ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

ನವದೆಹಲಿ

    ಕ್ಯಾಥೋಲಿಕ್ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್   ವ್ಯಾಟಿಕನ್   ನಗರದಲ್ಲಿ ನಿಧನರಾದರು. ಫ್ರಾನ್ಸಿಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಫ್ರಾನ್ಸಿಸ್ ಅವರನ್ನು ಇತ್ತೀಚೆಗೆ ನ್ಯುಮೋನಿಯಾದಿಂದ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 7:35 ಕ್ಕೆ ಫ್ರಾನ್ಸಿಸ್ ಇಹಲೋಕ ತ್ಯಜಿಸಿದರು ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ. ಅವರ ನಿಧನದ ಸುದ್ದಿ ಪ್ರಪಂಚದಾದ್ಯಂತ ಕೋಟ್ಯಂತರ ಕ್ಯಾಥೋಲಿಕರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಪೋಪ್ ಫ್ರಾನ್ಸಿಸ್ ಆರೋಗ್ಯ ಕಳೆದೊಂದು ವಾರದಿಂದ ತೀವ್ರವಾಗಿ ಹದಗೆಟ್ಟಿತ್ತು.

    ಕೆಲವು ತಿಂಗಳುಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ತೀವ್ರವಾದ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು. ಕಳೆದ ವಾರ ಸೇಂಟ್ ಪೀಟರ್ಸ್ ಚೌಕ್​​ನಲ್ಲಿ ಕ್ಯಾಥೋಲಿಕ್ ಚರ್ಚ್‌ನ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನಾರೋಗ್ಯದ ಕಾರಣ ಪೋಪ್ ಫ್ರಾನ್ಸಿಸ್ ಅವರಿಗೆ ಸಾಧ್ಯವಾಗಿರಲಿಲ್ಲ. ನಿಗದಿಯಾಗಿದ್ದ ಅನೇಕ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿತ್ತು. ಪೋಪ್‌ಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಅವರ ಸ್ಥಿತಿ ‘ಸ್ಥಿರ’ ಎಂದು ಈ ಹಿಂದೆ ವೈದ್ಯರು ತಿಳಿಸಿದ್ದರು. ಆದರೆ, ಪೋಪ್ ಸ್ಥಿತಿ ಗಂಭೀರವಾಗಿದೆ ಎಂದು ಶನಿವಾರ ಸಂಜೆ ವ್ಯಾಟಿಕನ್ ಪ್ರಕಟಣೆ ತಿಳಿಸಿತ್ತು. 

   ಪೋಪ್ ಫ್ರಾನ್ಸಿಸ್ ಅವರ ನಿಧನ ವಾರ್ತೆಯನ್ನು ವ್ಯಾಟಿಕನ್‌ನ ಕ್ಯಾಮರ್ಲೆಂಗೊ ಕಾರ್ಡಿನಲ್, ಕೆವಿನ್ ಫಾರೆಲ್ ಘೋಷಿಸಿದರು. ಕ್ಯಾಮರ್ಲೆಂಗೊ ಕಾರ್ಡಿನಲ್ ಎಂಬುದು ವ್ಯಾಟೆಕಿನ್ ನಗರದಲ್ಲಿ ಆಡಳಿತಾತ್ಮಕ ಹುದ್ದೆಯಾಗಿದ್ದು, ನಗರದ ಖಜಾನೆ ಮತ್ತು ಆಡಳಿತಾತ್ಮಕ ಕೆಲಸಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ. 

   ಪೋಪ್ ಫ್ರಾನ್ಸಿಸ್ 2013 ರಲ್ಲಿ ಕ್ಯಾಥೋಲಿಕ್ ಚರ್ಚಿನ ಮುಖ್ಯಸ್ಥರಾಗಿದ್ದರು. ಅರ್ಜೆಂಟೀನಾದಲ್ಲಿ ಜನಿಸಿದ್ದ ಪೋಪ್ ಫ್ರಾನ್ಸಿಸ್, ಅಮೆರಿಕ ಖಂಡದಿಂದ ಬಂದ ಮೊದಲ ಪೋಪ್ ಆಗಿದ್ದರು. ಅವರು 2013 ರ ಮಾರ್ಚ್ 13 ರಂದು ತಮ್ಮ 76 ನೇ ವಯಸ್ಸಿನಲ್ಲಿ ಪೋಪ್ ಆಗಿ ಆಯ್ಕೆಯಾದರು. 

   ಈಸ್ಟರ್ ಸಂದರ್ಭದಲ್ಲಿ ಬೆಸಿಲಿಕಾದಲ್ಲಿ ಭಾನುವಾರ ಮಾಡಿದ್ದ ಭಾಷಣದಲ್ಲಿ ಅವರು ಧಾರ್ಮಿಕ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ಧಾರ್ಮಿಕ ಸ್ವಾತಂತ್ರ್ಯ ಬಹಳ ಮುಖ್ಯ. ಜೊತೆ ಇತರ ಅಭಿಪ್ರಾಯಗಳನ್ನು ಗೌರವಿಸುವ ಮನಸ್ಸಿರಬೇಕು. ಇವೆರಡು ಇಲ್ಲದಿದ್ದರೆ ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ ಎಂದು ಈಸ್ಟರ್ ಸಂದೇಶದಲ್ಲಿ ಪೋಪ್ ತಿಳಿಸಿದ್ದರು. ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡೇ ಭಕ್ತರತ್ತ ಕೈಬೀಸಿ ಹಾರೈಸಿದ್ದರು. 

   ಹೆಚ್ಚಾಗುತ್ತಿರುವ ಯಹೂದಿ ವಿರೋಧಿ ಮನಸ್ಥಿತಿ ಮತ್ತು ವಾತಾವರಣದ ಬಗ್ಗೆ ಪ್ರಸ್ತಾಪಿಸಿದ್ದ ಅವರು, ಗಾಜಾ ಯುದ್ಧವನ್ನು ಖಂಡಿಸಿದ್ದರು. ಜೊತೆಗೆ ಕದನ ವಿರಾಮಕ್ಕೆ ಕರೆ ನೀಡಿದ್ದರು ಕಳೆದ ವರ್ಷ ಜೂನ್‌ನಲ್ಲಿ, ಪ್ರಧಾನಿಯವರು G7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ಹೋಗಿದ್ದಾಗ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದರು. ಇದೇ ವೇಳೆ, ಭಾರತಕ್ಕೆ ಬನ್ನಿ ಎಂದು ಪೋಪ್ ಅವರಿಗೆ ಮೋದಿ ಆಹ್ವಾನ ನೀಡಿದ್ದರು. ಪೋಪ್ ಅವರೊಂದಿಗೆ ಪ್ರಧಾನಿ ಮೋದಿ ಅನೇಕ ವಿಷಯಗಳ ಕುರಿತು ಚರ್ಚಿಸಿದ್ದರು. ಆ ಸಮಯದಲ್ಲಿ ವಿಶ್ವದ ಅತಿದೊಡ್ಡ ಬಿಕ್ಕಟ್ಟಾದ ಕೊರೊನಾ ಬಗ್ಗೆಯೂ ಉಭಯರೂ ಸುದೀರ್ಘ ಮಾತುಕತೆ ನಡೆಸಿದ್ದರು.