ನಾಯಕತ್ವ ಬದಲಾವಣೆ ಮತ್ತೆ ಮುನ್ನಲೆಗೆ; ಇಂದು ರಾಹುಲ್ ಗಾಂಧಿ ಭೇಟಿ ಸಾಧ್ಯತೆ, ಹೆಚ್ಚಿದ ಕುತೂಹಲ

ಬೆಂಗಳೂರು:

    ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ತಾರಕ್ಕೇರಿರುವ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ.ದೆಹಲಿಯಲ್ಲಿಂದು ಎರಡು ಸಭೆಗಳು ನಡೆಯುವ ಸಾಧ್ಯತೆಯಿದೆ. ಈ ಪೈಕಿ ಒಂದು ಪೂರ್ವ ನಿರ್ಧರಿತವಾಗಿದ್ದು, ಅದು ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆಯುವೆ ನಡೆಯಲಿದೆ.

    ಈ ಸಭೆಯು ನಾಲ್ಕು ಮಂದಿ ಪರಿಷತ್ ಸದಸ್ಯರ ಹೆಸರು ಅಂತಿಮಗೊಳಿಸುವ ಕುರಿತು ಹಾಗೂ ಕೆಪಿಸಿಸಿ ಪದಾಧಿಕಾರಿಗಳ ನೇಮಕ, ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ನೇಮಕದ ಕುರಿತು ನಡೆಯಲಿದೆ ಎಂಬ ಅಧಿಕೃತ ವಿವರಣೆಗಳಿವೆ.

    ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರೂ ವರಿಷ್ಠ ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕ ಭೇಟಿಗೆ ಸಮಯ ಕೋರಿದ್ದಾರೆ. ಈವರೆಗೂ ಇಬ್ಬರಿಗೂ ಸಮಯ ದೊರಕಿಲ್ಲವಾದರೂ, ಗುರುವಾರ ದೆಹಲಿಯಲ್ಲಿ ಇರಲಿರುವ ರಾಹುಲ್ ಗಾಂಧಿ ಅವರು ಇಬ್ಬರನ್ನು ಪ್ರತ್ಯೇಕವಾಗಿ ಭೇಟಿಯಾಗಲು ಸಮಯ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

    ಒಂದೊಮ್ಮೆ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾದರೆ ರಾಜ್ಯ ನಾಯಕತ್ವ ವಿಚಾರ ಪದೇ ಪದೇ ಪ್ರಸ್ತಾಪವಾಗುತ್ತಿರುವುದು, ಮಠಾಧೀಶರು, ಶಾಸಕರಿಂದ ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳು, ಇಂತಹ ಘಟನೆಗಳಿಂದ ಆಡಳಿತಶಾಹಿ ನಿಯಂತ್ರಣ ತಪ್ಪುವ ಭೀತಿ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ.

   ಜೊತೆಗೆ ಇಂತಹ ಪ್ರವೃತಿಗೆ ಕಡಿವಾಣ ಹಾಕುವಂತೆ ಕೋರುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ಡಿ.ಕೆ. ಶಿವಕುಮಾರ್ ಅವರು ರಾಹುಲ್ ಅವರನ್ನು ಭೇಟಿಯಾದರೆ ಯಾವ ವಿಚಾರ ಚರ್ಚಿಸುವರು ಎಂಬದು ತೀವ್ರ ಕುತೂಹಲ ಮೂಡಿಸಿದೆ. ಸುರ್ಜೆವಾಲಾ ಅವರೊಂದಿಗಿನ ಸಭೆಯಲ್ಲಿ ಮುಖ್ಯ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಖಾಲಿ ಇರುವ ನಾಲ್ಕು ಪರಿಷತ್‌ ಸದಸ್ಯರ ನೇಮಕದ ಹೆಸರುಗಳನ್ನು ಅಂತಿಮಗೊಳಿಸುವ ಬಗ್ಗೆ ಚರ್ಚಿಸಲಿದ್ದಾರೆ. ಜೊತೆಗೆ ಖಾಲಿಯಿರುವ ಎಂಟು ನಿಗಮ-ಮಂಡಳಿ ಅಧ್ಯಕ್ಷರ ಹುದ್ದೆ ಹಾಗೂ ಉಪಾಧ್ಯಕ್ಷರು ಸೇರಿ ಒಟ್ಟು 40 ಹುದ್ದೆಗಳ ನೇಮಕದ ಬಗ್ಗೆ ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ,

   ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಪಾಯಿಂಟ್ಮೆಂಟ್ ಸಿಕ್ಕರೆ ರಾಹುಲ್ ಗಾಂಧಿಯವರನ್ನು ಭೇಟಿಯಾಗುವುದಾಗಿ ತಿಳಿಸಿದರು.

   ರಣದೀಪ್ ಸಿಂಗ್ ಸುರ್ಜೇವಾಲಾ (ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ) ನವದೆಹಲಿಗೆ ಆಗಮಿಸುತ್ತಾರೆ. ದೆಹಲಿಯಲ್ಲಿ ಅವರನ್ನು ಭೇಟಿಯಾಗಿ ನಾಲ್ಕು ಎಂಎಲ್‌ಸಿ ಸ್ಥಾನಗಳಿಗೆ ನಾಮನಿರ್ದೇಶನ ಮತ್ತು ನಿಗಮ, ಮಂಡಳಿ ನೇಮಕಾತಿಗಳ ಬಗ್ಗೆ ನಾವು ಚರ್ಚಿಸುತ್ತೇವೆ. ರಾಜ್ಯದ ಸಮಸ್ಯೆಗಳ ಕುರಿತು ಮಾತುಕತೆ ನಡೆಸಲು ಪ್ರಧಾನಿ ಮೋದಿಯವರೊಂದಿಗೆ ಸಮಯ ಕೋರಿದ್ದೇನೆ ಎಂದು ಹೇಳಿದರು.

