ರಾಂಚಿ:
ಇಂದೋರ್ನ ರಾಜಾ ರಘುವಂಶಿ ಮತ್ತು ಸೋನಂ ಪ್ರಕರಣ ಮಾಸುವ ಮುನ್ನವೇ ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯಾದ ಕೇವಲ ಒಂದೇ ತಿಂಗಳಲ್ಲಿ ಕೈ ಹಿಡಿದ ಪತಿಗೆ ಪತ್ನಿಯೇ ವಿಷವುಣಿಸಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಜಾರ್ಖಾಂಡ್ನ ಗರ್ವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಪತಿಯನ್ನು ಬುಧ್ನಾಥ್ ಸಿಂಗ್ ಎಂದು ಗುರುತಿಸಲಾಗಿದೆ. ಈತನ ಪತ್ನಿ ಸುನೀತಾ ಸಿಂಗ್ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಮೇ 11 ರಂದು ಬುಧ್ನಾಥ್ ಸಿಂಗ್ ಮತ್ತು ಸುನೀತಾ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಮೊದಲ ದಿನದಿಂದಲೂ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಸದಾ ಪರಸ್ಪರ ಜಗಳವಾಡುತ್ತಿದ್ದರು. ಇದೇ ಸಿಟ್ಟಿನಲ್ಲಿ ಸುನೀತಾ ಭಾನುವಾರ ಸಂಜೆ ತನ್ನ ಪತಿಗೆ ಊಟ ಬಡಿಸುವಾಗ ಅದರಲ್ಲಿ ವಿಷ ಬೆರೆಸಿಕೊಟ್ಟಿದ್ದಾಳೆ. ಅದನ್ನ ಸೇವಿಸಿದ ಪತಿಯ ಸ್ಥಿತಿ ಗಂಭೀರವಾದ ತಕ್ಷಣ ಎಚ್ಚೆತ್ತುಕೊಂಡು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೂ ಚಿಕಿತ್ಸೆ ಫಲಿಸದೇ ಬುಧ್ನಾಥ್ ಸಿಂಗ್ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯ ದೇಹದಿಂದ ವಿಷದ ಮಾದರಿಯ ಅಂಶ ಪತ್ತೆಯಾಗಿದ್ದು, ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.
ಮಗ ಈ ರೀತಿ ಅಚಾನಕ್ಕಾಗಿ ಅಸ್ವಸ್ಥಗೊಂಡು ಮೃತಪಟ್ಟಿರುವ ಬೆನ್ನಲ್ಲೇ ಬುಧ್ನಾಥ್ ತಾಯಿಗೆ ಸುನೀತಾ ಮೇಲೆ ಅನುಮಾನ ಬಂದಿದೆ. ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಾಧಾರದಲ್ಲಿ ಸುನೀತಾಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಪ್ರಕರಣದ ಬಗ್ಗೆ ರಂಕ ಉಪ ವಿಭಾಗೀಯ ಪೋಲಿಸ್ ಅಧಿಕಾರಿ ರೋಹಿತ್ ರಂಜನ್ ಸಿಂಗ್ ಮಾತನಾಡಿ, ಇಬ್ಬರ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಇಬ್ಬರು ಪರಸ್ಪರ ಜಗಳ ಆಡುತ್ತಿದ್ದರು. ಹಾಗಾಗಿ ನನ್ನ ಮಗನಿಗೆ ಊಟದಲ್ಲಿ ವಿಷ ಬೆರೆಸಿ ಇಟ್ಟಿದ್ದಾಳೆ ಎಂದು ಮೃತ ವ್ಯಕ್ತಿಯ ತಾಯಿ ಆರೋಪ ಮಾಡಿ ದೂರು ನೀಡಿದ್ದರು. ದೂರನ್ನ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
