ನವದೆಹಲಿ:
ಭಾರತ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ಸ್ ನಡೆಸಿದ್ದು 2016ರಲ್ಲಿ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಬಹಿರಂಗ ಹೇಳಿಕೆ ಇದೀಗ ಸ್ವಪಕ್ಷದವರನ್ನೇ ಮುಜುಗರಕ್ಕೀಡು ಮಾಡಿದೆ. ಇದೀಗ ಶಶಿ ತರೂರು ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಯಪಿಎ ಅವಧಿಯಲ್ಲಿ ಬರೋಬ್ಬರಿ ಆರು ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದಿದೆ. ಆದರೆ ಕಾಂಗ್ರೆಸ್ ಹೇಳಿಕೆಯನ್ನು ತಳ್ಳಿ ಹಾಕಿರುವ ಬಿಜೆಪಿ ಇದೊಂದು ಶುದ್ಧ ಸುಳ್ಳು ಎಂದು ಘೋಷಿಸಿದೆ.
ಶಶಿ ತರೂರ್ ಹೇಳಿಕೆಗೆ ಸ್ವಪಕ್ಷದಲ್ಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಕಾಂಗ್ರೆಸ್ ಮುಖಂಡ ರಣ್ದೀಪ್ ಸಿಂಗ್ ಸುರ್ಜೇವಾಲಾ ಪ್ರತಿಕ್ರಿಯಿಸಿದ್ದು, ಶಶಿ ತರೂರ್ ಅವರು ನಿಷ್ಣಾತ, ಅನುಭವಿ ರಾಜಕಾರಣಿ. ಆದರೆ ಅವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನೀಡಿರುವ ಮಾಹಿತಿಯಲ್ಲಿ ತಪ್ಪಿದೆ. ಯುಪಿಎ ಅವಧಿಯಲ್ಲೂ ಪಾಕಿಸ್ತಾನ ಮತ್ತು ಪಾಕ್ನಲ್ಲಿ ನೆಲೆಯೂರಿರುವ ಉಗ್ರರನ್ನು ಮಟ್ಟ ಹಾಕಲು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇವೆ. ಒಟ್ಟು 6ಬಾರಿ ಇಂತಹ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಹೇಳುತ್ತಿರುವ ಸರ್ಜಿಕಲ್ ಸ್ಟ್ರೈಕ್ಸ್ ಯಾವುವು?
- ಜೂ.9, 2008- ಪೂಂಚ್ ಭಟ್ಟಲ್ ಸೆಕ್ಟರ್
- ಆ.30-ಡಿ.1, 2011- ಶಾರದಾ ಸೆಕ್ಟರ್, ನೀಲಂ ನದಿ ದಡ, ಕೇಲ್ ಸೆಕ್ಟರ್
- ಜ.6, 2013- ಸಾವನ್ ಪಾತ್ರ ಚೆಕ್ಪೋಸ್ಟ್
- ಜು. 27&28, 2013- ನಜಾಪಿರ್ ವಲಯ
- ಆ. 6, 2013- ನೀಲಂ ಘಾಟಿ
- ಜ.14, 2014- ನೀಲಂ ಘಾಟಿ
ಇನ್ನು ಕಾಂಗ್ರೆಸ್ ಹೇಳಿಕೆಗೆ ಬಿಜೆಪಿ ಭಾರೀ ಟೀಕೆ ವ್ಯಕ್ತಪಡಿಸಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿರುವುದು ಕೇವಲ ಭ್ರಷ್ಟಾಚಾರ ಅಷ್ಟೇ. ಹೀಗಾಗಿ ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಇನ್ನು ಇದೇ ವಿಚಾರದ ಬಗ್ಗೆ 2018ರಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಇಂತಹದ್ದೇ ಒಂದು ಹೇಳಿಕೆ ನೀಡಿದ್ದರು. ಅಂದು ಅವರು ಯುಪಿಎ ಅವಧಿಯಲ್ಲಿ ಮೂರು ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದಿದ್ದರು. ಆದರೆ ಇದನ್ನುನಿರಾಕರಿಸಿದ್ದ ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್, ಯುಪಿಎ ಅವಧಿಯಲ್ಲಿ ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆದಿರಲಿಲ್ಲ ಎಂದಿದ್ದರು.
