೊಸ ವಿಧಾನವನ್ನು ಕಂಡುಕೊಳ್ಳಲಾಗಿತ್ತು. ಪ್ರತಿ ಪಂದ್ಯದ ಬಳಿಕ ಬೆಸ್ಟ್ ಫೀಲ್ಡರ್ ಪ್ರಶಸ್ತಿ ನೀಡಲಾಗುತ್ತಿತ್ತು. ಇದು ಕಳೆದ ಟಿ20 ವಿಶ್ವಕಪ್ ಟೂರ್ನಿಗೂ ಅನ್ವಯವಾಗಿತ್ತು. ಇದೀಗ ಈ ಸಂಪ್ರದಾಯ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರಿದೆ. ಅದರಂತೆ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಕನ್ನಡಿಗ, ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಗೆದ್ದಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರು ಶ್ರೇಷ್ಠ ಕ್ಷೇತ್ರರಕ್ಷಕ ಪ್ರಶಸ್ತಿ ಘೋಷಣೆ ಮಾಡಿ, ಮೊದಲ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು. ಈ ವೇಳೆ ರಾಹುಲ್ ಅವರ ಫೋಟೊವನ್ನು ಸ್ಟೇಡಿಯಂನ ಗ್ಯಾಲರಿಯ ದೊಡ್ಡ ಪರದೆ ಮೇಲೆ ತೋರಿಸಲಾಯಿತು. ಆಲ್ರೌಂಡರ್ ಜಡೇಜಾ ಬೆಸ್ಟ್ ಫೀಲ್ಡನ್ ಪದಕವನ್ನು ರಾಹುಲ್ಗೆ ತೊಡಿಸಿದರು. ಈ ವೇಳೆ ತಂಡದ ಸಹ ಆಟಗಾರರು ಚಪ್ಪಾಳೆ ತಟ್ಟಿ ರಾಹುಲ್ಗೆ ಹುರಿದುಂಬಿಸಿದರು. ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಮತ್ತು ಯೂಟ್ಯೂಬ್ನಲ್ಲಿ ಹಂಚಿಕೊಂಡಿದೆ. ರಾಹುಲ್ ಬಾಂಗ್ಲಾ ವಿರುದ್ಧ ಒಟ್ಟು ಮೂರು ಕ್ಯಾಚ್ಗಳನ್ನು ಹಿಡಿದಿದ್ದರು. ಬ್ಯಾಟಿಂಗ್ನಲ್ಲಿಯೂ ಅಜೇಯ 41 ರನ್ ಬಾರಿಸಿದ್ದರು.
ಗಿಲ್ ಜತೆಗೂಡಿ ರಾಹುಲ್ ಅಮೂಲ್ಯ ಇನಿಂಗ್ಸ್ ಕಟ್ಟಿದರು. ಈ ಜೋಡಿ ಮುರಿಯದ 5ನೇ ವಿಕೆಟ್ಗೆ 98 ಎಸೆತಗಳಲ್ಲಿ 87 ರನ್ ಕಲೆಹಾಕಿದರು. ಗೆಲುವಿಗೆ 4 ರನ್ ಬೇಕಿದ್ದಾಗ ರಾಹುಲ್ ಸೊಗಸಾದ ಸಿಕ್ಸರ್ ಬಾರಿಸಿ ಭಾರತದ ಗೆಲುವನ್ನು ಸಾರಿದ್ದರು. ಗಿಲ್ 125 ಎಸೆತ ಎದರಿಸಿ ಶತಕ ಸಾಧನೆ ಮಾಡಿದರು. ಅವರ ಗಳಿಗೆ 101*.
ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಬಾಂಗ್ಲಾದೇಶ 49.4 ಓವರ್ಗಳಲ್ಲಿ 229 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಬೀಸಿದ ಭಾರತ ಶುಭಮನ್ ಗಿಲ್ ಶತಕದ ಬಲದಿಂದ 46.3 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 231 ರನ್ಗಳನ್ನು ಗಳಿಸಿ ಗೆಲುವಿನ ದಡ ಸೇರಿತು.
ಭಾರತ ತನ್ನ ಮುಂದಿನ ಪಂದ್ಯವನ್ನು ಭಾನುವಾರ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಗೆದ್ದರೆ, ಭಾರತದ ಸೆಮಿಫೈನಲ್ ಟಿಕೆಟ್ ಬಹುತೇಕ ಖಚಿತವಾಗಲಿದೆ. ಆದರೆ ಪಾಕ್ಗೆ ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡೆವಿದೆ. ಏಕೆಂದರೆ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕ್ ಹೀನಾಯ ಸೋಲು ಕಂಡಿತ್ತು.
