ಚಿಕ್ಕಮಗಳೂರು
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪವರ್ತದಲ್ಲಿರುವ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ (ದತ್ತಪೀಠ)ದಲ್ಲಿ ಇಂದಿನಿಂದ (ಮಾರ್ಚ್. 15) ರಿಂದ ಮೂರು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾಡಳಿತದ ನೇತೃತ್ವದಲ್ಲಿ ಉರುಸ್ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 15 ರಿಂದ 17 ರ ವರೆಗೂ ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯುವ ಉರುಸ್ ಆಚರಣೆಗೆ ರಾಜ್ಯ ಸೇರಿದಂತೆ ಹೊರ ರಾಜ್ಯದಿಂದ ಸಾವಿರಾರು ಜನರು ಆಗಮಿಸುತ್ತಾರೆ. ಉರುಸ್ ಆಚರಣೆಯಲ್ಲಿ ಸೂಫಿ ಸಂತರು ಭಾಗಿಯಾಗಲಿದ್ದಾರೆ. ಉರುಸ್ ಆಚರಣೆ ಹಿನ್ನೆಲೆಯಲ್ಲಿ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ (ದತ್ತಪೀಠ) ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ ಒಂದು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ನಮ್ಮ ನೇತೃತ್ವದಲ್ಲಿ ಉರುಸ್ ಆಚರಣೆ ನಡೆಯಬೇಕೆಂದು ಶಾಖಾದ್ರಿ ಕುಟುಂಬ ಪಟ್ಟು ಹಿಡಿದಿದೆ. ವಿವಾದಿತ ಗುಹೆಯೊಳಗಿನ ಗೋರಿಗಳಿಗೆ ಗಂಧ ಲೇಪನಕ್ಕೆ ಶಾಖಾದ್ರಿ ಕುಟುಂಬ ಅವಕಾಶ ಕೇಳಿದೆ. ಆದರೆ, ಶಾಖಾದ್ರಿ ಕುಟುಂಬದ ನೇತೃತ್ವದ ಉರುಸ್ ಆಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಉರುಸ್, ಗಂಧ ಲೇಪನಕ್ಕೆ ಅವಕಾಶ ಕೇಳಿ ಶಾಖಾದ್ರಿ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