    ಡಿಕೆ.ಶಿವಕುಮಾರ್ ಅವರು ಮಾತನಾಡಿ, ಮುಂದಿನ ವಿಧಾನಸಭಾ ಅಧಿವೇಶನಕ್ಕೂ ಮುನ್ನ ನಾಲ್ಕು ಎಂಎಲ್‌ಸಿಗಳ ನಾಮನಿರ್ದೇಶನ ನಡೆಯಲಿದೆ ಎಂದು ಹೇಳಿದರು.ನಾನು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿಲ್ಲ, ಆದರೆ, ಭೇಟಿಗೆ ಸಮಯ ಕೇಳಿದ್ದೇನೆ ಎಂದು ಹೇಳಿದರು. ರಾಹುಲ್ ಬುಧವಾರ ಸಂಜೆ ದೆಹಲಿಗೆ ಆಗಮಿಸಿದ್ದು, ಇಬ್ಬರೂ ನಾಯಕರನ್ನು ಭೇಟಿಯಾಗುವ ಸಾಧ್ಯತೆಗಳಿವೆ.ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಜೊತೆ ಯಾವುದೇ ಚರ್ಚೆ ನಡೆಸಿಲ್ಲ. ಬೆಂಗಳೂರಿನಲ್ಲಿ ಕೆಲವು ರಸ್ತೆ ಅಗಲೀಕರಣ ಯೋಜನೆಗಳಿಗೆ ರಕ್ಷಣಾ ಭೂಮಿ ಅಗತ್ಯವಿರುವುದರಿಂದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲು ನಾವು ದೆಹಲಿಗೆ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭೇಟಿಯಾದ ಡಿ.ಕೆ ಶಿವಕುಮಾರ್; ಮುಖ್ಯಮಂತ್ರಿ ಬದಲಾವಣೆ ಊಹಾಪೋಹ ತೀವ್ರ ದೆಹಲಿಯಲ್ಲಿರುವ ಡಿಕೆ.ಶಿವಕುಮಾರ್ ಅವರು, ಬುಧವಾರ ಬೆಳಿಗ್ಗೆ ಸೋನಿಯಾ ಗಾಂಧಿ ನಿವಾಸದಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಿದರು. ಈ ಭೇಟಿ ಊಹಾಪೋಹಗಳಿಗೆ ಇಂಬು ನೀಡಿದಂತಾಗಿದೆ.

    ಕುತೂಹಲಕಾರಿ ವಿಚಾರವೆಂದರೆ, ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಇಬ್ಬರು ದೆಹಲಿಗೆ ಭೇಟಿ ನೀಡಿರುವ ನಡುವಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿರುವುದು. ಇದರರ್ಥ ರಾಹುಲ್ ಗಾಂಧಿ ಅವರು, ನಾಯಕತ್ವದಲ್ಲಿ ಯಾವುದೇ ಬದಲಾವಣೆ ಬಗ್ಗೆ ನಿರ್ಧಾರ ಕೈಗೊಳ್ಳುವ ಅಥವಾಕ ನಾಯಕರನ್ನು ಸಮಾಧಾನ ಪಡಿಸುವ ಯತ್ನ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.

    ಇನ್ನು ಈಗಾಗಲೇ ಶಾಸಕರೊಂದಿಗೆ ಎರಡು ಹಂತದಲ್ಲಿ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿರುವ ಸುರ್ಜೇವಾಲಾ ಅವರು ರಾಹುಲ್ ಗಾಂಧಿಯವರಿಗೆ ವರದಿ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ.ಇನ್ನು ಸುರ್ಜೇವಾಲ ನಡೆಸಿದ ಸಭೆ ವೇಳೆ ಕೆಲ ನಾಯಕರು ಮುಖ್ಯಮಂತ್ರಿ ಬದಲಾವಣೆ ಬಯಸಿದ್ದರೆ, ಇನ್ನು ಕೆಲವರು ಸಿದ್ದರಾಮಯ್ಯ ನಾಯಕತ್ವ ಮುಂದುವರೆಯಬೇಕೆಂದು ಬಯಸಿದ್ದಾರೆಂದು ಮೂಲಗಳು ತಿಳಿಸಿವೆ.ನಿನ್ನೆಯಷ್ಟೇ ಸುರ್ಜೇವಾಲಾ ಅವರು ಬೇಲೂರು ಗೋಪಾಲಕೃಷ್ಣ ಮತ್ತು ಬಿ.ಕೆ. ಸಂಗಮೇಶ್ ಅವರನ್ನು ಭೇಟಿ ಮಾಡಿದ್ದು, ನಾಯಕರು ಸಚಿವ ಸಂಪುಟ ಸೇರ್ಪಡೆಗೊಳ್ಳುವ ಬಯಕೆ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.ಇದಲ್ಲದೆ ಶಾಸಕರಾದ ಯು.ಬಿ. ಬಣಕರ್, ಪ್ರಕಾಶ್ ಕೋಳಿವಾಡ್ ಸೇರಿದಂತೆ ಇತರರ ಕುಂದುಕೊರತೆಗಳನ್ನು ಆಲಿಸಿದ್ದಾರೆಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link