ಮುಂಬಯಿ:
ಐಪಿಎಲ್ 18ನೇ ಆವೃತ್ತಿಯ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಬಿಸಿಸಿಐ ಬೌಲರ್ಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಲು ಮುಂದಾಗಿದೆ. ಕೋವಿಡ್ ಸಂದರ್ಭದಲ್ಲಿ ನಿಷೇಧಿಸಲಾಗಿದ್ದ ಚೆಂಡಿಗೆ ಎಂಜಲು ಹಾಕಿ ಉಜ್ಜುವ ನಿಯಮವನ್ನು ಮತ್ತೆ ಜಾರಿಗೆ ತರಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಚಿಂತನೆ ನಡೆಸಿದೆ.
ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಬಳಕೆ ಮಾಡುವುದರಿಂದ ಬೌಲರ್ಗಳಿಗೆ ಒದು ಸಹಕಾರಿಯಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ವೇಗಿ ಮೊಹಮ್ಮದ್ ಶಮಿ ಅವರು ಈ ನಿಯಮವನ್ನು ಮತ್ತೆ ಜಾರಿಗೊಳಿಸಿದರೆ ಬೌಲರ್ಗಳಿಗೆ ನೆರವಾಗುತ್ತದೆ ಎಂದು ಐಸಿಸಿಗೆ ಮನವಿ ಮಾಡಿದ್ದರು. ಇದೀಗ ಬಿಸಿಸಿಐ ಐಪಿಎಲ್ ಮೂಲಕ ಈ ನಿಯಮವನ್ನು ಮರು ಜಾರಿಗೊಳಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಇಂದು(ಮಾ.20) ಮುಂಬೈನಲ್ಲಿ ನಡೆಯಲಿರುವ ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಈ ಪ್ರಸ್ತಾವವನ್ನು ಇಡಲು ಬಿಸಿಸಿಐ ಸಿದ್ಧವಾಗಿದೆ. 2022ರಲ್ಲಿ ಐಸಿಸಿ (ಐಸಿಸಿ) ಕೋವಿಡ್ ತಡೆ ಮಾರ್ಗಸೂಚಿಯನ್ನು ಜಾರಿ ಮಾಡಿತ್ತು. ಆ ಸಂದರ್ಭದಲ್ಲಿ ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಿತ್ತು. ನಿಯಮ ಉಲ್ಲಂಘಿಸಿದ ಆಟಗಾರನನ್ನು ವಜಾಗೊಳಿಸುವ ಶಿಕ್ಷೆಯನ್ನೂ ಪ್ರಕಟಿಸಿತ್ತು. ಒಂದೊಮ್ಮೆ ಐಪಿಎಲ್ನಲ್ಲಿ ಎಂಜಲು ಬಳಕೆಯು ಆರಂಭವಾದರೆ ಐಸಿಸಿಯು ತನ್ನ ನಿಯಮವನ್ನು ಸಡಿಲಗೊಳಿಸುವ ಕುರಿತು ಮರುಪರಿಶೀಲನೆ ನಡೆಸುವ ಸಾಧ್ಯತೆ ಹೆಚ್ಚಲಿದೆ.
ಮುಖ್ಯವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಬಳಸಲಾಗುವ ಕೆಂಪು ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಕೆ ಅಗತ್ಯ. ಅದರಿಂದ ವೇಗಿಗಳಿಗೆ ರಿವರ್ಸ್ ಸ್ವಿಂಗ್ ಪ್ರಯೋಗವು ಸುಲಭವಾಗುತ್ತದೆ. ಆದರೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಬಳಸಲಾಗುವ ಬಿಳಿ ಚೆಂಡಿಗೆ ಎಂಜಲು ಬಳಕೆಯಿಂದ ಹೆಚ್ಚು ವ್ಯತ್ಯಾಸವಾಗುವುದಿಲ್ಲ.
ಗಾಯ ಮತ್ತಿತರ ಕಾರಣಗಳಿಂದಾಗಿ ಅಲಭ್ಯರಾಗುವ ಆಟಗಾರರ ಬದಲಿಗೆ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ನಿಯಮಾವಳಿಯಲ್ಲಿ ಬಿಸಿಸಿಐ ಕೆಲ ಪ್ರಮುಖ ಪರಿಷ್ಕರಣೆಗಳನ್ನು ಮಾಡಿದೆ. ಹೊಸ ನಿಯದ ಪ್ರಕಾರ ತಂಡಗಳು ಇನ್ನು ಯಾರನ್ನು ಬೇಕಾದರೂ ಬದಲಿ ಆಟಗಾರನಾಗಿ ತಂಡ ಸೇರ್ಪಡೆಗೊಳಿಸುವಂತಿಲ್ಲ. ಗಾಯ ಅಥವಾ ಬೇರಾವುದೇ ಕಾರಣದಿಂದ ಟೂರ್ನಿಯಿಂದ ಹೊರಬಿದ್ದ ಆಟಗಾರ ಪಡೆಯುವ ಸಂಭಾವನೆಗಿಂತ ಅಧಿಕ ಮೊತ್ತಕ್ಕೆ ಬದಲಿ ಆಟಗಾರನನ್ನು ಸೇರಿಸಿಕೊಳ್ಳುವಂತಿಲ್ಲ ಎಂದೂ ಬಿಸಿಸಿಐ ಈ ಬಾರಿ ನಿಯಮ ಪರಿಷ್ಕರಣೆ ಮಾಡಿದೆ.
ಐಪಿಎಲ್ನಲ್ಲಿ ಈ ಮುನ್ನ ಟೂರ್ನಿ ಆರಂಭಗೊಂಡ ನಂತರ ಪ್ರತಿ ತಂಡ ಆರಂಭಿಕ 7 ಲೀಗ್ ಪಂದ್ಯಗಳನ್ನು ಆಡುವವರೆಗೆ ಮಾತ್ರ ಬದಲಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವಿತ್ತು. ಅದನ್ನು ಈ ಬಾರಿ 12ನೇ ಲೀಗ್ ಪಂದ್ಯದವರೆಗೂ ವಿಸ್ತರಿಸಲಾಗಿದೆ. ಇದರಿಂದ ಆಟಗಾರನೊಬ್ಬ 12ನೇ ಲೀಗ್ ಪಂದ್ಯದ ವೇಳೆ ಗಾಯಗೊಂಡರೂ ಆತನ ಬದಲಿಗೆ ಬೇರೆ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ಲಭಿಸಲಿದೆ.
